ಆರ್ಥಿಕ ಮಟ್ಟ ಸುಧಾರಣೆಗೆ ನರೇಗಾ ಸಹಕಾರಿ: ಡಾ.ಗಿರೀಶ್ ಬದೋಲೆ

| Published : Feb 04 2024, 01:32 AM IST

ಆರ್ಥಿಕ ಮಟ್ಟ ಸುಧಾರಣೆಗೆ ನರೇಗಾ ಸಹಕಾರಿ: ಡಾ.ಗಿರೀಶ್ ಬದೋಲೆ
Share this Article
  • FB
  • TW
  • Linkdin
  • Email

ಸಾರಾಂಶ

ಬೀದರ್‌ ತಾಲೂಕಿನ ಚಟ್ನಳ್ಳಿ ಗ್ರಾಮದಲ್ಲಿ ನರೇಗಾ ದಿನಾಚರಣೆ ನಿಮಿತ್ತ ಆರೋಗ್ಯ ತಪಾಸಣೆ ಹಾಗೂ ಕಾರ್ಮಿಕರಿಗೆ ಸನ್ಮಾನ ಕಾರ್ಯಕ್ರಮಕ್ಕೆ ಜಿಪಂ ಸಿಇಒ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಬೀದರ್‌

ನರೇಗಾ ಯೋಜನೆಯು ಗ್ರಾಮೀಣ ಭಾಗದ ಜನರಿಗೆ ಜೀವನದ ಆರ್ಥಿಕ ಮಟ್ಟ ಸುಧಾರಿಸಿಕೊಳ್ಳಲು ಸಹಕಾರಿಯಾಗಲಿದೆ ಎಂದು ಬೀದರ್‌ ಜಿಪಂ ಸಿಇಒ ಡಾ. ಗಿರೀಶ್ ದಿಲೀಪ್ ಬದೋಲೆ ಹೇಳಿದರು.

ಬೀದರ್ ತಾಲೂಕಿನ ಚಟ್ನಳ್ಳಿ ಗ್ರಾಮದಲ್ಲಿ ಆಯೋಜಿಸಿದ ನರೇಗಾ ದಿನಾಚರಣೆ ಅಂಗವಾಗಿ ಆರೋಗ್ಯ ತಪಾಸಣೆ ಹಾಗೂ ನರೇಗಾ ಕೆಲಸದಲ್ಲಿ ನೂರು ದಿವಸ ಪೂರೈಸಿದ ಕಾರ್ಮಿಕರ ಸನ್ಮಾನ ಕಾರ್ಯಕ್ರಮವನ್ನು ವಿಡಿಯೊ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

ನರೇಗಾ ಯೋಜನೆಯ ಲಾಭ ಪಡೆದಲ್ಲಿ ಗ್ರಾಮೀಣ ಭಾಗದ ಜನರು ಪಟ್ಟಣಗಳಿಗೆ ಗುಳೆ ಹೋಗುವುದನ್ನು ತಪ್ಪಿಸಬಹುದು ಎಂದು ಹೇಳಿದರು.

ಬೀದರ್‌ ತಾಪಂ ಅಧಿಕಾರಿ ಕಿರಣ ಪಾಟೀಲ್ ಮಾತನಾಡಿ, ನರೇಗಾ ಕೂಲಿ ಕಾರ್ಮಿಕರ ಆರೋಗ್ಯದ ದೃಷ್ಠಿಯಿಂದ ಇಂದು ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಲಾಗಿದೆ. ನರೇಗಾ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಕೂಲಿ ಕಾರ್ಮಿಕರು ಜೀವ ಹಾಗೂ ಆರೋಗ್ಯ ವಿಮೆಗಳಾದ ಪ್ರಧಾನಮಂತ್ರಿ ಜೀವನ ಭೀಮಾ ಜ್ಯೋತಿ ಹಾಗೂ ಪ್ರಧಾನ ಮಂತ್ರಿ ಸುರಕ್ಷಾ ಯೋಜನೆಯ ಲಾಭ ಪಡೆಯಬೇಕು ಎಂದರು.

ನರೇಗಾ ಯೋಜನೆಯ ಸಹಾಯಕ ನಿರ್ದೇಶಕಿ ಲಕ್ಷ್ಮೀ ಬಿರಾದಾರ ಮಾತನಾಡಿ, ಗ್ರಾಮೀಣ ಭಾಗದ ಜನರಿಗೆ ತಮ್ಮ ಗ್ರಾಮಗಳಲ್ಲಿಯೇ ಉದ್ಯೋಗ ಅವಕಾಶ ಕಲ್ಪಿಸಬೇಕು ಎನ್ನುವ ಉದ್ದೇಶದಿಂದ ನರೇಗಾ ಯೋಜನೆ ಜಾರಿಗೆ ತರಲಾಗಿದೆ ಎಂದರು.

ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಮಹಾದೇವಿ, ಪಿಡಿಒ ಪ್ರೇಮಿಲಾ, ಗ್ರಾಪಂ ಕಾರ್ಯದರ್ಶಿ ಬಾಲಾಜಿ, ಎಸ್‌ಡಿಎ ಸಂತೋಷಕುಮಾರ ಮೆತ್ರೆ, ಟಿಸಿ ಅಮರ್ ಬಿರಾದಾರ್, ನಾಗಣ್ಣ, ಜಿಪಂ ಆರೋಗ್ಯ ಸಂಯೋಜಕರಾದ ಶಿವಕುಮಾರ್ ಎದ್ಲಾಪುರೆ, ಐಇಸಿ ಸಂಯೋಜಕ ಸತ್ಯಜೀತ ನಿಡೊದಕರ್ ಸೇರಿದಂತೆ ಗ್ರಾಪಂ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು. ಇದೆ ಸಂದರ್ಭದಲ್ಲಿ ನರೇಗಾ ಕೆಲಸದಲ್ಲಿ ನೂರು ದಿವಸ ಪೂರೈಸಿದ ಕಾರ್ಮಿಕರ ಸನ್ಮಾನ ಕಾರ್ಯಕ್ರಮ ಜರುಗಿತು.