ಸ್ವಚ್ಛತೆಗೆ ಆದ್ಯತೆ ನೀಡಿ, ಶುದ್ಧ ಕುಡಿಯುವ ನೀರು ಬಳಸಿ

| Published : May 28 2024, 01:08 AM IST

ಸ್ವಚ್ಛತೆಗೆ ಆದ್ಯತೆ ನೀಡಿ, ಶುದ್ಧ ಕುಡಿಯುವ ನೀರು ಬಳಸಿ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ಮುನವಳ್ಳಿ ಫೀರ್‌ ದಿಲಾವರಗೋರಿ ಶಹಾವಲಿಯವರ ಉರುಸು ಸಮಯದಲ್ಲಿ ಗ್ರಾಮದ ಸ್ವಚ್ಛತೆಯ ಬಗ್ಗೆ ಆದ್ಯತೆ ನೀಡುವುದು ಅವಶ್ಯಕವಾಗಿದೆ. ತಮ್ಮ ಇಲಾಖೆಯಿಂದ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಸವದತ್ತಿಯ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಯಶವಂತಕುಮಾರ ಭರವಸೆ ನೀಡಿದರು.

ಕನ್ನಡಪ್ರಭ ವಾರ್ತೆ ಮುನವಳ್ಳಿ

ಫೀರ್‌ ದಿಲಾವರಗೋರಿ ಶಹಾವಲಿಯವರ ಉರುಸು ಸಮಯದಲ್ಲಿ ಗ್ರಾಮದ ಸ್ವಚ್ಛತೆಯ ಬಗ್ಗೆ ಆದ್ಯತೆ ನೀಡುವುದು ಅವಶ್ಯಕವಾಗಿದೆ. ತಮ್ಮ ಇಲಾಖೆಯಿಂದ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಸವದತ್ತಿಯ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಯಶವಂತಕುಮಾರ ಭರವಸೆ ನೀಡಿದರು.

ಯಕ್ಕುಂಡಿ ಗ್ರಾಮದಲ್ಲಿ ಫೀರ್‌ ದಿಲಾವರಗೋರಿ ಶಹಾವಲಿಯವರ ಉರುಸು ಮೇ.28 ರಿಂದ ಪ್ರಾರಂಭಗೊಳ್ಳುವ ನಿಮಿತ್ತ ಗ್ರಾಮ ಪಂಚಾಯತಿ ಸಭಾ ಭವನದಲ್ಲಿ ತಾಲೂಕು ಪಂಚಾಯತಿ ಸವದತ್ತಿ ಮತ್ತು ಆರೋಗ್ಯ ಇಲಾಖೆ ಹಾಗೂ ಗ್ರಾಮ ಪಂಚಾಯತಿ ಯಕ್ಕುಂಡಿ ಸಂಯುಕ್ತ ಆಶ್ರಯದಲ್ಲಿ ಕುಡಿಯುವ ನೀರು ಮತ್ತು ನೈರ್ಮಲ್ಯ ಕುರಿತಾದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಗ್ರಾಮಸ್ಥರು ಕುಡಿಯುವ ನೀರಿನ ಶುದ್ಧತೆ ಕಾಯ್ದುಕೊಳ್ಳಬೇಕು ಮತ್ತು ಆರ್‌ಒ ಘಟಕಗಳಿಂದ ಶುದ್ಧೀಕರಿಸಿದ ನೀರನ್ನು ಬಳಸಬೇಕು ಹಾಗೂ ನೀರನ್ನು ಕಾಸಿ, ಆರಿಸಿ ಕುಡಿಯಬೇಕು ಎಂದು ಮನವಿ ಮಾಡಿದರು.

ತಾಲೂಕು ಆರೋಗ್ಯ ಅಧಿಕಾರಿ ಶ್ರೀಪಾದ ಸಬನೀಸ್‌ ಮಾತನಾಡಿ, ಕಲುಷಿತ ನೀರಿನಿಂದ ಹರಡಬಹುದಾದ ಅತಿಸಾರ, ವಾಂತಿಭೇದಿ, ಕಾಲರಾ, ಡೆಂಘೀ, ಮಲೇರಿಯಾ ದಂತಹ ಸಾಂಕ್ರಾಮಿಕ ಕಾಯಿಲೆಗಳು ಬರದಂತೆ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ವಿವರಿಸಿದರು. ಉರುಸು ಕಾರ್ಯಕ್ರಮ ಮುಗಿಯುವವರೆಗೆ ಆ್ಯಂಬುಲೆನ್ಸ್‌ ಸೇವೆ ಯಕ್ಕುಂಡಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಒದಗಿಸುವ ಭರವಸೆ ನೀಡಿದರು.

ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಂ.ಎಂ.ಅಂಗಡಿ ಮಾತನಾಡಿ, ಕಲುಷಿತ ನೀರು ಮತ್ತು ನೈರ್ಮಲ್ಯದಿಂದಾಗುವ ದುಷ್ಪರಿಣಾಮಗಳ ಬಗ್ಗೆ ತಿಳಿಸಿ, ಅನುಸರಿಸಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

ಯಕ್ಕುಂಡಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ನರಸಾರಡ್ಡಿ ಮಾತನಾಡಿ, ಅತಿಸಾರ, ವಾಂತಿಭೇದಿ ಪ್ರಕಣಗಳು ಕಂಡುಬಂದಲ್ಲಿ ತಕ್ಷಣ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯಲು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ಬಸವರಾಜ ಹೊಂಗಲ ಮತ್ತು ಬಸನಗೌಡ ಪಾಟೀಲ ಗ್ರಾಮದ ಸಮಸ್ಯೆಗಳ ಬಗ್ಗೆ ಚರ್ಚಿಸಿ ಅಧಿಕಾರಿಗಳ ಗಮನ ಸೆಳೆದರು. ಸಮಾರಂಭದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತಿ ಅಧ್ಯಕ್ಷೆ ಪೈರೋಜಾ ಬಾರಿಗಿಡದ ವಹಿಸಿದ್ದರು. ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಮಾಸಾಬಿ ಇಮ್ಮನ್ನವರ, ಗ್ರಾಮದ ಹಿರಿಯರಾದ ಶಂಕರಗೌಡ ಪಾಟೀಲ, ಅಬುಲ್ದ್‌ಖಾದರಜೈಲಾನಿ ಬಾರಿಗಿಡದ, ತಾಲೂಕು ಸಮಾಜ ಕಲ್ಯಾಣ ಅಧಿಕಾರಿಗಳಾದ ಆರ್.ಆರ್.ಕುಲಕರ್ಣಿ, ಸವದತ್ತಿ ಎಇಇ ಬಿ.ವಿ.ಅಯ್ಯನಗೌಡರ, ಕಂದಾಯ ನೀರಿಕ್ಷಕ ಎಸ್. ಎಂ. ಮುದಗಲ್, ಪಿಡಿಒ ವೈ.ಪಿ.ಬೋಳಶೆಟ್ಟಿ, ಗ್ರಾಮ ಪಂಚಾಯತಿ ಆಡಳಿತಾಧಿಕಾರಿ ಮುದಕಪ್ಪ ಕದಂ, ವಿವಿಧ ಇಲಾಖೆಗಳ ಅಧಿಕಾರಿಗಳು, ಯಕ್ಕುಂಡಿ, ಧೂಪದಾಳ, ಕಾರ್ಲಕಟ್ಟಿ, ಕಾರ್ಲಕಟ್ಟಿ ತಾಂಡೆ ಗ್ರಾಮಗಳ ಹಿರಿಯರು, ಸರ್ವ ಗ್ರಾಮ ಪಂಚಾಯತಿ ಸದಸ್ಯರು, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮಸ್ಥರು ಮತ್ತು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ಪ್ರಕಾಶ ಕಮ್ಮಾರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.