ಪುತ್ತೂರು: ಪುತ್ತೂರು ನಗರ ಸೇರಿದಂತೆ ಗ್ರಾಮಾಂತರ ಭಾಗದಲ್ಲಿರುವ ಗೂಡ್ಸ್ ವಾಹನಗಳಾದ ಪಿಕಪ್ ಹಾಗೂ ಇನ್ನಿತರ ವಾಹನದ ಮೇಲೆ ಪೊಲೀಸರು ಕೇಸು ಹಾಕುವ ಮೂಲಕ ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಗೂಡ್ಸ್ ವಾಹನ ಚಾಲಕ, ಮಾಲೀಕರು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ದೂರು ನೀಡಿದ್ದಾರೆ.

ದೂರು ಸ್ವೀಕರಿಸಿದ ಶಾಸಕರು ಪೊಲೀಸ್ ಇಲಾಖೆಗೆ ಕರೆ ಮಾಡಿ ಬಡ ವಾಹನ ಚಾಲಕರ ಮೇಲೆ ಕ್ಷುಲ್ಲಕ ಕಾರಣ ಒಡ್ಡಿ ಯಾವುದೇ ಕೇಸುಗಳನ್ನು ಮಾಡಬೇಡಿ ಎಂದ ಸೂಚಿಸಿದ್ದಾರೆ.

ದೂರಿನಲ್ಲಿ ಗೂಡ್ಸ್ ವಾಹನ ಚಾಲಕ ಮತ್ತು ಮ್ಹಾಲಕರ ಸಂಘದಲ್ಲಿ ನೊಂದಾಯಿತ ೫೦ ಜನ ಸದಸ್ಯರಿದ್ದಾರೆ. ನಮ್ಮ ವಾಹನಗಳಿಗೆ ಬಾಡಿಗೆ ಸಿಗುವುದೇ ಕಡಿಮೆ ಆಗಿದೆ. ಸಿಗುವಂತಹ ಬಾಡಿಗೆಯಿಂದ ನಮ್ಮನ್ನು ನಂಬಿರುವ ಕುಟುಂಬದ ಜೀವನ ಸಾಕುತ್ತಿದ್ದೇವೆ. ಕಳೆದ ಒಂದು ವರ್ಷದಿಂದ ಪೊಲೀಸ್ ಇಲಾಖೆಯವರು ಕ್ಷುಲ್ಲಕ ಕಾರಣವನ್ನು ಒಡ್ಡಿ ಗೂಡ್ಸ್ ವಾಹನದ ಮೇಲೆ ಕೇಸು ಮಾಡುತ್ತಿದ್ದಾರೆ. ಈ ರೀತಿಯಿಂದ ಬಡ ಚಾಲಕ ಮಾಲಿಕರಿಗೆ ಮಾನಸಿಕ ಹಿಂಸೆ ಆಗಿದೆ ಎಂದು ತಿಳಿಸಿದ್ದಾರೆ.

ಶಾಸಕರು ಪೊಲೀಸರಿಗೆ ಕರೆ ಮಾಡಿ, ಬಡವರ ಅನ್ನಕ್ಕೆ ಕಲ್ಲು ಹಾಕುವ ಕೆಲಸವನ್ನು ಪೊಲೀಸ್ ಇಲಾಖೆ ಮಾಡಬಾರದು. ಬಡವರ ಮೇಲೆ ಕರುಣೆಯಿಂದ ವರ್ತಿಸಬೇಕು. ಕಾನೂನಿಗೆ ವಿರುದ್ದವಾಗಿ ವರ್ತನೆ ಮಾಡಿದಲ್ಲಿ ಯಾರೇ ಆಗಲಿ ಏನೇ ಮಾಡಿದರೂ ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಕೇಸು ದಾಖಲಿಸಿ ಆದರೆ ಕ್ಷುಲ್ಲಕ ವಿಚಾರಕ್ಕೆ ಕೇಸು ಮಾಡದಂತೆ ತಿಳಿಸಿದರು.