ಧರ್ಮದ ರಕ್ಷಣೆಗೆ ವೇದಗಳ ಸಂರಕ್ಷಣೆ ಅನಿವಾರ್ಯ: ಕಂಚಿ ಶ್ರೀ ಶಂಕರ ವಿಜಯೇಂದ್ರ ಸರಸ್ವತಿ

| Published : Nov 26 2024, 12:46 AM IST / Updated: Nov 26 2024, 09:20 AM IST

ಧರ್ಮದ ರಕ್ಷಣೆಗೆ ವೇದಗಳ ಸಂರಕ್ಷಣೆ ಅನಿವಾರ್ಯ: ಕಂಚಿ ಶ್ರೀ ಶಂಕರ ವಿಜಯೇಂದ್ರ ಸರಸ್ವತಿ
Share this Article
  • FB
  • TW
  • Linkdin
  • Email

ಸಾರಾಂಶ

ಧರ್ಮದ ರಕ್ಷಣೆಗೆ ಬಹುಮುಖ್ಯವಾಗಿ ವೇದಗಳ ಸಂರಕ್ಷಣೆ ಆಗಬೇಕಾದ ಅನಿವಾರ್ಯತೆ ಇದೆ. ಸಮಾಜದ ಆರೋಗ್ಯ ಮತ್ತು ಸೌಹಾರ್ದತೆಯೊಂದಿಗೆ ಮನುಷ್ಯನ ನೆಮ್ಮದಿಯ ಬದುಕಿಗೂ ಧರ್ಮದ ಪಾಲನೆ ಅಗತ್ಯ ಎಂದು ಕಂಚಿ ಕಾಮಕೋಟಿಯ ಶ್ರೀ ಶಂಕರ ವಿಜಯೇಂದ್ರ ಸರಸ್ವತಿ ಸ್ವಾಮೀಜಿ ಹೇಳಿದರು.

 ತೀರ್ಥಹಳ್ಳಿ : ಸ್ವತಂತ್ರ ಭಾರತದಲ್ಲಿ ಧರ್ಮದ ರಕ್ಷಣೆಗೆ ಬಹುಮುಖ್ಯವಾಗಿ ವೇದಗಳ ಸಂರಕ್ಷಣೆ ಆಗಬೇಕಾದ ಅನಿವಾರ್ಯತೆ ಇದೆ. ಸಮಾಜದ ಆರೋಗ್ಯ ಮತ್ತು ಸೌಹಾರ್ದತೆಯೊಂದಿಗೆ ಮನುಷ್ಯನ ನೆಮ್ಮದಿಯ ಬದುಕಿಗೂ ಧರ್ಮದ ಪಾಲನೆ ಅಗತ್ಯ ಎಂದು ಕಂಚಿ ಕಾಮಕೋಟಿಯ ಶ್ರೀ ಶಂಕರ ವಿಜಯೇಂದ್ರ ಸರಸ್ವತಿ ಸ್ವಾಮೀಜಿ ಹೇಳಿದರು.

ಪಟ್ಟಣದ ರಥಬೀದಿಯಲ್ಲಿರುವ ಶ್ರೀ ರಾಮಚಂದ್ರಾಪುರ ಮಠದ ಶಾಖೆಯಲ್ಲಿ ಭಾನುವಾರ ಸಂಜೆ ನಡೆದ ಧರ್ಮಸಭೆಯಲ್ಲಿ ಪಾಲ್ಗೊಂಡು ಅವರು ಆಶೀರ್ವಚನ ನೀಡಿದರು. ಶ್ರೀ ರಾಮಚಂದ್ರಾಪುರ ಮಠ, ಶಕಟಪುರ ಶ್ರೀ ವಿದ್ಯಾಪೀಠಾಧೀಶರು ಸೇರಿ ಜಗದ್ಗುರುತ್ರಯರು ಧರ್ಮಸಭೆಯಲ್ಲಿ ಪಾಲ್ಗೊಂಡಿದ್ದರು.

ವೇದಗಳು ಸಮಾಜಕ್ಕೆ ಮಾರ್ಗದರ್ಶಿಯೂ ಆಗಿವೆ. ಭಗವಂತನ ಇಚ್ಛೆ ಧರ್ಮದ ರಕ್ಷಣೆಯಾಗಿದ್ದು ದುಷ್ಟರನ್ನು ಸಂಹರಿಸುವ ಮೂಲಕ ಧರ್ಮವನ್ನು ರಕ್ಷಿಸಿದ್ದಾನೆ. ಸರ್ವರ ಹಿತವನ್ನು ಬಯಸುವ ಸನಾತನ ಧರ್ಮದಲ್ಲಿ ಸಾಮಾಜಿಕ ತತ್ವಗಳಿವೆ. ಅನ್ನದಾನಕ್ಕೆ ಹೆಸರಾದ ಕರ್ನಾಟಕದ ಭೂಮಿಯನ್ನು ಹಸನಾಗಿಸಲು ಸಾವಯವ ಕೃಷಿಗೆ ಹೆಚ್ಚು ಆದ್ಯತೆಯನ್ನು ನೀಡಬೇಕಿದೆ ಎಂದು ಕಂಚಿ ಶ್ರೀಗಳು ಹೇಳಿದರು.

ಶ್ರೀ ರಾಮಚಂದ್ರಾಪುರ ಮಠಾಧೀಶ ಶ್ರೀ ರಾಘವೇಶ್ವರ ಭಾರತಿ ಶ್ರೀಗಳು ಮಾತನಾಡಿ, ಮೂಲ ಮತ್ತು ಪ್ರಧಾನ ಮಠದಲ್ಲಿ ಸಾಕಾರಗೊಳ್ಳದ ಧರ್ಮಸಭೆ ಶಾಖಾ ಮಠದಲ್ಲಿ ಆಯೋಜನೆಗೊಂಡಿರುವುದು ಮಠದ ಪಾಲಿಗೆ ಸುದಿನವಾಗಿದೆ. ಕಂಚಿ ಕಾಮಕೋಟಿ ಪೀಠಾಧೀಶರ ನೇತೃತ್ವದಲ್ಲಿ ವೇದದ ರಕ್ಷಣೆಯಾಗಿದೆ. ವೇದದ ರಕ್ಷಣೆಗೆ ಪರಮಾಚಾರ್ಯರ ಸಮಯದಲ್ಲಿ ಯೋಜನೆ ರೂಪುಗೊಂಡಿದ್ದು, ಆ ಪೀಠದ ಯೋಜನೆಗಳು ಕರ್ನಾಟಕಕ್ಕೂ ಬರುವಂತಾಗಬೇಕು ಎಂದು ಹೇಳಿದರು.

ಸಂಸದ ಬಿ.ವೈ.ರಾಘವೇಂದ್ರ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ, ಎಂಎಡಿಬಿ ಮಾಜಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ, ಪಪಂ ಸದಸ್ಯರು ರಾಮಚಂದ್ರಾಪುರ ಮಠದ ಸಧ್ಭಕ್ತರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಇದಕ್ಕೂ ಮೊದಲು, ಶನಿವಾರ ರಾತ್ರಿ ಪಟ್ಟಣಕ್ಕೆ ಆಗಮಿಸಿದ ಕಂಚಿ ಕಾಮಕೋಟಿ ಶ್ರೀಗಳಿಗೆ ಅದ್ಧೂರಿ ಸ್ವಾಗತ ನೀಡಲಾಯಿತು. ರಾಮಚಂದ್ರಾಪುರದಲ್ಲಿ ಭಾನುವಾರ ಬೆಳಗ್ಗೆ ಚಂದ್ರಮೌಳೇಶ್ವರ ದೇವರ ಪೂಜೆ ನೆರವೇರಿಸಿದ ಕಂಚಿ ಶ್ರೀಗಳು, ಪುರಾಣ ಪ್ರಸಿದ್ಧವಾದ ಇಲ್ಲಿನ ರಾಮೇಶ್ವರ ದೇವರ ದರ್ಶನ ಪಡೆದರು.ಬಾಕ್ಸ್‌:

ಶೀಘ್ರದಲ್ಲೇ ಶಂಕರಾಚಾರ್ಯ ಪೀಠದ 30 ಯತಿಗಳ ಸಮಾವೇಶ :

ಶಕಟಪುರದ ಶ್ರೀ ಕೃಷ್ಣಾನಂದ ಮಹಾಸ್ವಾಮಿಗಳು ಮಾತನಾಡಿ, ಭಗವಂತನ ಕೃಪೆಗೆ ಭಕ್ತಿ ಒಂದೇ ಮಾನದಂಡವಾಗಿದೆ. ಮನುಷ್ಯನ ಮನದಲ್ಲಿ ಭಕ್ತಿಯ ಮಾಲೆ ಧರಿಸಿಲ್ಲವಾದರೆ ಸಜ್ಜನರು-ದುರ್ಜನರ ನಡುವಿನ ವ್ಯತ್ಯಾಸವೇ ತಿಳಿಯುವುದಿಲ್ಲ. ಇಂದಿಲ್ಲಿ ಮೂರು ಪೀಠಗಳ ಸಮಾವೇಶ ಸಾಕಾರಗೊಂಡಿದ್ದು, ಇದು 30 ಪೀಠದ ಸಮಾಗಮಕ್ಕೆ ಸಾಟಿಯಾಗಿದೆ. ಅತಿ ಶೀಘ್ರದಲ್ಲೇ ಶಂಕರಾಚಾರ್ಯ ಪೀಠದ 30 ಯತಿಗಳ ಸಮಾವೇಶ ನಡೆಯಲಿದೆ ಎಂದು ತಿಳಿಸಿದರು.