ಶಿರಹಟ್ಟಿ: ಆದಿಗುರು ಶಂಕರಾಚಾರ್ಯರು ಆಧ್ಯಾತ್ಮಿಕ ಬದುಕಿನ ಬೆಳಕಾಗಿ ವಿಶ್ವರೂಪದ ಚೇತನವಾಗಿ ತಮ್ಮ ೩೨ನೇ ವಯಸ್ಸಿನಲ್ಲಿ ಇಡೀ ದೇಶಾದ್ಯಂತ ಸಂಚಾರ ಮಾಡಿ ಧಾರ್ಮಿಕ ತತ್ವಗಳನ್ನು ಬೋಧಿಸುವುದಕ್ಕೆ ಮಠಗಳನ್ನು ಸ್ಥಾಪಿಸಿದರು. ಆದಿಗುರು ಶಂಕರಾಚಾರ್ಯರು ಭಾರತೀಯ ದಾರ್ಶನಿಕ ಪರಂಪರೆಯಲ್ಲಿ ಅತ್ಯುನ್ನತ ಸ್ಥಾನ ಹೊಂದಿದ್ದಾರೆ ಎಂದು ತಹಸೀಲ್ದಾರ್ ಕೆ. ರಾಘವೇಂದ್ರ ರಾವ್ ತಿಳಿಸಿದರು.
ಮಂಗಳವಾರ ತಾಲೂಕು ಆಡಳಿತದಿಂದ ತಹಸೀಲ್ದಾರ್ ಕಾರ್ಯಾಲಯದ ಸಭಾಭವನದಲ್ಲಿ ಆದಿಗುರು ಶಂಕರಾಚಾರ್ಯರ ಜಯಂತಿ ಪ್ರಯುಕ್ತ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.ಅದ್ವೈತ ವೇದಾಂತ ಎಂಬ ತತ್ವವನ್ನು ಅವರು ಸುಸ್ಪಷ್ಟವಾಗಿ ಸ್ಥಾಪಿಸಿದರು. ಹುಟ್ಟು- ಸಾವು ಮಾನವನ ನೈಸರ್ಗಿಕ ಬದುಕಿನ ಕ್ರಿಯೆಯಾಗಿದ್ದು, ಜಗತ್ತಿನಲ್ಲಿ ಯಾವುದು ಶಾಶ್ವತವಲ್ಲ, ನಶ್ವರವಾಗಿದೆ. ಹುಟ್ಟು- ಸಾವುಗಳನ್ನು ಗೆದ್ದು ಮೋಕ್ಷದ ಮಾರ್ಗ ಮಾನವನು ತಪುಪಬೇಕಾಗಿದೆ ಎಂದರು.
ಸತ್ಯ, ಪ್ರಾಮಾಣಿಕತೆ ಬದುಕಿನ ಪರಿಶುದ್ಧ ಮೌಲ್ಯಗಳು. ಆಧ್ಯಾತ್ಮಿಕ ಬದುಕಿನ ಚಿಂತನೆ ಬೆಳೆಸಿಕೊಳ್ಳುವುದು ಅಗತ್ಯವಿದ್ದು, ಮನುಕುಲಕ್ಕೆ ಆದಿಗುರು ಶಂಕರಾಚಾರ್ಯರು ದಾರಿದೀಪವಾಗಿ ಸನ್ಮಾರ್ಗವನ್ನು ತೋರಿಸಿಕೊಟ್ಟ ಶ್ರೇಷ್ಠ ಧಾರ್ಮಿಕ ದಾರ್ಶನಿಕರಾಗಿದ್ದಾರೆ ಎಂದರು.ಶಂಕರಾಚಾರ್ಯರು ಭಾರತದೆಲ್ಲೆಡೆ ಸಂಚರಿಸಿ ಧರ್ಮವನ್ನು ಪುನರುಜ್ಜೀವನಗೊಳಿಸಿದರು. ಅಂಧಶ್ರದ್ಧೆಗಳನ್ನು ಪ್ರಶ್ನಿಸಿದರು. ವೇದ ಮತ್ತು ಉಪನಿಷತ್ತಿನ ಸಾರವನ್ನು ಜನರಿಗೆ ಸರಳವಾಗಿ ತಿಳಿಸಿದರು. ಅವರು ಸ್ಥಾಪಿಸಿದ ಮಠಗಳು ಶೃಂಗೇರಿ, ದ್ವಾರಕಾ, ಪುರಿ, ಜ್ಯೋತಿರ್ಮಠ ಇಂದಿಗೂ ಧಾರ್ಮಿಕ ಮತ್ತು ಆಧ್ಯಾತ್ಮಿಕ ಕೇಂದ್ರಗಳಾಗಿ ಕಾರ್ಯನಿರ್ವಹಿಸುತ್ತಿವೆ. ಅವರ ಸಂದೇಶವು ಸ್ಪಷ್ಟ ಜ್ಞಾನವೇ ಮೋಕ್ಷಕ್ಕೆ ದಾರಿ. ಅದರ ಕಾರಣಕ್ಕೆ ಅವರನ್ನು ಮನುಕುಲಕ್ಕೆ ದಾರಿದೀಪ ಎಂದು ಕರೆಯುವುದು ಸೂಕ್ತವಾಗಿದೆ ಎಂದರು.ಕಾರ್ಯಕ್ರಮದಲ್ಲಿ ತಹಸೀಲ್ದಾರ ಕಾರ್ಯಾಲಯದ ಸಿಬ್ಬಂದಿ ಹಾಗೂ ಸಮಾಜದ ಪ್ರಮುಖರು ಪಾಲ್ಗೊಂಡಿದ್ದರು.