ಮೂಡುಬಿದಿರೆ: ಬನ್ನಡ್ಕ ಅಪಘಾತ ವಲಯಕ್ಕೆ ಸಂಸದ ಬ್ರಿಜೇಶ್ ಚೌಟ ಮತ್ತು ಶಾಸಕ ಉಮಾನಾಥ್ ಕೋಟ್ಯಾನ್ ಭಾನುವಾರ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಈ ಸಂದರ್ಭ ಸಾರ್ವಜನಿಕರ ಬೇಡಿಕೆಯಂತೆ ಸರ್ವಿಸ್ ರಸ್ತೆ ಹಾಗೂ ಕ್ರಾಸ್ಸಿಂಗ್ ಲೈನ್ ಅಳವಡಿಸುವ ಭರವಸೆ ನೀಡಿದ ಅವರು, ಕಾಮಗಾರಿಯನ್ನು ಸೂಕ್ತ ರೀತಿಯಲ್ಲಿ ನಡೆಸುವಂತೆ ಗುತ್ತಿಗೆದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.ಸ್ಥಳೀಯರು ಜನಪ್ರತಿನಿಧಿಗಳಿಗೆ ತಮ್ಮ ಸಮಸ್ಯೆಗಳನ್ನು ಮನವರಿಕೆ ಮಾಡಿಕೊಟ್ಟರು. ಬನ್ನಡ್ಕ ಭಾಗದ 600 ಮೀಟರ್ ವ್ಯಾಪ್ತಿಯಲ್ಲಿ ಸರ್ವಿಸ್ ರಸ್ತೆ ಇಲ್ಲದಿರುವುದು ಅಪಘಾತಗಳಿಗೆ ಕಾರಣವಾಗುತ್ತಿದೆ ಎಂದು ಸಾರ್ವಜನಿಕರು ದೂರಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಸಂಸದ ಬ್ರಿಜೇಶ್ ಚೌಟ, 600 ಮೀಟರ್ ಗ್ಯಾಪ್ನಲ್ಲಿ ಸರ್ವಿಸ್ ರಸ್ತೆ ನಿರ್ಮಿಸುವಂತೆ ಎಲ್ಲರ ಬೇಡಿಕೆ ಇತ್ತು. ಈ ನಿಟ್ಟಿನಲ್ಲಿ ಈಗಾಗಲೇ ರಾಷ್ಟ್ರೀಯ ಹೆದ್ದಾರಿ ಇಲಾಖೆ ಸಚಿವರು ಹಾಗೂ ಬೆಂಗಳೂರಿನ ಪ್ರಾದೇಶಿಕ ಕಚೇರಿ ಅಧಿಕಾರಿಯೊಂದಿಗೆ ಮಾತನಾಡಿದ್ದು, ಅವರು ಸಮ್ಮತಿ ನೀಡಿದ್ದಾರೆ. ಸದ್ಯ ಇದರ ಅಂದಾಜು ಪಟ್ಟಿ ಸಿದ್ಧಪಡಿಸುವ ಕೆಲಸ ಪ್ರಾರಂಭವಾಗಲಿದ್ದು, ಪ್ರೊಸೀಜರಲ್ ಅನುಮೋದನೆ ಸಿಕ್ಕ ತಕ್ಷಣ ಸರ್ವಿಸ್ ರಸ್ತೆ ಕಾಮಗಾರಿ ಮಾಡಲಾಗುವುದು ಎಂದು ಹೇಳಿದರು.
ಸ್ಕೈ ವಾಕ್ ನಿರ್ಮಾಣ ಚಿಂತನೆ: ಜನರ ಮತ್ತೊಂದು ಪ್ರಮುಖ ಬೇಡಿಕೆಯಾದ ರಸ್ತೆ ದಾಟುವ (ಕ್ರಾಸಿಂಗ್) ವ್ಯವಸ್ಥೆಗೆ ಸಂಬಂಧಿಸಿದಂತೆ ಮಾತನಾಡಿದ ಸಂಸದರು, ಇಲ್ಲಿ ಸ್ಕೈ ವಾಕ್ ನಿರ್ಮಿಸುವ ಆಪ್ಷನ್ ಇದೆ. ಶಾಸಕರು ಹಾಗೂ ಸಾರ್ವಜನಿಕರೊಂದಿಗೆ ಚರ್ಚಿಸಿ, ಮುಂದಿನ ದಿನಗಳಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದರು. ಹೆದ್ದಾರಿ ಕಾಮಗಾರಿ ಆದಷ್ಟು ಶೀಘ್ರ ಮುಗಿಯಬೇಕು ಎನ್ನುವುದು ಎಲ್ಲರ ಆಶಯವಾಗಿದೆ. ಎರಡು-ಮೂರು ಕಡೆಗಳಲ್ಲಿ ಭೂ ಸ್ವಾಧೀನದ (ಲ್ಯಾಂಡ್ ಅಕ್ವಿಸಿಷನ್) ಸಮಸ್ಯೆ ಇದೆ. ಆದರೂ ಹಳೆಯ ಯೋಜನೆಯ (ಪ್ಲಾನ್) ಅನುಗುಣವಾಗಿಯೇ ಕೆಲಸಗಳನ್ನು ಮಾಡಲಾಗುತ್ತದೆ ಎಂದು ಸಂಸದರು ಸ್ಪಷ್ಟಪಡಿಸಿದರು.ಹಿಂದೆ ಇದ್ದ ಹೆದ್ದಾರಿ ಚಿಕ್ಕದಾಗಿತ್ತು. ಈಗ ಅದು ನಾಲ್ಕು ಪಥಗಳ ದೊಡ್ಡ ಹೆದ್ದಾರಿಯಾಗಿ ಬದಲಾಗುತ್ತಿದೆ. ಆದ್ದರಿಂದ ಕಾಮಗಾರಿ ನಡೆಯುವ ಸಂದರ್ಭದಲ್ಲಿ ಸಾರ್ವಜನಿಕರು ಅತ್ಯಂತ ಎಚ್ಚರಿಕೆಯಿಂದ ರಸ್ತೆಗಳಲ್ಲಿ ಸಂಚರಿಸಬೇಕು. ಅಪಘಾತ ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲ ಕಡೆಗಳಲ್ಲಿ ಸೈನ್ ಬೋರ್ಡ್ಗಳನ್ನು ಅಳವಡಿಸುವಂತೆ ಹೆದ್ದಾರಿ ಇಲಾಖೆ ಮತ್ತು ಕಾಂಟ್ರಾಕ್ಟರ್ಗಳಿಗೆ ಸೂಚಿಸಲಾಗಿದೆ. ಸರ್ವಿಸ್ ರಸ್ತೆ ಕೆಲಸವನ್ನು ಆದಷ್ಟು ಶೀಘ್ರ ಪ್ರಾರಂಭಿಸಲಾಗುವುದು ಎಂದು ಭರವಸೆ ನೀಡಿದರು.