ಪುತ್ತೂರು: ಪ್ರಾಯೋಗಶೀಲತೆಯ ಮೂಲಕ ಸಾಹಿತ್ಯ ಮತ್ತು ಸಾಮಾಜಿಕ ವಲಯದಲ್ಲಿ ಕಾರ್ಯನಿರ್ವಹಿಸಿ ಕಾರಂತರು, ಯಕ್ಷಗಾನಕ್ಕೆ ಜಾಗತಿಕ ಮನ್ನಣೆಯನ್ನು ದೊರಕಿಸಿಕೊಟ್ಟವರು. ಪ್ರತಿಯೊಂದು ಕ್ಷೇತ್ರಕ್ಕೂ ಸಹ ತಮ್ಮದೇ ಕೊಡುಗೆ ನೀಡಿದ ಅವರು ಜ್ಞಾನದ ದಿಗಂತವನ್ನು ವಿಸ್ತರಿಸಿದರು ಎಂದು ಚಿಂತಕ ಡಾ. ವರದರಾಜ್ ಚಂದ್ರಗಿರಿ ಹೇಳಿದರು. ಅವರು ಪುತ್ತೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಡಾ.ಶಿವರಾಮ ಕಾರಂತ ಟ್ರಸ್ಟ್ ವತಿಯಿಂದ ನಡೆದ ಅರಿವಿನ ಬೆಳಕು ಉಪನ್ಯಾಸ ಮಾಲೆ- 15 ಕಾರ್ಯಕ್ರಮದಲ್ಲಿ ಕಾರಂತರ ಕಾದಂಬರಿಗಳಲ್ಲಿ ವೈಚಾರಿಕ ಚಿಂತನೆ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲ ಪ್ರೊ. ಸುಬ್ಬಪ್ಪ ಕೈಕಂಬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕಾರಂತರ ಕಾದಂಬರಿ ಮಾತ್ರವಲ್ಲದೇ ಅವರ ಪ್ರತಿಯೊಂದು ಸಾಹಿತ್ಯ ಪ್ರಕಾರವು ವೈಚಾರಿಕ ಚಿಂತನೆಯನ್ನು ಹೊಂದಿದೆ. ಎಲ್ಲ ಕ್ಷೇತ್ರಗಳಲ್ಲಿಯೂ ಅವರ ಕೊಡುಗೆ ಅಪಾರವಾಗಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ. ಶಿವರಾಮ ಕಾರಂತ ಟ್ರಸ್ಟಿನ ಅಧ್ಯಕ್ಷ ಡಾ.ಗಣನಾಥ ಶೆಟ್ಟಿ ಎಕ್ಕಾರು, ಜ್ಞಾನವೆಂಬುದು ಬಹುಮುಖಿಯಾದದ್ದು, ಎಲ್ಲಾ ವಿಚಾರಗಳ ಬಗೆಗೆ ಅರಿತಾಗ ಚಿಂತನ ಕ್ರಮದಲ್ಲಿ ಬದಲಾವಣೆಯಾಗುತ್ತದೆ. ವಿದ್ಯಾರ್ಥಿ ಹೊಸ ಹೊಸ ವಿಚಾರಗಳ ಅರಿಯುವ ಕುರಿತು ಆಸಕ್ತಿ ಬೆಳೆಸಿಕೊಳ್ಳಬೇಕು ಎಂದರು. ಕಾರ್ಯಕ್ರಮದಲ್ಲಿ ಡಾ. ಶಿವರಾಮ ಕಾರಂತ ಟ್ರಸ್ಟಿನ ಸದಸ್ಯ ಕಾರ್ಯದರ್ಶಿ ಪೂರ್ಣಿಮಾ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ. ವಿದ್ಯಾರ್ಥಿ ಜೀವನ್ ನಿರೂಪಿಸಿ, ಐ.ಕ್ಯೂ.ಎ.ಸಿ ಸಂಚಾಲಕ ಪುಪ್ಪರಾಜ್ ವಂದಿಸಿದರು.