ಕನ್ನಡಪ್ರಭ ವಾರ್ತೆ ಕೊರಟಗೆರೆ

ತಿಗಳ ಸಮುದಾಯದ ಆರಾಧ್ಯ ದೈವ ಶ್ರೀ ಅಗ್ನಿ ಬನ್ನಿರಾಯಸ್ವಾಮಿಯಂತಹ ಮಹಾನ್ ದಾರ್ಶನಿಕರ ಜೀವನಾದರ್ಶಗಳು ಮನುಕುಲದ ಏಳಿಗೆಗೆ ದಾರಿದೀಪವಾಗಿದೆ ಎಂದು ಕೊರಟಗೆರೆ ಪ್ರಭಾರ ಗ್ರೇಡ್೨ ತಹಸೀಲ್ದಾರ್ ಎ.ಜೆ.ರಾಜು ತಿಳಿಸಿದರು. ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ತಾಲೂಕು ಆಡಳಿತ ಹಾಗೂ ತಾಲೂಕು ಅಗ್ನಿವಂಶ ಕ್ಷತ್ರಿಯ ತಿಗಳ ಸಂಘದ ಸಹಯೋಗದೊಂದಿಗೆ ಏರ್ಪಡಿಸಿದ್ದ ಶ್ರೀ ಅಗ್ನಿ ಬನ್ನಿರಾಯಸ್ವಾಮಿ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಹಿಂದೂ ಧರ್ಮದ ೯ ಪುರಾಣಗಳಲ್ಲಿ ಅಗ್ನಿ ಬನ್ನಿರಾಯರ ಮಹಿಮೆಯನ್ನು ವರ್ಣಿಸಲಾಗಿದೆ. ತಿಗಳ ಸಮುದಾಯದವರು ಶ್ರಮ ಜೀವನಕ್ಕೆ ಹೆಸರುವಾಸಿಯಾಗಿದ್ದು, ಕೃಷಿ ಮಾಡುವ ಮೂಲಕ ಹೂವು, ಹಣ್ಣು, ತರಕಾರಿ ಬೆಳೆದು ಮಾರಾಟ ಮಾಡಿ ಬದುಕು ಕಟ್ಟಿಕೊಂಡಿದ್ದಾರೆ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಬೇಕು. ತಾಲೂಕು ತಿಗಳ ಸಂಘ ಸಮಾಜದ ಯುವಕರನ್ನು ಶೈಕ್ಷಣಿಕವಾಗಿ ಅಭಿವೃದ್ದಿಗೆ ವಿದ್ಯಾರ್ಥಿನಿಲಯ ನಿರ್ಮಾಣಕ್ಕೆ ಸರ್ಕಾರದಿಂದ ಜಮೀನು ಮಂಜೂರಿಗೆ ಮನವಿ ಸಲ್ಲಿಸಿದ್ದು ಮನವಿಯೊಂದಿಗೆ ಸರ್ಕಾರಕ್ಕೆ ಕಡತ ಕಳುಹಿಸುವ ಕಾರ್ಯಮಾಡುವುದಾಗಿ ಭರವಸೆ ನೀಡಿದರು. ತಿಗಳ ಸಮುದಾಯದ ಮುಖಂಡ ಹಾಗೂ ತಾಲೂಕು ರೈತ ಸಂಘದ ಅಧ್ಯಕ್ಷ ಸಿದ್ದರಾಜು ಮಾತನಾಡಿ, ತಿಗಳ ಸಮುದಾಯ ರಾಜ್ಯದಲ್ಲಿ ಲಕ್ಷಾಂತರ ಜನರನ್ನು ಹೊಂದಿದ್ದು ಕೊರಟಗೆರೆ ತಾಲೂಕಿನಲ್ಲಿ ಸುಮಾರು ೨೫ ಸಾವಿರಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದು ಆರ್ಥಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಹಿಂದುಳಿದಿರುವ ತಿಗಳ ಸಮುದಾಯಕ್ಕೆ ಯಾವುದೇ ಸವಲತ್ತು ನೀಡಿಲ್ಲ. ಸರ್ಕಾರ ಹಿಂದುಳಿದ ವರ್ಗದ ತಿಗಳ ಸಮುದಾಯದ ಅಭಿವೃದ್ದಿಗೆ ಅಹಿಂದ ಬಗ್ಗೆ ಮಾತನಾಡುವ ರಾಜ್ಯದ ಮುಖ್ಯಮಂತ್ರಿಗಳು ತಿಗಳ ಸಮುದಾಯದ ಅಭಿವೃದಿಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ತಾಲೂಕು ಅಗ್ನಿವಂಶ ಕ್ಷತ್ರಿಯ ತಿಗಳ ಸಂಘದ ಅಧ್ಯಕ್ಷ ಮಂಜುನಾಥ್ ಮಾತನಾಡಿ, ತಿಗಳ ಸಮಾಜದ ಮೂಲ ಪುರುಷ ಶ್ರಮ, ಸಂಸ್ಕೃತಿಯ ಸಂಕೇತವಾದ ಅಗ್ನಿ ಬನ್ನಿರಾಯಸ್ವಾಮಿ ಜಯಂತಿಯನ್ನು ಅಚರಿಸಲಾಗುತ್ತಿದೆ. ಜಯಂತಿಯಂದು ತಿಗಳರ ಸಮುದಾಯದ ಏಳಿಗೆ, ಇತಿಹಾಸ ಮತ್ತು ಆಚಾರ ವಿಚಾರಗಳನ್ನು ಸ್ಮರಿಸುವ ಈ ದಿನವಾಗಿದ್ದು ಕೃಷಿ ಮಾಡಿ ಜೀವನ ನಡೆಸುವ ನಮ್ಮ ತಿಗಳ ಸಮುದಾಯ ಶೈಕ್ಷಣಿಕವಾಗಿ ಹಿಂದುಳಿದಿದ್ದು ಸಮುದಾಯದಲ್ಲಿ ಅನೇಕ ಸಮಸ್ಯಗಳಿದ್ದು ಸರ್ಕಾರಿ ಕಛೆರಿಗಳಿಗೆ ಬಂದಾಗ ಅವರ ಸಮಸ್ಯೆಗಳನ್ನು ಅಧಿಕಾರಿಗಳು ಆಲಿಸಿ ಸ್ಪಂದಿಸಿ ಸಮಸ್ಯಗಳನ್ನು ಬಗೆ ಹರಿಸಬೇಕೆಂದು ಎಂದರು. ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆಯ ಮಂಜುನಾಥ್, ನಕುಲ್, ತಾಲೂಕು ತಿಗಳ ಸಂಘದ ಕಾರ್ಯದರ್ಶಿ ಜಿ.ಟಿ.ರಂಗಣ್ಣ, ಯಜಮಾನ್ ಹನುಮಂತರಾಯಪ್ಪ, ಬಾಲರಾಜು, ಚಂದ್ರಣ್ಣ, ಲಿಂಗಪ್ಪ, ಶ್ರೀರಂಗಯ್ಯ, ಶಿವಣ್ಣ, ರಾಮಣ್ಣ, ಅಣ್ಣೇಕಾರ್ ಚಿಕ್ಕಣ್ಣ, ಪ್ರಕಾಶ್, ಶಶಿಧರ್, ರಾಮಸ್ವಾಮಿ, ಲಕ್ಷ್ಮೀಕಾಂತ, ಕೆ.ಸಿದ್ದರಾಜು, ತುಂಬಾಡಿ ಚಿಕ್ಕತಿಮ್ಮಯ್ಯ, ನರಸಿಂಹ, ಶ್ರೀರಾಮಯ್ಯ, ಮೋಹನ್‌ಕುಮಾರ್, ರಂಗರಾಜು, ವರದರಾಜು ರವಿಕುಮಾರ್ ಸೇರಿದಂತೆ ಇನ್ನಿತರ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.