ಸ್ಥಳೀಯ ಹಾಗೂ ರಾಜ್ಯದ ನಾನಾಕಡೆಗಳಿಂದ ಆಗಮಿಸಿದ್ದ ಸಹಸ್ರಾರು ಭಕ್ತಾದಿಗಳು ಸಿಡಿ ಉತ್ಸವದಲ್ಲಿ ಪಾಲ್ಗೊಂಡರಲ್ಲದೇ ನೂತನ ವಧು- ವರರು ಭಾಗವಹಿಸುವ ಮೂಲಕ ಬಾಯಿಬೀಗ ಇನ್ನಿತರೆ ಹರಕೆ- ಹವನಗಳನ್ನು ಪೂರೈಸಿದರು.
ಕನ್ನಡಪ್ರಭ ವಾರ್ತೆ ಮದ್ದೂರು
ಶ್ರೀ ಮದ್ದೂರಮ್ಮನವರ ವರಪುತ್ರ ಸಿಡಿರಣ್ಣನವರ ಸಿಡಿ ಉತ್ಸವ ಗುರುವಾರ ಮಧ್ಯಾಹ್ನ ವಿವಿಧೆಡೆಗಳಿಂದ ಆಗಮಿಸಿದ್ದ ಸಹಸ್ರಾರು ಭಕ್ತಾದಿಗಳ ಸಮ್ಮುಖದಲ್ಲಿ ಅದ್ಧೂರಿಯಾಗಿ ಜರುಗಿತು.ಪ್ರತಿ ವರ್ಷ ಶ್ರೀ ಮದ್ದೂರಮ್ಮನವರ ಅಗ್ನಿಕೊಂಡೋತ್ಸವದ ಮರುದಿನ ಸಡಗರ- ಸಂಭ್ರಮದ ಸಿಡಿ ಉತ್ಸವ ನೆರವೇರಿಸುತ್ತಾ ಬರಲಾಗುತ್ತಿದೆ. ಗುರುವಾರ ಮಧ್ಯಾಹ್ನ ಮೈಸೂರು, ಬೆಂಗಳೂರು ಹೆದ್ದಾರಿ ಬದಿಯ ಮೂಲ ದೇವಾಲಯದ ಹೊರ ಆವರಣದಲ್ಲಿ ಸಾವಿರಾರು ಭಕ್ತ ಸಮೂಹದ ಜಯಘೋಷಗಳೊಡನೆ ಉತ್ಸವವು ವಿಜೃಂಭಣೆಯಿಂದ ನೆರವೇರಿತು.
ಸ್ಥಳೀಯ ಹಾಗೂ ರಾಜ್ಯದ ನಾನಾಕಡೆಗಳಿಂದ ಆಗಮಿಸಿದ್ದ ಸಹಸ್ರಾರು ಭಕ್ತಾದಿಗಳು ಸಿಡಿ ಉತ್ಸವದಲ್ಲಿ ಪಾಲ್ಗೊಂಡರಲ್ಲದೇ ನೂತನ ವಧು- ವರರು ಭಾಗವಹಿಸುವ ಮೂಲಕ ಬಾಯಿಬೀಗ ಇನ್ನಿತರೆ ಹರಕೆ- ಹವನಗಳನ್ನು ಪೂರೈಸಿದರು.ಸಿಡಿ ವೇಳೆ ನವಜಾತ ಶಿಶುಗಳೂ ಸೇರಿದಂತೆ ಮಕ್ಕಳನ್ನು ಸಿಡಿಯ ಕಾಗಡಿಯಲ್ಲಿ ಸುತ್ತಿಸಿದರೆ ಯಾವುದೇ ವ್ಯಾದಿಗಳು ದೂರಾಗುವುದೆಂಬ ಪ್ರತೀತಿ ಹಿನ್ನೆಲೆಯಲ್ಲಿ ಮಕ್ಕಳನ್ನು ಪೋಷಕರು ಸಿಡಿ ವೇಳೆ ಅಲಂಕೃತ ಕಾಗಡಿ(ತೊಟ್ಟಿಲು)ಯಲ್ಲಿಟ್ಟು ಸುತ್ತಿಸುವ ಮೂಲಕ ಧನ್ಯತೆ ಮೆರೆದರು.
ಉತ್ಸವದ ಆರಂಭಕ್ಕೂ ಮುನ್ನ ಮದ್ದೂರಮ್ಮನವರ ವರಪುತ್ರ ಸಿಡಿರಣ್ಣನವರನ್ನು ನಗರದ ಮಠಮನೆಯಿಂದ ಹೆಬ್ಬಾರೆಗಳ ಸಹಿತ ಮೆರವಣಿಗೆಯೊಂದಿಗೆ ಸೋಮೆಗೌಡರ ಬೀದಿ, ದೊಡ್ಡಿ ಬೀದಿ ಮೂಲಕ ಮದ್ದೂರಮ್ಮನವರ ಮೂಲ ದೇವಾಲಯಕ್ಕೆ ಕರೆತರಲಾಯಿತು.ಬಿಗಿ ಬಂದೋಬಸ್ತ್:
ಸಿಡಿರಣ್ಣ ಉತ್ಸವದ ಅಂಗವಾಗಿ ಅಪಾರ ಸಂಖ್ಯೆಯ ಭಕ್ತಾದಿಗಳು ಪಾಲ್ಗೊಂಡ ಹಿನ್ನೆಲೆಯಲ್ಲಿ ಮದ್ದೂರು ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದರಲ್ಲದೆ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಹಲವು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿದರು.