ಸಮುದಾಯ ಬೀಜಬ್ಯಾಂಕ್ ಉದ್ಘಾಟಿಸಿದ ಜರ್ಮನ್ ಕನ್ಸೂಲೇಟ್‌ನ ವೈಸ್‌ಕನ್ಸೂಲ್

ಕನ್ನಡಪ್ರಭ ವಾರ್ತೆ ಕುಮಟಾಸಾಂಪ್ರದಾಯಿಕ ಭತ್ತದ ತಳಿ ಸಂರಕ್ಷಿಸಿ ಭಾರತೀಯ ನೆಲಮೂಲದ ಸಾಂಪ್ರದಾಯಿಕ ಕೃಷಿ ಪದ್ಧತಿ ಉತ್ತೇಜಿಸಲು ಬೀಜ ಬ್ಯಾಂಕನ್ನು ಸ್ಥಾಪಿಸಲಾಗಿದೆ ಎಂದು ಜರ್ಮನ್ ಕನ್ಸೂಲೇಟ್‌ನ ವೈಸ್‌ಕನ್ಸೂಲ್ ಕಾಜಾ ಶ್ವಾರ್ಮ ಹೇಳಿದರು.

ತಾಲೂಕಿನ ಕಾಗಾಲ ಕಡ್ಲೆಮನೆಯಲ್ಲಿ ನಿರ್ಮಿಸಿರುವ ಸಮುದಾಯ ಬೀಜಬ್ಯಾಂಕ್ ಉದ್ಘಾಟಿಸಿ ಮಾತನಾಡಿದರು. ಬೆಂಗಳೂರಿನ ಜರ್ಮನ್ ಕನ್ಸೂಲೇಟ್ ಹಾಗೂ ಶಿರಸಿಯ ಸ್ಕೊಡ್‌ವೆಸ್ ಸಂಸ್ಥೆ ಸಹಯೋಗದಲ್ಲಿ ಅಳಿವಿನಂಚಿನಲ್ಲಿರುವ ೬೦೦ಕ್ಕೂ ಅಧಿಕ ಭತ್ತದ ತಳಿಗಳನ್ನು ಸಂರಕ್ಷಿಸುವ ಉದ್ದೇಶದಿಂದ ಈ ಬೀಜ ಬ್ಯಾಂಕ್‌ನ್ನು ಸ್ಥಾಪಿಸಲಾಗಿದ್ದು, ರೈತರು ಈ ಬೀಜ ಬ್ಯಾಂಕ್‌ನ ಸದುಪಯೋಗ ಪಡೆದುಕೊಂಡು ಸಾಂಪ್ರದಾಯಿಕ ಭತ್ತದ ಬೀಜ ಸಂರಕ್ಷಿಸಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಬೀಜಬ್ಯಾಂಕಿನ ಸಂಸ್ಥಾಪಕ ಟ್ರಸ್ಟಿ ಸುಭಾಷ ಶಿರಾಲಿ ಮಾತನಾಡಿ, ರಾಜ್ಯಕ್ಕೆ ಮಾದರಿಯಾಗುವ ರೀತಿಯಲ್ಲಿ ಭತ್ತದ ತಳಿಗಳ ಸಂರಕ್ಷಣೆಗಾಗಿ ಬೀಜ ಬ್ಯಾಂಕ್‌ನ್ನು ಸ್ಥಾಪಿಸಲಾಗಿದ್ದು, ಸ್ಥಳೀಯ ಆಸಕ್ತ ರೈತರಿಗೆ ಈ ಬೀಜಗಳನ್ನು ವಿತರಣೆ ಮಾಡಿ ಅವರಿಂದ ವಿನಿಮಯ ಮಾಡಿಕೊಂಡು ಭತ್ತದ ಬೀಜ ಪಡೆಯಲಾಗುವುದು. ಈಗಾಗಲೇ ಈ ಬೀಜ ಬ್ಯಾಂಕ್‌ಗಳಲ್ಲಿ ೬೦೦ಕ್ಕೂ ಅಧಿಕ ಬಗೆಯ ಭತ್ತದ ಬೀಜ ಸಂಗ್ರಹಿಸಲಾಗಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಾಂಪ್ರದಾಯಿಕ ಬೀಜ ಸಂಗ್ರಹಿಸುವ ಉದ್ದೇಶ ಹೊಂದಲಾಗಿದೆ ಎಂದರು. ವಾಣಿಜ್ಯ ಮಾರುಕಟ್ಟೆಗಳಿಂದ ಉಂಟಾಗುತ್ತಿರುವ ಅಡ್ಡ ಪರಿಣಾಮಗಳನ್ನು ತಡೆಹಿಡಿಯಲು ಬೀಜ ಬ್ಯಾಂಕ್ ಉತ್ತಮ ಸಾಧನ ಎಂದರು. ಮುಖ್ಯ ಅತಿಥಿ ಜಿ.ಐ.ಝಡ್‌ನ ರಾಜ್ಯ ಯೋಜನಾ ಸಮನ್ವಯಾಧಿಕಾರಿ ನಮೆರ್ತಾ ಶರ್ಮಾ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶಿವಪ್ರಸಾದ್ ಗಾಂವಕರ್, ಶಿರಸಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥೆ ಡಾ. ರೂಪಾ ಪಾಟೀಲ್, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನ ಪ್ಲಾಂಟ್ ಸೈಂಟಿಸ್ಟ್ ಡಾ. ಎಂ.ಡಿ. ಸುಭಾಷ್ ಚಂದ್ರನ್, ಕಾಗಾಲ ಪಂಚಾಯಿತಿ ಪಿಡಿಒ ನವೀನ ನಾಯ್ಕ ಮಾತನಾಡಿದರು. ಕಾರ್ಯಕ್ರಮದಲ್ಲಿ ೧೫೦ಕ್ಕೂ ಹೆಚ್ಚು ಸಾಂಪ್ರದಾಯಿಕ ಭತ್ತದ ತಳಿಗಳನ್ನು ಸಂವರ್ಧಿಸಿದ ಆರ್.ಜಿ.ಭಟ್ ದೇವತೆಮನೆ ಹಾಗೂ ೬೦೦ಕ್ಕೂ ಹೆಚ್ಚಿನ ಭತ್ತದ ತಳಿಗಳನ್ನು ಸಂಗ್ರಹಿಸಿದ ನಾಗರಾಜ ನಾಯ್ಕ ಅವರನ್ನು ಸನ್ಮಾನಿಸಲಾಯಿತು.ಸ್ಕೊಡ್‌ವೆಸ್ ಕಾರ್ಯಕ್ರಮಾಧಿಕಾರಿ ಡಾ. ನಾರಾಯಣ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸ್ಕೊಡ್‌ವೆಸ್‌ನ ಸಂಯೋಜಕ ಗಂಗಾಧರ ನಾಯ್ಕ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಪ್ರಗತಿಪರ ಕೃಷಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.