ಸಾರಾಂಶ
ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರ ಬಳಿ ಪ್ರಸ್ತಾವನೆ ಸಲ್ಲಿಸುವ ಸಂಬಂಧ ಶೀಘ್ರ ನಿಯೋಗ ತೆರಳಲು ನಿರ್ಧರಿಸಿದ್ದೇವೆ.
ಕನ್ನಡಪ್ರಭ ವಾರ್ತೆ ಕೊಟ್ಟೂರು
ಮರಿಯಮ್ಮನಹಳ್ಳಿಯಿಂದ ಹಗರಿಬೊಮ್ಮನಹಳ್ಳಿ, ಹರಪನಹಳ್ಳಿ, ಹರಿಹರ ಮತ್ತು ಹೊನ್ನಾಳಿ ಮೂಲಕ ಶಿವಮೊಗ್ಗ ಸಂಪರ್ಕಿಸುವ ರಸ್ತೆಯನ್ನು ರಾಷ್ಟ್ರೀಯ ಯೋಜನೆ ಹೆದ್ದಾರಿಯಡಿ ಅಭಿವೃದ್ಧಿಗೊಳಿಸಲು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರ ಬಳಿ ಪ್ರಸ್ತಾವನೆ ಸಲ್ಲಿಸುವ ಸಂಬಂಧ ಶೀಘ್ರ ನಿಯೋಗ ತೆರಳಲು ನಿರ್ಧರಿಸಿದ್ದೇವೆ ಎಂದು ಬಳ್ಳಾರಿ ಸಂಸದ ಈ. ತುಕರಾಂ ಸ್ಪಷ್ಟನೆ ನೀಡಿದ್ದಾರೆ. ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ, ದಾವಣಗೆರೆ ಸಂಸದೆ ಪ್ರಭಾ ಮಲ್ಲಿಕಾರ್ಜುನ ಮತ್ತಿತರೊಂದಿಗೆ ಈ ಸಂಬಂಧ ಚರ್ಚಿಸಿ, ನಿಯೋಗದೊಂದಿಗೆ ಕೇಂದ್ರ ಸಚಿವರಿಗೆ ಮನವಿ ಮಾಡುತ್ತೇವೆ ಎಂದರು. ಹಗರಿಬೊಮ್ಮನಹಳ್ಳಿ ಪಟ್ಟಣದ ರೈಲ್ವೆ ಸ್ಟೇಷನ್ ಹತ್ತಿರ ಎಲ್ಸಿ 35 ಕಾಮಗಾರಿ ಭೂಮಿಪೂಜೆ ನೆರವೇರಿಸಲಾಗಿದ್ದು, ಅಂದಾಜು ₹34.5 ಕೋಟಿ ವೆಚ್ಚದ ಯೋಜನೆಯಡಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.ಪಟ್ಟಣದಲ್ಲಿನ ಪ್ರವಾಸಿ ಮಂದಿರದಲ್ಲಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನಾ ಸಂಘಟನೆಯವರಿಂದ ಮನವಿ ಸ್ವೀಕರಿಸಿದ ಅವರು, ಕೊಟ್ಟೂರು ಕೆರೆ ಮತ್ತು ಸುತ್ತಲಿನ ಕೆರೆಗಳ ನೀರು ತುಂಬಿಸುವ ಯೋಜನೆ ಹಮ್ಮಿಕೊಳ್ಳಲು ರಾಜ್ಯ ಸರ್ಕಾರಕ್ಕೆ ಒತ್ತಡ ತರುವೆ ಎಂದರಲ್ಲದೆ, ಕೊಟ್ಟೂರಿನ ರೈಲು ನಿಲ್ದಾಣದಲ್ಲಿ ಈ ಭಾಗದ ರಸಗೊಬ್ಬರ ಮತ್ತಿತರ ಪೂರೈಕೆಗೆ ಅನುಕೂಲವಾಗಲು ರೇಕ್ ಪಾಯಿಂಟ್ ನಿರ್ಮಿಸುವ ಸಂಬಂಧ ರೈಲ್ವೆ ಇಲಾಖೆ ಅನುಮೋದನೆ ನೀಡಿದ್ದು, ಸ್ಥಳ ಪರಿಶೀಲಿಸಿ, ಅಧಿಕಾರಿಗಳೊಂದಿಗೆ ಈ ಕುರಿತು ಮಾಹಿತಿ ಪಡೆದುಕೊಂಡಿರುವುದಾಗಿ ಅವರು ಹೇಳಿದರು.
ರಾಜ್ಯ ರೈತ ಸಂಘದ ಉಪಾಧ್ಯಕ್ಷ ಎನ್. ಭರಮಣ್ಣ, ಪದಾಧಿಕಾರಿಗಳಾದ ನಾಗರಾಜ, ಕೊಟ್ರಬಸಪ್ಪ, ಜಂಬೂರು ಮರುಳಸಿದ್ದಪ್ಪ, ಎ.ಎಂ. ಕೊಟ್ರಯ್ಯ, ಮತ್ತಿತರರು ಮನವಿ ನೀಡಿದರು.ಕೊಟ್ಟೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಐ. ದಾರುಕೇಶ, ಮುಖಂಡರಾದ ಎಂ.ಎಂ.ಜೆ. ಸತ್ಯಪ್ರಕಾಶ, ಅಡಕಿ ಮಂಜುನಾಥ, ಎಂ.ಎಂ.ಜೆ. ಮಂಜುನಾಥ, ಎಸ್.ಎಸ್. ಅಶೋಕ ಇತರರು ಇದ್ದರು.