ಸಾರಾಂಶ
ಜೀವನದಲ್ಲಿ ಬರುವ ಎಲ್ಲ ಪರೀಕ್ಷೆ, ಸವಾಲು ಸಾಧಿಸಲು ಸಾಯಿಬಾಬಾ ಅನುಗ್ರಹ ಇದ್ದರೆ ಮಾತ್ರ ಅವುಗಳು ಈಡೇರುವವು
ಗದಗ: ಭವಿಷತ್ಕಾಲದಲ್ಲಿ ಸಂಭವಿಸುವ ಘಟನೆಗಳ ಬಗ್ಗೆ ಸಾಯಿಬಾಬ ಭಕ್ತರಿಗೆ ಮುನ್ಸೂಚನೆಗಳನ್ನು ಸೂಚ್ಯವಾಗಿ ತಿಳಿಸುತ್ತಿದ್ದರು. ಭಕ್ತರ ಸಂಕಲ್ಪಗಳಿಗೆ ಬಾಬಾ ಅನುಗ್ರಹ ಇದ್ದರೆ ಮಾತ್ರ ಈಡೇರಲು ಸಾಧ್ಯ ಇಲ್ಲವಾದರೆ ಸೇವೆ-ಪ್ರಯತ್ನ ಮುಂದುವರೆಸಿ ಎಂಬುದಾಗಿರುತ್ತದೆ ಎಂದು ಧಾರ್ಮಿಕ ಚಿಂತಕ ಡಾ. ಎಸ್.ಬಿ. ಶೆಟ್ಟರ್ ಹೇಳಿದರು.
ಅವರು ನಗರದ ಶ್ರೀಶಿರಡಿ ಸಾಯಿಬಾಬಾ ಮಂದಿರದಲ್ಲಿ ಸೋಮವಾರ ಶ್ರೀಶಿರಡಿ ಸಾಯಿಬಾಬಾ ಸತ್ಸಂಗ ಸಮಿತಿಯಿಂದ ಗುರುಪೂರ್ಣಿಮೆ ಅಂಗವಾಗಿ ನಡೆದ ಶ್ರೀಸಾಯಿ ಸಚ್ಛರಿತ್ರೆ ಪ್ರವಚನ ಮಾಲಿಕೆ-4ರಲ್ಲಿ ಮಾತನಾಡಿದರು.ಬಾಬಾ ಕಣ್ಣು ತಪ್ಪಿಸಿ ನಾವು ಏನನ್ನೂ ಮಾಡಲಾಗದು ಹಾಗೇನಾದರೂ ಮಾಡಿದ್ದೇ ಆದರೆ ಅದು ಅವರಿಗೆ ತಿಳಿದು ಅಪರೂಪಕ್ಷವಾಗಿ ತಪ್ಪು ಮಾಡಿದವರಿಗೆ ಜ್ಞಾನೋದಯ ಆಗುವಂತೆ ಮಾಡಿ ಅವರನ್ನು ಜಾಗ್ರತಗೊಳಿಸುತ್ತಿದ್ದರು. ಜೀವನದಲ್ಲಿ ಬರುವ ಎಲ್ಲ ಪರೀಕ್ಷೆ, ಸವಾಲು ಸಾಧಿಸಲು ಸಾಯಿಬಾಬಾ ಅನುಗ್ರಹ ಇದ್ದರೆ ಮಾತ್ರ ಅವುಗಳು ಈಡೇರುವವು. ಅಚಲವಾಗಿ ನಂಬಿರುವ, ಶ್ರದ್ಧೆ ಭಕ್ತಿಯಿಂದ ನಡೆದುಕೊಳ್ಳುವ ಪರಿಶುದ್ಧ ಕಾಯಕ ಮಾಡಿ ಜೀವನ ಮಾಡುವ ಭಕ್ತರನ್ನು ಬಾಬಾ ಸದಾಕಾಲ ಸಂರಕ್ಷಿಸುತ್ತಿದ್ದರು ಎಂಬುದನ್ನು ಅವರ ಚರಿತ್ರೆಯ ಪುಟಗಳಿಂದ ತಿಳಿಯಬಹುದಾಗಿದೆ ಎಂದರು.
ಈ ವೇಳೆ ಸಾಯಿಬಾಬಾ ಧುನಿ ನಿರ್ಮಾಣಕ್ಕೆ ₹25 ಸಾವಿರ ದೇಣಿಗೆ ನೀಡಿದ ಪ್ರಶಾಂತ ನಾಯ್ಕರ್, ₹ 11 ಸಾವಿರ ದೇಣಿಗೆ ನೀಡಿದ ಶಾಂತಾಬಾಯಿ ಕಾರಜೋಳ ಹಾಗೂ ಪುಷ್ಪಾವತಿ ಬಸವರಾಜ ಬಳ್ಳಾರಿ ಪರಿವಾರವನ್ನು ಮತ್ತು ಪ್ರವಚನದ ಪ್ರಸಾದ ಸೇವೆ ವಹಿಸಿಕೊಂಡಿದ್ದ ಪ್ರಶಾಂತ ನಾಯ್ಕರ್, ರುದ್ರಪ್ಪ ಚಂದ್ರಪ್ಪ ಅರಳಿ, ಚಂದ್ರುಗೌಡ ಸಂಗನಗೌಡ ಕಲ್ಲನಗೌಡ್ರ ಪರಿವಾರವನ್ನು ಸನ್ಮಾನಿಸಿ ಗೌರವಿಸಲಾಯಿತು. ಸಮಿತಿಯ ಅಧ್ಯಕ್ಷ ಮಹೇಶ ತಲೇಗೌಡ್ರ ಸ್ವಾಗತಿಸಿದರು. ಕಾರ್ಯದರ್ಶಿ ರವಿ ಚಿಂಚಲಿ ನಿರೂಪಿಸಿ ವಂದಿಸಿದರು.