ಪ್ರಾಥಮಿಕ ಸಹಕಾರಿ ಸಂಘಗಳು ಹಾಗೂ ಒಕ್ಕೂಟಗಳಲ್ಲಿ ಮತ್ತಿತರೆ ಡೇರಿ ಉತ್ಪನ್ನಗಳ ಉದ್ದಿಮೆಗಳಲ್ಲಿ ಲಕ್ಷಾಂತರ ಜನಕ್ಕೆ ಈ ಕ್ಷೇತ್ರ ಉದ್ಯೋಗ ಸೃಷ್ಟಿ ಮಾಡಿದೆ. ಇದನ್ನು ನಾಶ ಮಾಡಲು ಕೇಂದ್ರ-ರಾಜ್ಯ ಸರ್ಕಾರ ಮುಂದಾಗಿದೆ ಎಂದು ಆರೋಪಿಸಿದರು.

ಕನ್ನಡಪ್ರಭ ವಾರ್ತೆ ಕೋಲಾರಆನ್‌ಲೈನ್‌ನಲ್ಲಿ ಒಂದು ರು.ಗೆ ಹಾಲು ಮಾರಾಟ ಮತ್ತು ಇತರೆ ಕೃಷಿ ಉತ್ಪನ್ನಗಳ ಮಾರಾಟ ವಿರೋಧಿಸಿ ಹಾಗೂ 2002ರ ಸ್ಪರ್ಧಾ ಕಾಯ್ದೆಯಂತೆ ಭಾರತ ಸ್ಪರ್ಧಾ ಆಯೋಗವು ಕಾನೂನು ಬಾಹಿರ ಮಾರಾಟ ನಿಯಂತ್ರಿಸುವ ಕ್ರಮಗಳನ್ನು ಕೇಂದ್ರ-ರಾಜ್ಯ ಸರ್ಕಾರಗಳು ತೆಗೆದುಕೊಳ್ಳಲು ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘ ಜಿಲ್ಲಾ ಸಮಿತಿ ನೇತೃತ್ವದಲ್ಲಿ ನಗರದ ತಹಸೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಯಶವಂತ್ ಮಾತನಾಡಿ, ಕೋಟ್ಯಂತರ ಸಂಖ್ಯೆಯಲ್ಲಿ ರೈತರು, ಕೃಷಿ ಕೂಲಿಕಾರರು, ಮಹಿಳೆಯರು, ದಲಿತರು ಕೃಷಿಯ ಉಪಕಸಬಾಗಿ ಭಾರತದಲ್ಲಿ ಹೈನುಗಾರಿಕೆಯಲ್ಲಿ ತೊಡಗಿದ್ದಾರೆ. ಇದಲ್ಲದೆ ಕರ್ನಾಟಕದ ಕೆಎಂಎಫ್ ಅಡಿಯಲ್ಲಿ ಸುಮಾರು 25 ಲಕ್ಷಕ್ಕೂ ಹೆಚ್ಚು ಹಾಲು ಉತ್ಪಾದಕರು ಸಹಕಾರಿ ತತ್ವದ ಅಡಿಯಲ್ಲಿ ಹೈನುಗಾರಿಕೆಯಿಂದ ಜೀವನ ರೂಪಿಸಿಕೊಂಡಿದ್ದಾರೆ. ಪ್ರಾಥಮಿಕ ಸಹಕಾರಿ ಸಂಘಗಳು ಹಾಗೂ ಒಕ್ಕೂಟಗಳಲ್ಲಿ ಮತ್ತಿತರೆ ಡೇರಿ ಉತ್ಪನ್ನಗಳ ಉದ್ದಿಮೆಗಳಲ್ಲಿ ಲಕ್ಷಾಂತರ ಜನಕ್ಕೆ ಈ ಕ್ಷೇತ್ರ ಉದ್ಯೋಗ ಸೃಷ್ಟಿ ಮಾಡಿದೆ. ಇದನ್ನು ನಾಶ ಮಾಡಲು ಕೇಂದ್ರ-ರಾಜ್ಯ ಸರ್ಕಾರ ಮುಂದಾಗಿದೆ ಎಂದು ಆರೋಪಿಸಿದರು.ಇತ್ತೀಚಿನ ದಿನಗಳಲ್ಲಿ ಆಮೆಜಾನ್, ವಾಲ್‌ಮಾರ್ಟ್, ಪ್ಲಿಪ್ ಕಾರ್ಡ್ ಸೇರಿದಂತೆ ಹಲವು ಖಾಸಗಿ ಕಂಪನಿಗಳು ಆನ್‌ಲೈನ್ ಜಾಲದಲ್ಲಿ ಉತ್ಪಾದನಾ ವೆಚ್ಚಕ್ಕಿಂತ ಅತ್ಯಂತ ಕಡಿಮೆ ಬೆಲೆಗೆ ಕಾನೂನುಬಾಹಿರವಾಗಿ ಪೈಪೋಟಿಗಿಳಿದು ನಂದಿನಿ ಬ್ರಾಂಡಿನ ಹಾಲನ್ನು ಒಂದು ರು.ಗೆ ಒಂದು ಲೀಟರ್ ನಂತೆ ಹಾಲು ಮಾರಾಟ ಮಾಡುತ್ತಿರುವುದು ಕರ್ನಾಟಕದ ಲಕ್ಷಾಂತರ ಹೈನುಗಾರರನ್ನು ತೀವ ಆತಂಕಕ್ಕೆ ಗುರಿ ಮಾಡುತ್ತಿದೆ.ಖಾಸಗಿ ಕಂಪನಿಗಳ ಈ ಅನ್ಯಾಯದ ಸ್ಪರ್ಧೆಯಲ್ಲಿ ಪೈಪೋಟಿದಾರರನ್ನು ದುರ್ಬಲಗೊಳಿಸುವುದು ಮಾತ್ರವಲ್ಲದೆ, ಮುಂದೆ ಲಾಭದ ದೃಷ್ಟಿಯಿಂದ ಸಣ್ಣ ಮತ್ತು ಮಧ್ಯಮ ವರ್ಗದ ಗ್ರಾಹಕರ ಮೇಲಿನ ಮಾರುಕಟ್ಟೆ ಹಿಡಿತ ಸಾಧಿಸುವ ಮತ್ತು ಸರ್ಕಾರಿ ಸಹಕಾರಿ ಡೇರಿ ಉದ್ದಿಮೆಯನ್ನು, ಹಾಲು ಉತ್ಪಾದಕರನ್ನು ನಾಶಗೊಳಿಸುವ ದುರುದ್ದೇಶವನ್ನು ಹೊಂದಿದೆ. ಇವುಗಳಿಗೆಲ್ಲಾ ಕೇಂದ್ರ-ರಾಜ್ಯ ಸರ್ಕಾರಗಳು ರೂಪಿಸಿರುವ ರೈತ ವಿರೋಧಿ ಕಾರ್ಪೊರೇಟ್ ಬೆಂಬಲಿತ ಖಾಸಗೀಕರಣದ ಆರ್ಥಿಕ ನೀತಿಗಳಾಗಿವೆ ಎಂದರು.ರಾಜ್ಯ ಉಪಾಧ್ಯಕ್ಷ ಪಿ.ಆರ್.ಸೂರ್ಯನಾರಾಯಣ ಮಾತನಾಡಿ, ನೀತಿಗಳು, ಹಾಲು ಉತ್ಪಾದಕರ ಉತ್ಪಾದನಾ ವೆಚ್ಚ ವ್ಯಾಪಕವಾಗಿ ಹೆಚ್ಚಿಸಿದೆ. ಖಾಸಗಿ ಸಂಸ್ಥೆಗಳಿಗೆ ದೊಡ್ಡ ದೊಡ್ಡ ಫಾರಂಗಳಲ್ಲಿ ಹಾಲು ಉತ್ಪಾದಿಸಲು, ಖರೀದಿಸಲು ಮತ್ತು ಸ್ಪರ್ಧಾತ್ಮಕವಾಗಿ ಮಾರಾಟ ಮಾಡಲು ಅವಕಾಶ ನೀಡಿದೆ, ಇದಕ್ಕಾಗಿ ಹಾಲು ಮತ್ತು ಹಾಲು ಉತ್ಪನ್ನಗಳ ಆದೇಶ ತಿದ್ದುಪಡಿ ಮಾಡಿದೆ ಮತ್ತು ಜಾನುವಾರು ಹತ್ಯೆ ನಿಷೇಧ ತಿದ್ದುಪಡಿ ಕಾಯ್ದೆ ಮೂಲಕ ನಿರುಪಯುಕ್ತ ಜಾನುವಾರುಗಳನ್ನು ಮಾರಾಟ ಮಾಡಲು ಹೈನುಗಾರರಿಗಿದ್ದ ಅವಕಾಶಗಳನ್ನು ಮುಚ್ಚಲಾಗಿದೆ. ಇದೆಲ್ಲವೂ ಹಾಲು ಉತ್ಪಾದಕರ ಮೇಲಿನ ಹೊರೆ ಹೆಚ್ಚಿಸಿ ಉತ್ಪಾದನೆಯಿಂದ ಲಕ್ಷಾಂತರ ಬಡವರು ಹಿಂದೆ ಸರಿಯುವಂತೆ ಮಾಡಿದೆ ಎಂದರು.ಹಾಲಿಗೆ ಉತ್ಪಾದನಾ ವೆಚ್ಚವೂ ಬರುತ್ತಿಲ್ಲವಾದ್ದರಿಂದ ಹೈನುಗಾರರ ರಕ್ಷಣೆಗೆ ರಾಜ್ಯ ಸರಕಾರವೇ ಪ್ರತಿ ಲೀಟರ್ ಹಾಲಿಗೆ 5 ರು. ನೆರವು ನೀಡುವಂತಾಗಿದೆ. ಪರಿಸ್ಥಿತಿ ಹೀಗಿರುವಾಗಲೆ, ಭಾರತದ ಹೈನುಗಾರಿಕೆ ಮೇಲೆ ಮತ್ತೊಂದು ಬಲವಾದ ಹೊಡೆತ ನೀಡಿ ನಾಶ ಮಾಡಲು ಕೇಂದ್ರ ಸರಕಾರ ಅಮೇರಿಕ ಗ್ರೇಟರ್ ಬ್ರಿಟನ್, ನ್ಯೂಜಿಲ್ಯಾಂಡ್ ಮತ್ತಿತರ ರಾಷ್ಟ್ರಗಳು ಭಾರತದೊಂದಿಗೆ ತೆರಿಗೆ ರಹಿತ ವಾಣಿಜ್ಯ ಒಪ್ಪಂದಗಳನ್ನು ಮಾಡಿಕೊಂಡಿದೆ. ಈ ಮೂಲಕ, ಅಪಾರ ಸಹಾಯದನ ಮತ್ತು ಹೆಚ್ಚು ಇಳುವರಿ ಹೊಂದಿದ ವಿದೇಶಿ ಹಾಲು ಮತ್ತು ಹಾಲಿನ ಉತ್ಪನ್ನಗಳು ಭಾರತದ ಮಾರುಕಟ್ಟೆ ಪ್ರವೇಶಿಸುವಂತಾಗಿದೆ ಎಂದರು.ಕರ್ನಾಟಕದಲ್ಲಿ ಹೈನುಗಾರಿಕೆ ಉಳಿವಿಗಾಗಿ ಲೀಟರ್ ಹಾಲಿಗೆ ೫೦ ರು. ನೀಡಬೇಕೆನ್ನುವ ಒತ್ತಾಯದಲ್ಲೂ ಅದನ್ನು ಈಡೇರಿಸಲು ಸಾಧ್ಯವಾಗದ ಕನಿಷ್ಠ ಉತ್ಪಾದನಾ ವೆಚ್ಚ ನೀಡಲು ಆಗದ ಮತ್ತು ಸಂಗ್ರಹಿಸಿದ ಹಾಲನ್ನು ಪೂರ್ಣವಾಗಿ ಮಾರಾಟ ಮಾಡಲು ಪ್ರಯಾಸಪಡುತ್ತಿರುವ ಇಂತಹ ತೀವ ಪರಿಸ್ಥಿತಿಯಲ್ಲಿ ಸಹಕಾರಿ ಹಾಲು ಒಕ್ಕೂಟವನ್ನು ತೀವ್ರ ಬಿಕ್ಕಟ್ಟಿಗೆ ದೂಡುವ ಇಂತಹ ಮಾರಾಟದ ಕುತಂತ್ರಗಳನ್ನು ತಕ್ಷಣ ನಿಲ್ಲಿಸಬೇಕೆಂದು ಹಾಗೂ ಕಾನೂನುಬಾಹಿರ ಅನ್ಯಾಯದ ಸ್ಪರ್ಧೆ ಮಾಡುವ ಇಂತಹ ಸಂಸ್ಥೆಗಳ ಮೇಲೆ ಕ್ರಮಗಳನ್ನು ತೆಗೆದುಕೊಳ್ಳಲಿ ಕರ್ನಾಟಕ ಪ್ರಾಂತ ರೈತ ಸಂಘ ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಾತಕೋಟೆ ನವೀನ್ ಕುಮಾರ್, ಜಿಲ್ಲಾ ಮುಖಂಡರಾದ ಗಂಗಮ್ಮ, ವಿ.ನಾರಾಯಣರೆಡ್ಡಿ, ಹೊಲ್ಲಂಬಳ್ಳಿ ವೆಂಕಟೇಶಪ್ಪ, ಮಾಲೂರು ವೆಂಕಟಪ್ಪ, ಸಿಂಗಪುರ್ ನಾರಾಯಣಸ್ವಾಮಿ, ಕೃಷ್ಣಪ್ಪ, ಬಂಗಾರಪೇಟೆ ಪಿ.ಶ್ರೀನಿವಾಸ್, ಸಿಆರ್ ಮೂರ್ತಿ, ರಂಗನಾಥ್, ಹೂಹಳ್ಳಿ ಸೋಮಶೇಖರಗೌಡ, ಜಿ.ಮಂಜುಳಾ, ರಾಜೇಂದ್ರ ಪ್ರಸಾದ್, ಅಪ್ಪಯಣ್ಣ, ಚಿನ್ನಕ್ಕ ಇದ್ದರು.