, ಸಮಾಜದಲ್ಲಿ ಗುರುತಿಸಿಕೊಳ್ಳಬೇಕಾದರೆ ಸಂಘಟನೆ ಮತ್ತು ಸಂಘದ ಜತೆಗೆ ಪಾಲ್ಗೊಳ್ಳುವುದರ ಮೂಲಕ ಮತ್ತು ಹೋರಾಟ ಮನೋಭಾವ ಬೆಳೆಯಬೇಕು.
ಗದಗ: ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಂಘ, ಸಂಘಟನೆ ಮುಖ್ಯ. ಹೋರಾಟದಿಂದ ಮಾತ್ರ ಹಕ್ಕುಗಳನ್ನು ಪಡೆದುಕೊಳ್ಳಲು ಸಾಧ್ಯ ಎಂದು ರಾಜ್ಯ ನೇಕಾರ ಸೇವಾ ಸಂಘದ ರಾಜ್ಯಾಧ್ಯಕ್ಷ ಶಿವಲಿಂಗ ಟರ್ಕಿ ತಿಳಿಸಿದರು.
ಬೆಟಗೇರಿಯಲ್ಲಿ ನಡೆದ ರಾಜ್ಯ ನೇಕಾರ ಸೇವಾ ಸಂಘದ 12ನೇ ವಾರ್ಷಿಕೋತ್ಸವ ಹಾಗೂ ಕಾರ್ಮಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, 1886ರ ಮೇ 1ರಂದು ಚಿಕ್ಯಾಗೋದಲ್ಲಿ ನಡೆದ ಮೊದಲ ಅಂತಾರಾಷ್ಟ್ರೀಯ ಕಾರ್ಮಿಕ ದಿನವನ್ನು ಆಚರಿಸಲಾಯಿತು. ಇದು 140ನೇ ಅಂತಾರಾಷ್ಟ್ರೀಯ ಕಾರ್ಮಿಕ ದಿನಾಚರಣೆ. ಹಾಗೆ ಭಾರತದಲ್ಲಿ 1923ರ ಮೇ 1ರಂದು ಚೆನ್ನೈನಲ್ಲಿ ಮೊದಲ ರಾಷ್ಟ್ರೀಯ ಕಾರ್ಮಿಕ ದಿನವನ್ನು ಆಚರಿಸಲಾಯಿತು ಎಂದರು.ರಾಜ್ಯ ನೇಕಾರ ಸೇವಾ ಸಂಘದ ನಿರಂತರ ಹೋರಾಟದ ಫಲವಾಗಿ ನೇಕಾರ ಸನ್ಮಾನ ಯೋಜನೆಯಲ್ಲಿ 10 ಎಚ್ಪಿವರೆಗೆ ಉಚಿತ ವಿದ್ಯುತ್ ಮತ್ತು ಅಸಂಘಟಿತ ವಲಯದಲ್ಲಿ ನೇಕಾರರನ್ನು ಗುರುತಿಸಿರುವುದು. ಈ ಎಲ್ಲ ಬೆಳವಣಿಗೆಗಳು ಸಾಕಷ್ಟು ಹೋರಾಟದಿಂದ ಪಡೆದುಕೊಂಡಿದ್ದೇವೆ ಎಂದರು.
ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಡಾ. ನಂದಾ ಹಣಬರಟ್ಟಿ ಮಾತನಾಡಿ, ಸಮಾಜದಲ್ಲಿ ಗುರುತಿಸಿಕೊಳ್ಳಬೇಕಾದರೆ ಸಂಘಟನೆ ಮತ್ತು ಸಂಘದ ಜತೆಗೆ ಪಾಲ್ಗೊಳ್ಳುವುದರ ಮೂಲಕ ಮತ್ತು ಹೋರಾಟ ಮನೋಭಾವ ಬೆಳೆಯಬೇಕು. ಸರ್ಕಾರದ ಸೌಲಭ್ಯಗಳನ್ನು ಸಂಬಂಧಪಟ್ಟ ಇಲಾಖೆಗಳ ಸೌಲಭ್ಯಗಳನ್ನು ಪಡೆದುಕೊಂಡು ಆರ್ಥಿಕವಾಗಿ ಸದೃಢರಾಗಬೇಕು ಎಂದರು.ನಿವೃತ್ತ ಕಾರ್ಮಿಕ ಅಧಿಕಾರಿ ಚಂದ್ರಶೇಖರ್ ಐಲಿ ಮಾತನಾಡಿ, ನಮಿಸುವ ಕೈಗಳಿಗಿಂತ ದುಡಿಯುವ ಕೈಗಳು ಶ್ರೇಷ್ಠ ಎಂಬಂತೆ ಕೆಲಸ ಮಾಡಿದಾಗ ಮಾತ್ರ ಯಶಸ್ಸು ಕಾಣಬಹುದು ಎಂದರು.
ಈ ವೇಳೆ ಅಸಂಘಟಿತ ವಲಯದ ಕಾರ್ಮಿಕರನ್ನು ಸನ್ಮಾನಿಸಲಾಯಿತು. ನೀಲಕಂಠೇಶ್ವರ ಮಠದ ಗುರುಗಳು ಸಾನ್ನಿಧ್ಯ ವಹಿಸಿದ್ದರು.ಬೆಟಗೇರಿ ಪೊಲೀಸ್ ಠಾಣೆಯ ಪಿಎಸ್ಐ ಲಕ್ಷ್ಮಣ್ ಆರಿ, ರಮೇಶ್ ಹತ್ತಿಕಾಳ, ಮಾಧುಸ ಮೆರವಡೆ, ರಾಜು ದಡಿ, ಬಸವರಾಜ ಕರಿ, ಕೃಷ್ಣ ಕೊಪ್ಪರದ, ವಿರುಪಾಕ್ಷಿ ಐಲಿ, ನಾರಾಯಣಪ್ಪ, ಮಲ್ಲಿಕಾರ್ಜುನ ಗಡಿಗೆ ಹಾಗೂ ಇತರರು ಇದ್ದರು. ಶಂಕರ್ ಕಾಕಿ ನಿರೂಪಿಸಿದರು. ತಾರಾ ಐಲಿ ವಂದಿಸಿದರು.