ಕನ್ನಡಪ್ರಭ ವಾರ್ತೆ ರಾಮದುರ್ಗ ಸುಮಾರು 20 ವರ್ಷಗಳಿಂದಲೂ ತೇರ ಬಜಾರಿನಲ್ಲಿ ಸಾರ್ವಜನಿಕರ ಸೇವೆಯಲ್ಲಿದ್ದ ಟೌನ್ ಅಂಚೆ ಕಚೇರಿಯನ್ನು ಪ್ರಧಾನ ಅಂಚೆ ಕಚೇರಿಯಲ್ಲಿ ವಿಲೀನಗೊಳಿಸುವ ಕ್ರಮವನ್ನು ವಿರೋಧಿಸಿ ವಿಜಯ ಸೇನೆಯ ಪದಾಧಿಕಾರಿಗಳು ಹೆಡ್ ಪೋಸ್ಟ್ ಕಚೇರಿ ಮುಂಭಾಗ ಅನಿರ್ದಿಷ್ಟ ಧರಣಿ ಆರಂಭಿಸಿದರು.
ಕನ್ನಡಪ್ರಭ ವಾರ್ತೆ ರಾಮದುರ್ಗ
ಸುಮಾರು 20 ವರ್ಷಗಳಿಂದಲೂ ತೇರ ಬಜಾರಿನಲ್ಲಿ ಸಾರ್ವಜನಿಕರ ಸೇವೆಯಲ್ಲಿದ್ದ ಟೌನ್ ಅಂಚೆ ಕಚೇರಿಯನ್ನು ಪ್ರಧಾನ ಅಂಚೆ ಕಚೇರಿಯಲ್ಲಿ ವಿಲೀನಗೊಳಿಸುವ ಕ್ರಮವನ್ನು ವಿರೋಧಿಸಿ ವಿಜಯ ಸೇನೆಯ ಪದಾಧಿಕಾರಿಗಳು ಹೆಡ್ ಪೋಸ್ಟ್ ಕಚೇರಿ ಮುಂಭಾಗ ಅನಿರ್ದಿಷ್ಟ ಧರಣಿ ಆರಂಭಿಸಿದರು.ಈ ವೇಳೆ ಟೌನ್ ಪೋಸ್ಟ್ ಕಚೇರಿ ಆರಂಭಗೊಳಿಸುವ ತನಕ ಪ್ರಧಾನ ಅಂಚೆ ಕಚೇರಿಯ ಕಾರ್ಯಕಲಾಪಗಳನ್ನು ಬಂದ್ ಮಾಡಲು ಪೋಸ್ಟ್ ಒಳಗೆ ತೆರಳಿ ಕೆಲಸ ಕಾರ್ಯಗಳಿಗೆ ಅಡೆತಡೆ ಮಾಡಿದರು. ಈ ವೇಳೆ ಅಂಚೆ ಕಚೇರಿಯ ಸಿಬ್ಬಂದಿ ಮತ್ತು ಹೋರಾಟಗಾರರ ನಡುವೆ ಮಾತಿನ ಚಕಮಕಿ ನಡೆಯಿತು. ನಂತರ ಪೊಲೀಸರು ಆಗಮಿಸಿದ ನಂತರ ಹೊರ ಬಂದ ವಿಜಯ ಸೇನೆ ಕಾರ್ಯಕರ್ತರು ಮತ್ತೇ ಧರಣಿ ಆರಂಭಿಸಿದರು.ಸುಮಾರು 20 ವರ್ಷಗಳ ಹಿಂದೆ ಆರಂಭವಾಗಿದ್ದ ಟೌನ್ ಅಂಚೆ ಕಚೇರಿಯಲ್ಲಿ ಅಂದಾಜು 1,800 ವಿವಿಧ ಖಾತೆಗಳಿವೆ. ಪಟ್ಟಣ ಅಲ್ಲದೇ ದೊಡಮಂಗಡಿ, ಚಿಂಚಖಂಡಿ, ರಂಕಲಕೊಪ್ಪ, ತೊರಗಲ್ ತಾಂಡಾ, ಘಟಕನೂರು ಗ್ರಾಮಗಳ ವಿವಿಧ ಫಲಾನುಭವಿಗಳು ಅಂಚೆಯ ಸೇವೆ ಪಡೆಯುತ್ತಿದ್ದಾರೆ. ಆದರೆ ಕೇಂದ್ರ ಸರ್ಕಾರ ಏಕಾಏಕಿ ಪ್ರಧಾನ ಅಂಚೆ ಕಚೇರಿಯಿಂದ ಒಂದು ಕಿ.ಮೀ ಅಂತರದೊಳಗಿನ ಎಲ್ಲ ಅಂಚೆ ಸೇವೆಗಳನ್ನು ಪ್ರಧಾನ ಅಂಚೆ ಕಚೇರಿಗೆ ವಿಲೀನಗೊಳಿಸುವ ನಿರ್ಧಾರದಿಂದ ಅಲ್ಲಿನ ಜನರು ಆಕ್ರೋಶಗೊಂಡಿದ್ದಾರೆ.ಇದೀಗ ಅಂಚೆ ಕಚೇರಿ ವಿಲೀನಗೊಂಡ ಪ್ರಯುಕ್ತ ವೃದ್ಧರು, ಮಕ್ಕಳು, ವಿಕಲಚೇತನರು, ರೋಗಿಗಳಿಗೂ ತೀವ್ರ ತೊಂದರೆಯಾಗುತ್ತದೆ. ಪ್ರಧಾನ ಅಂಚೆ ಕಚೇರಿಗೂ ಹೆಚ್ಚಿನ ಒತ್ತಡ ಬೀಳಲಿದೆ. ಇದರಿಂದ ಅಲ್ಲಿನ ಸೇವೆಗಳಿಗೆ ಸರತಿ ಸಾಲಿನಲ್ಲಿ ಗಂಟೆಗಟ್ಟಲೇ ಕಾದು ನಿಲ್ಲಬೇಕಾಗುತ್ತದೆ ಎಂದು ದೂರಿದರು.ವಿಜಯ ಸೇನೆ ಸಂಸ್ಥಾಪಕ ವಿಜಯ ನಾಯ್ಕ, ತಾಲೂಕು ಅಧ್ಯಕ್ಷ ಮಾರುತಿ ಮಾದರ, ಕರವೇ ಅಧ್ಯಕ್ಷ ವಿನಯ ಚಂದರಗಿ, ಪ್ರಶಾಂತ ಅಂಗಡಿ, ರೇಣುಕಾ ಅಮರಹಳ್ಳಿ, ಲಕ್ಷ್ಮೀ ಶೆಟ್ಟರ, ಮಂಗಳಾ ಗಣಮುಖಿ ಇತರರು ಪ್ರತಿಭಟನೆಯಲ್ಲಿದ್ದರು.