ರಾಣಿಬೆನ್ನೂರು: ಅರ್ಹ ರೈತರು ಬೆಳೆವಿಮೆ ಯೋಜನೆಯಿಂದ ವಂಚಿತರಾದರೆ ಅಂತಹ ಬ್ಯಾಂಕ್ ಮುಂದೆ ಅನ್ಯಾಯವಾದ ರೈತರ ಕುಟುಂಬದೊಂದಿಗೆ ತಮಟೆ ಬಾರಿಸುವ ಮೂಲಕ ಪ್ರತಿಭಟನೆ ಮಾಡಲಾಗುವುದು ಎಂದು ರೈತ ಮುಖಂಡ ರವೀಂದ್ರಗೌಡ ಎಫ್. ಪಾಟೀಲ ಹೇಳಿದರು.
ಇಲ್ಲಿಯ ತಹಸೀಲ್ದಾರ್ ಕಚೇರಿಯಲ್ಲಿ ಇತ್ತೀಚೆಗೆ ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ನಡೆದ ಪ್ರಸಕ್ತ ಸಾಲಿನ ಪ್ರಧಾನ ಮಂತ್ರಿ ಫಸಲ ಬಿಮಾ ಯೋಜನೆಯಲ್ಲಿ ಬೆಳೆವಿಮಾ ಕಂತು ಭರಿಸುವ ಕುರಿತು ರೈತರ ಸಭೆಯಲ್ಲಿ ಮಾತನಾಡಿದರು.ಬ್ಯಾಂಕಿನವರು ಹಿಂದಿನಿಂದಲೂ ರೈತರ ವಿರೋಧಿಗಳೇ. ಈ ಹಿಂದೆ ರಾಜ್ಯದಲ್ಲಿ ಎಚ್.ಡಿ. ಕುಮಾರಸ್ವಾಮಿಯವರ ನೇತೃತ್ವದ ಸಮ್ಮಿಶ್ರ ಸರ್ಕಾರ ಇದ್ದಾಗ ಪ್ರತಿ ಸಾಲಗಾರ ರೈತನಿಗೆ ₹ 2 ಲಕ್ಷ ಸಾಲಮನ್ನಾ ಯೋಜನೆ ಜಾರಿಗೆ ತಂದಾಗ ಕಟ್ ಬಾಕಿದಾರ, ಸಾಲಗಾರ ರೈತರ ಹೆಸರನ್ನು ಸರಿಯಾಗಿ ಸರ್ಕಾರಕ್ಕೆ, ಆರ್ಬಿಐಗೆ ಕಳುಹಿಸಿಕೊಡದೆ ರಾಜ್ಯದ ಲಕ್ಷಾಂತರ ರೈತರಿಗೆ ಆ ಯೋಜನೆ ಸಿಗದಂತೆ ಮಾಡಿದ್ದಾರೆ. ಈಗ ಮತ್ತೆ ಇಂತಹ ಬರಗಾಲದಲ್ಲಿ ರೈತರಿಗೆ ನೆರವಾಗುವುದನ್ನು ಬಿಟ್ಟು ಇಲ್ಲದ ನೆಪ ಒಡ್ಡಿ ಈ ಬೆಳೆವಿಮೆ ಯೋಜನೆಯಿಂದ ರೈತರನ್ನು ವಂಚಿತರನ್ನಾಗಿ ಮಾಡುವ ಹುನ್ನಾರದಲ್ಲಿದ್ದಾರೆ. ಎಲ್ಲ ಕಾನೂನು ಕಟ್ಟುನಿಟ್ಟಿನ ನಿಯಮಗಳನ್ನು ಹೇಳುವ ಈ ಬ್ಯಾಂಕಿನವರು ರೈತರ ಖಾತೆಗೆ ಜಮಾ ಆಗುವ ಸರ್ಕಾರದ ವಿವಿಧ ಯೋಜನೆಯ ಹಣವನ್ನು ಲಾಕ್ ಮಾಡಿಕೊಂಡು ಸಾಲದ ಖಾತೆಗೆ ಜಮಾ ಮಾಡಿಕೊಂಡು ಆರ್ಬಿಐ ರೂಲ್ಸ್, ಸರ್ಕಾರದ ಆದೇಶವನ್ನು ತಿರಸ್ಕರಿಸುತ್ತಾರೆ. ಆಗ ಅವರಿಗೆ ಆರ್ಬಿಐ ರೂಲ್ಸ್, ಸರ್ಕಾರದ ಕಾನೂನುಗಳು ಅಡ್ಡ ಬರುವುದಿಲ್ಲ. ಇಂತಹ ಸಮಯದಲ್ಲಿ ರೈತರಿಗೆ ಅನುಕೂಲ ಮಾಡಿ ಸಹಕಾರ ನೀಡುವ ವಿಚಾರ ಬಂದಾಗ ಮಾತ್ರ ಕಾನೂನುಗಳು ಅಡ್ಡ ಬರುತ್ತವೆ ಎಂದರು.
ಸಹಾಯಕ ಕೃಷಿ ನಿರ್ದೇಶಕಿ ಶಾಂತಮಣಿ, ತಹಸೀಲ್ದಾರ್ ಆರ್.ಎಚ್. ಭಗವಾನ, ರೈತ ಮುಖಂಡ ಸುರೇಶಪ್ಪ ಪಾಲ್ಗೊಂಡಿದ್ದರು.