ಸಾರಾಂಶ
ವಿಜ್ಞಾನ, ಕಲಾ, ವಾಣಿಜ್ಯ ವಿಭಾಗ ಪದವಿ ಪೂರ್ವ ಕಾಲೇಜಿನಲ್ಲಿದೆ. ದಾಖಲಾತಿ ಕೊರತೆ ಕಾಡದಂತೆ ಎಚ್ಚರ ವಹಿಸಬೇಕು. ಸರ್ಕಾರ ಶಿಕ್ಷಣಕ್ಕಾಗಿ ಎಲ್ಲ ರೀತಿಯ ಸವಲತ್ತು, ಸಲಕರಣೆ, ಸೌಲಭ್ಯಗಳನ್ನು ಮಕ್ಕಳಿಗೆ, ಶಿಕ್ಷಕರಿಗೆ, ಉಪನ್ಯಾಸಕರಿಗೆ ನೀಡುತ್ತಿದೆ. ಸರ್ಕಾರಿ ಶಾಲೆ ಉಳಿಸಿ, ಬೆಳೆಸುವುದು ತಮ್ಮಕರ್ತವ್ಯ ಎಂಬುದನ್ನು ಮರೆಯಬಾರದು
ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಬೋಧಕ ವೃಂದವನ್ನು ಮನವೊಲಿಸುವ ಮೂಲಕ ಸರ್ಕಾರಿ ಶಾಲೆ, ಕಾಲೇಜು ಉಳಿಸಲು ಗಣನೀಯವಾಗಿ ಮಕ್ಕಳ ದಾಖಲಾತಿಯನ್ನು ಹೆಚ್ಚಿಸಬೇಕು ಎಂದು ಶಾಸಕ ಎಚ್.ಟಿ.ಮಂಜು ತಿಳಿಸಿದರು.ಪಟ್ಟಣದ ಕೆಪಿಎಸ್ ಕಾಲೇಜು ವಿಭಾಗಕ್ಕೆ ಶಾಲಾ ಶಿಕ್ಷಣ ಇಲಾಖೆ ಕಾಲೇಜು ಮೂಲ ಸಮಸ್ಯೆ ನಿವಾರಣೆಗಾಗಿ 1.2 ಕೋಟಿ ರು. ಅನುದಾನದಲ್ಲಿ ನಿರ್ಮಿಸುವ ಹೈಟೆಕ್ ಲ್ಯಾಬ್ ಕಟ್ಟಡಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಕೆಪಿಎಸ್ ಶಿಕ್ಷಣ ವಿಭಾಗಕ್ಕೆ ಕಿಕ್ಕೇರಿಯಲ್ಲಿ ವಿಶಾಲ ಮೈದಾನವಿದೆ. ಎಲ್ಲ ರೀತಿಯ ಸೌಲಭ್ಯವನ್ನು ಹೊಂದಿದೆ. ಗುಣಮಟ್ಟದ ಶಿಕ್ಷಣ ನೀಡಿ ಮಕ್ಕಳ ಉತ್ತಮ ಭವಿಷ್ಯಕ್ಕೆ ಶ್ರಮಿಸಬೇಕು. ಶಿಕ್ಷಣಕ್ಕೆ ಇರುವ ಸೌಲಭ್ಯಗಳ ಬಗ್ಗೆ ಪೋಷಕರಿಗೆ ತಿಳಿಸಿ, ಮನವೊಲಿಸಿ ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸಲು ವಿಶೇಷ ಆಂದೋಲನ ನಡೆಸುವಂತೆ ಕರೆ ನೀಡಿದರು.ಬಡಮಕ್ಕಳ ಶಿಕ್ಷಣಕ್ಕೆ ಅಕ್ಷಯಪಾತ್ರೆ ಸರ್ಕಾರಿ ಶಾಲೆಯಾಗಿದೆ ಎಂಬುದನ್ನು ಮನದಟ್ಟು ಮಾಡಬೇಕು. ಶಿಕ್ಷಣದಿಂದ ಮಕ್ಕಳು ವಂಚಿತರಾಗದಂತೆ ಎಚ್ಚರಿಕೆ ವಹಿಸಬೇಕು. ಸರ್ಕಾರ ಎಲ್ಲ ರೀತಿಯ ಸೌಲಭ್ಯಗಳನ್ನು ಪುಕ್ಕಟೆಯಾಗಿ ನೀಡುತ್ತಿದೆ. ಸವಲತ್ತುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ವಿಜ್ಞಾನ, ಕಲಾ, ವಾಣಿಜ್ಯ ವಿಭಾಗ ಪದವಿ ಪೂರ್ವ ಕಾಲೇಜಿನಲ್ಲಿದೆ. ದಾಖಲಾತಿ ಕೊರತೆ ಕಾಡದಂತೆ ಎಚ್ಚರ ವಹಿಸಬೇಕು. ಸರ್ಕಾರ ಶಿಕ್ಷಣಕ್ಕಾಗಿ ಎಲ್ಲ ರೀತಿಯ ಸವಲತ್ತು, ಸಲಕರಣೆ, ಸೌಲಭ್ಯಗಳನ್ನು ಮಕ್ಕಳಿಗೆ, ಶಿಕ್ಷಕರಿಗೆ, ಉಪನ್ಯಾಸಕರಿಗೆ ನೀಡುತ್ತಿದೆ. ಸರ್ಕಾರಿ ಶಾಲೆ ಉಳಿಸಿ, ಬೆಳೆಸುವುದು ತಮ್ಮಕರ್ತವ್ಯ ಎಂಬುದನ್ನು ಮರೆಯಬಾರದು ಎಂದು ಮನವಿ ಮಾಡಿದರು.ಈ ವೇಳೆ ಎಸ್ಡಿಎಂಸಿ ಅಧ್ಯಕ್ಷ ಐಕನಹಳ್ಳಿ ಕೃಷ್ಣೇಗೌಡ, ಜೆಡಿಎಸ್ ಹೋಬಳಿ ಅಧ್ಯಕ್ಷ ಕಾಯಿ ಮಂಜೇಗೌಡ, ಗ್ರಾಪಂ ಅಧ್ಯಕ್ಷೆ ಭಾರತಿ ಪ್ರಕಾಶ್, ಗ್ರಾಪಂ ಸದಸ್ಯ ಎಸ್.ಕೆ. ಬಾಲಕೃಷ್ಣ, ಮುಖಂಡ ಶೇಖರ್, ಉಪನ್ಯಾಸಕರಾದ ದೊರೆಸ್ವಾಮಿ, ಕುಮಾರಸ್ವಾಮಿ, ವಿನಾಯಕ, ಎಸ್.ಎಂ. ಬಸವರಾಜು ಮತ್ತಿತರರಿದ್ದರು.