ಸಾರಾಂಶ
ಕೊರಟಗೆರೆ: ಪ್ರತಿ ವರ್ಷ ಪ್ರಗತಿ ಪರ ರೈತರಿಗೆ ಉತ್ತಮವಾದ ಬೀಜ, ಗೊಬ್ಬರವನ್ನು ವಿತರಿಸುವ ಜವಾಬ್ದಾರಿ ಸರ್ಕಾರದ್ದಾಗಿದೆ. ಈ ಬಾರಿ ಉತ್ತಮ ಮಳೆಯಾಗಿದ್ದು, ಬಿತ್ತನೆ ಬೀಜವನ್ನು ಜಿಲ್ಲಾದ್ಯಂತ ವಿತರಿಸಲಾಗುತ್ತಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.
ತಾಲೂಕಿನಲ್ಲಿ ಜಿಪಂ, ಕೃಷಿ ಇಲಾಖೆಯಿಂದ ಹಮ್ಮಿಕೊಂಡಿದ್ದ ಮುಂಗಾರು ಬಿತ್ತನೆ ಬೀಜ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಲ್ಲೇಶಪುರದ ರೈತ ಚನ್ನಪ್ಪನವರ ಹೊಲದಲ್ಲಿ ಟ್ರ್ಯಾಕ್ಟರ್ ಚಲಾಯಿಸಿ ಜಮೀನು ಉಳುಮೆ ಮಾಡಿ ಮುಂಗಾರು ಬಿತ್ತನೆ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.
ತುಮಕೂರು ಜಿಲ್ಲೆಯಲ್ಲಿ 3.5 ಲಕ್ಷ ಹೇಕ್ಟೆರ್ ಭೂಮಿ ಕೃಷಿಗೆ ಯೋಗ್ಯವಾಗಿದ್ದು, ಈಗ ಬಿತ್ತನೆ ಕಾರ್ಯ ಪ್ರಾರಂಭವಾಗಿದೆ. ರೈತರು ಕೃಷಿ ಚಟುವಟಿಕೆಯಲ್ಲಿ ತೋಡಗಿ ಬೆಳೆ ಬೆಳೆದು ಸಮಾಜದ ಹಸಿವನ್ನು ನೀಗಿಸಿಬೇಕಿದೆ. ಕೃಷಿ ಉತ್ತಮ ಲಾಭದಾಯಕ ಕೆಲಸವಲ್ಲದಿದ್ದರೂ ಜೀವ ಸಂಕುಲದ ಉಳಿವಿಗೆ ಅನಿವಾರ್ಯವಾಗಿದೆ. ಕೃಷಿಗೆ ಹಿನ್ನೆಡೆಯಾಗುತ್ತಿರುವುದು ಕೃಷಿ ಕುಟುಂಬದಲ್ಲಿ ಓದಿದ ವಿದ್ಯಾರ್ಥಿಗಳು ದುಡಿಮೆಗೆ ನಗರ ಸೇರುತ್ತಿದ್ದಾರೆ. ಯುವಕರು ಅದೇ ಹೊರಗಡೆಯ ಕೆಲಸದ ಶ್ರಮ ಕೃಷಿ ಕಾರ್ಯದ ಮೇಲೆ ಹಾಕಿದರೆ ಇನ್ನು ಲಾಭ ಗಳಿಸಬಹುದು ಎಂದರು.
ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಪಂ ಸಿಇಒ ಜಿ. ಪ್ರಭು, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಅಶೋಕ್, ಕೃಷಿ ಇಲಾಖೆಯ ಜೆ.ಡಿ. ರಮೇಶ್, ಅಶೋಕ್, ಚಂದ್ರಕುಮಾರ, ತಹಸೀಲ್ದಾರ್ ಮಂಜುನಾಥ್, ಇಒ ಅಪೂರ್ವ, ತಾಲೂಕು ಕೃಷಿ ಇಲಾಖೆ ಅಧಿಕಾರಿ ರುದ್ರಪ್ಪ, ವಿಜಯನರಸಿಂಹ ಹಾಜರಿದ್ದರು.
ಮದ್ಯವರ್ತಿಗಳಿಂದ ರೈತರಿಗೆ ತೊಂದರೆ: ಮದ್ಯವರ್ತಿಗಳಿಂದ ಇತ್ತೀಚೆಗೆ ರೈತರಿಗೆ ತೊಂದರೆಯಾಗುತ್ತಿದೆ. ರೈತರು ಬೆಳೆದ ಆಹಾರ ಪದಾರ್ಥಗಳನ್ನು ಮದ್ಯವರ್ತಿಗಳು ಕಡಿಮೆ ಬೆಲೆಗೆ ತೆಗೆದುಕೊಂಡು ಹೆಚ್ಚಿನ ಬೆಲೆಗೆ ಮಾರುತ್ತಿದ್ದಾರೆ. ಇದರ ಅನುಭವ ನೂರಾರು ಕ್ವಿಂಟಲ್ರಾಗಿ ಬೆಳೆದಾಗ ನನಗೂ ಆಗಿದೆ. ಇದನ್ನು ಎಪಿಎಂಸಿಯಲ್ಲಿ ತಪ್ಪಿಸಲು ವಿಶೇಷ ಕಾಯ್ದೆ ತರಬೇಕಿದೆ. ಅಧಿಕಾರಿಗಳು ರೈತರಿಗೆ ಬೆಳೆ ವಿಮೆಯನ್ನು ಕಡ್ಡಾಯವಾಗಿ ಮಾಡಿಸಬೇಕು. ಅತಿವೃಷ್ಟಿ, ಅನಾವೃಷ್ಟಿಯದಾಗ ರೈತರಿಗೆ ನೆರವಾಗುತ್ತದೆ ಎಂದು ಹೇಳಿದರು.