ಗುಣಮಟ್ಟದ ವರದಿಗೆ ಹೆಚ್ಚಿನ ಮಾಹಿತಿ ಅತ್ಯವಶ್ಯಕ

| Published : Jun 28 2024, 12:49 AM IST

ಗುಣಮಟ್ಟದ ವರದಿಗೆ ಹೆಚ್ಚಿನ ಮಾಹಿತಿ ಅತ್ಯವಶ್ಯಕ
Share this Article
  • FB
  • TW
  • Linkdin
  • Email

ಸಾರಾಂಶ

ಕರ್ನಾಟಕದ ಪತ್ರಿಕೆಗಳಲ್ಲಿ ಮಕ್ಕಳಿಗೆ ಸಂಬಂಧಿಸಿದ ಕೆಲವು ವರದಿಗಳ ಗುಣಮಟ್ಟವನ್ನು ಹೆಚ್ಚಿಸುವಲ್ಲಿ ಇಂತಹ ಕಾರ್ಯಕ್ರಮಗಳು ಹೆಚ್ಚು ಉಪಯುಕ್ತವಾಗಿವೆ

ಕನ್ನಡಪ್ರಭ ವಾರ್ತೆ ಮೈಸೂರು

ಸಂಬಂಧಿಸಿದ ಕಾಯಿದೆಗಳನ್ನು ತಿಳಿದುಕೊಂಡು, ಆಯಾ ಇಲಾಖೆಗಳನ್ನು ಸಂಪರ್ಕಿಸಿ, ಮಕ್ಕಳ ಕುರಿತು ಲೇಖನ ಹಾಗೂ ವರದಿಗಳನ್ನು ಬರೆದರೆ ಓದುಗರಿಗೆ ಹೆಚ್ಚು ಆಕರ್ಷಕ ಹಾಗೂ ನಿಖರವಾದ ಮಾಹಿತಿ ನೀಡಬಹುದು ಎಂದು ಕರ್ನಾಟಕ ತೆಲಂಗಾಣ ಹಾಗೂ ಆಂಧ್ರಪ್ರದೇಶದ ಯುನಿಸೆಫ್ ಸಂವಹನ ವಕಾಲತ್ತು ಮತ್ತು ಪಾಲುದಾರಿಕೆ ತಜ್ಞ ಪ್ರೋಸುನ್ ಸೆನ್ ಹೇಳಿದರು.

ಮೈಸೂರು ವಿ ವಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗವು ಯುನಿಸೆಫ್ ಸಂಯುಕ್ತಶ್ರಯದಲ್ಲಿ ಮಾನಸ ಗಂಗೋತ್ರಿಯ ವಿಜ್ಞಾನ ಭವನದಲ್ಲಿ ಹಮ್ಮಿಕೊಂಡಿರುವ ಬದಲಾವಣೆಗಾಗಿ ಮಾಧ್ಯಮ- ಮಕ್ಕಳ ವಿಷಯಗಳು ಕುರಿತ ಎರಡು ದಿನಗಳ ಕಾರ್ಯಾಗಾರವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದ ಅವರು, ಕರ್ನಾಟಕದ ಪತ್ರಿಕೆಗಳಲ್ಲಿ ಮಕ್ಕಳಿಗೆ ಸಂಬಂಧಿಸಿದ ಕೆಲವು ವರದಿಗಳ ಗುಣಮಟ್ಟವನ್ನು ಹೆಚ್ಚಿಸುವಲ್ಲಿ ಇಂತಹ ಕಾರ್ಯಕ್ರಮಗಳು ಹೆಚ್ಚು ಉಪಯುಕ್ತವಾಗಿವೆ ಎಂದು ತಿಳಿಸಿದರು.

ಉಪಯುಕ್ತ ಮಾಹಿತಿ ಅಗತ್ಯ:ಸಮಾಜದ ಬದಲಾವಣೆಗೆ ಮಾಧ್ಯಮವನ್ನು ಬಳಸಿಕೊಳ್ಳಲು ಅತಿ ಹೆಚ್ಚು ಪ್ರಸಾರವನ್ನು ಹೊಂದಿರುವ ಪತ್ರಿಕೆಗಳ ಸಂಪಾದಕರಿಗೆ ವರದಿಗಾರರಿಗೆ ಉಪಯುಕ್ತ ಮಾಹಿತಿಗಳ ಸಂಗ್ರಹ ಹೆಚ್ಚು ಇರಬೇಕು. ಕೇವಲ ಒಂದು ಪತ್ರಿಕೆ ಅಥವಾ ಒಂದು ಜಿಲ್ಲೆಯಲ್ಲಿ ಅಲ್ಲದೆ ಕರ್ನಾಟಕದ ಎಲ್ಲಾ ಪತ್ರಕರ್ತರನ್ನು ಸೇರಿಸಿ ಚರ್ಚೆ ಮಾಡುವ ವಿಷಯ ಇದಾಗಿದೆ. ಈ ಕಾರ್ಯಕ್ರಮದಲ್ಲಿ ವಿಶೇಷವಾಗಿ ಮಕ್ಕಳ ವಿದ್ಯಾಭ್ಯಾಸ, ರಕ್ಷಣೆ, ಆರೋಗ್ಯ ಹಾಗೂ ಅಭಿವೃದ್ಧಿಯ ಉದ್ದೇಶಗಳನ್ನು ಒಳಗೊಂಡಿದೆ. ಸಂವಿಧಾನಾತ್ಮಕವಾಗಿ ಇರುವ ಮಕ್ಕಳ ಹಕ್ಕುಗಳು ದಿನೇ ದಿನೇ ಬದಲಾವಣೆಯನ್ನು ಪಡೆಯುತ್ತವೆ. ಇದು ತಿಳಿದುಕೊಳ್ಳಲು ತುಂಬಾ ಮಾಹಿತಿ ಇರುವ ಬಹುದೊಡ್ಡ ವಿಷಯವಾಗಿದೆ ಎಂದರು.

-- ಬಾಕ್ಸ್‌--

ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಪ್ರೊ.ಎಂ.ಎಸ್ ಸಪ್ನಾ ಪ್ರಾಸ್ತಾವಿಕ ಮಾತನಾಡಿ, ಸ್ವಾಗತಿಸಿದರು. ವಿಭಾಗದ ಪ್ರಾಧ್ಯಾಪಕ ಡಾ. ಸಿ.ಕೆ ಪುಟ್ಟಸ್ವಾಮಿ, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ವೀಕ್ಷಣಾಲಯದ ಸಂಚಾಲಕ ಡಾ. ವಾಸುದೇವ ಶರ್ಮ, ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಡಾ. ಪಾಂಡುರಂಗ ಮಾತನಾಡಿದರು. ಮಂಜುನಾಥ್ ಸುಬೇದಾರ್ ನಿರೂಪಿಸಿದರು. ಡಾ.ರಾಕೇಶ್ಗೌಡ, ಡಾ.ಕುಮಾರಸ್ವಾಮಿ, ಡಾ.ನವೀನ್ ಮೊದಲಾದವರು ಇದ್ದರು.

ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ ಹಾಗೂ ಕೊಡಗು ಜಿಲ್ಲೆಗಳ ಪತ್ರಕರ್ತರು, ಸಂಶೋಧಕರು, ವಿದ್ಯಾರ್ಥಿಗಳು ಈ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದಾರೆ.

-- ಬಾಕ್ಸ್‌1--

- ದಿನನಿತ್ಯ ಕಲಿಯಬೇಕು- ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮಾತನಾಡಿ, ಪತ್ರಕರ್ತರು ದಿನನಿತ್ಯ ಕಲಿಯಬೇಕು ಪ್ರತಿಯೊಂದು ಕೆಲಸದಲ್ಲಿಯೂ ಪುನಶ್ಚೇತನ ತರಬೇತಿ ಅಗತ್ಯ. ಬೇರೆ ರಂಗದಲ್ಲಿ ಪದೇ ಪದೇ ತರಬೇತಿ ಅಗತ್ಯವಿಲ್ಲ ಆದರೆ ಪತ್ರಿಕೋದ್ಯಮ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ನಿರಂತರ ಅಭ್ಯಾಸ ನಡೆಯಬೇಕು. ಇಂದು ನಡೆಯುತ್ತಿರುವ ವಿದ್ಯಾಮಾನಗಳನ್ನು ಗಮನಿಸಿದರೆ ಬಹಳಷ್ಟು ಮುಂದುವರೆದು ಮಾಹಿತಿಯನ್ನು ಪಡೆಯಬೇಕು ಎಂದರು.ಸಾರ್ವಜನಿಕರಿಗೆ ಸರಿಯಾದ ಮಾಹಿತಿಯನ್ನು ಕೊಡಬೇಕಾದರೆ ಅದರ ಬಗ್ಗೆ ಅರಿವಿರಬೇಕು. ಜಿಲ್ಲಾ ವರದಿಗಾರರು ಎಲ್ಲಾ ವಿಷಯಗಳಲ್ಲಿ ವರದಿ ಮಾಡಬೇಕಾಗುತ್ತದೆ ಮಕ್ಕಳ ಅಪೌಷ್ಟಿಕತೆ ಅಭಿವೃದ್ಧಿಯಂತಹ ತುಂಬಾ ಸಮಸ್ಯೆಗಳು ಹಳ್ಳಿಯಲ್ಲಿ ಇರುವುದರಿಂದ ಪ್ರಾದೇಶಿಕವಾಗಿ ಹೆಚ್ಚು ಸುದ್ದಿಗಳು ದೊರೆಯುತ್ತವೆ. ಕೇವಲ ಒಂದೇ ದೃಷ್ಟಿಕೋನ ಇಟ್ಟುಕೊಂಡು ಸುದ್ದಿ ಬರೆಯಬಾರದು ವಿವಿಧ ಆಯಾಮಗಳಿಂದ ಅಳೆದು ಬರೆಯಬೇಕಾಗುತ್ತದೆ ಆದ್ದರಿಂದ. ಪ್ರತಿಯೊಂದು ವಿಷಯಗಳು ತಿಳಿದಿರಬೇಕು ಎಂದು ಅವರು ಹೇಳಿದರು.

--

-- ಬಾಕ್ಸ್ 2--

-- ಪ್ರಶ್ನೋತ್ತರದ ಮೂಲಕ ಮಾಹಿತಿ--

ಕಾರ್ಯಾಗಾರದ ಮೊದಲ ಗೋಷ್ಠಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿದ್ದ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ವೀಕ್ಷಣಾಲಯದ ಸಂಚಾಲಕ ಡಾ.ವಾಸುದೇವ ಶರ್ಮ ಅವರು, ಪ್ರಶ್ನೋತ್ತರ ಮೂಲಕವೇ ಮಾಹಿತಿ ನೀಡಿದರು.

ಮಕ್ಕಳ ಹಕ್ಕುಗಳು, ಅವರ ರಕ್ಷಣೆಗಾಗಿ ಇರುವ ಕಾನೂನುಗಳು, ನೀತಿಗಳು, ವಿಶ್ವಸಂಸ್ಥೆಯ ಮಟ್ಟದಲ್ಲಿ ಆಗಿರುವ ಒಪ್ಪಂದಗಳು, ಭ್ರೂಣಹತ್ಯೆ, ಅಪೌಷ್ಠಿಕತೆ, ಕಡ್ಡಾಯ ಶಿಕ್ಷಣ, ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ, ಮಕ್ಕಳ ಹಕ್ಕುಗಳ ರಕ್ಷಣೆಗೆ ಸಂಬಂಧಿಸಿದ ಇಲಾಖೆಗಳ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತಾ, ಶಿಬಿರಾರ್ಥಿಗಳಿಂದ ಉತ್ತರ ಬರೆಸುತ್ತಾ, ನಂತರ ಅವರಿಂದ ಮಾಹಿತಿ ಪಡೆಯುತ್ತಾ ವಿಭಿನ್ನ ರೀತಿಯಲ್ಲಿ ಕಾರ್ಯಾಗಾರ ನಡೆಸಿಕೊಟ್ಟರು.

ಆರೋಗ್ಯ ತಜ್ಞ ಡಾ.ಶ್ರೀಧರ್ ಪ್ರಹ್ಲಾದ್ ರೇವಂಕಿ, ಡಾ.ಮಂಜುಳಾ, ಎಂ. ಪುಷ್ಪಲತಾ ಅವರು ಇತರೆ ಸಂಪನ್ಮೂಲ ವ್ಯಕ್ತಿಗಳಾಗಿದ್ದಾರೆ.