ಧಾರವಾಡ:
9 ಶೈಕ್ಷಣಿಕ ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ಬೆಳಗಾವಿ ವಿಭಾಗವು ಪ್ರಸಕ್ತ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಶೇ. 95.71ರಷ್ಟು ಫಲಿತಾಂಶ ಸಾಧನೆ ಮಾಡುವ ಮೂಲಕ ರಾಜ್ಯಕ್ಕೆ ಮೊದಲ ಸ್ಥಾನ ಗಳಿಸಿದೆ.ರಾಜ್ಯದ ಇತರ ಎಲ್ಲ ವಿಭಾಗಗಳಿಗಿಂತ ಈ ಬಾರಿ ಉತ್ತಮ ಸಾಧನೆ ಮಾಡಿರುವ ಬೆಳಗಾವಿ ವಿಭಾಗವು, ಪರೀಕ್ಷೆಗೆ ಹಾಜರಾದ 2.20 ಲಕ್ಷ ವಿದ್ಯಾರ್ಥಿಗಳಲ್ಲಿ 2.10 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 2024-25ರ ಶೈಕ್ಷಣಿಕ ವರ್ಷಕ್ಕೆ ಹೋಲಿಸಿದರೆ, ವಿಭಾಗದ ಎಲ್ಲ ಜಿಲ್ಲೆಗಳಲ್ಲಿ ಒಟ್ಟಾರೆ ಉತ್ತೀರ್ಣ ಶೇಕಡಾವಾರು ಗಣನೀಯ ಏರಿಕೆ ಕಂಡಿದೆ ಎಂದು ಶಿಕ್ಷಣ ಇಲಾಖೆ ಅಪರ ಆಯುಕ್ತ ಈಶ್ವರ ಉಳ್ಳಾಗಡ್ಡಿ ಶುಕ್ರವಾರ ಸುದ್ದಿಗಾರರಿಗೆ ಮಾಹಿತಿ ನೀಡಿದರು.
ಕಟಗೇರಿ (ಅಥಣಿ ತಾಲೂಕು, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ) ಸರ್ಕಾರಿ ಪ್ರೌಢಶಾಲೆಯ ಪ್ರಾರ್ಥನಾ ನಾಗಪ್ಪ ಬಿರಾದಾರ ಪಾಟೀಲ್ ಮತ್ತು ನಾಗರಬೆಟ್ಟ (ಮುದ್ದೇಬಿಹಾಳ ತಾಲೂಕು, ವಿಜಯಪುರ ಜಿಲ್ಲೆ)ದ ಆಕ್ಸ್ಫರ್ಡ್ ಇಂಗ್ಲಿಷ್ ಮಾಧ್ಯಮ ಪ್ರೌಢಶಾಲೆಯ ಸೌಜನ್ಯ ಬಸವರಾಜ ಕಂದಕೂರ 625ಕ್ಕೆ 625 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿದ್ದಾರೆ ಎಂದರು.ಜಿಲ್ಲೆಯ ಸಾಧನೆಗಳ ಪೈಕಿ ಉತ್ತರ ಕನ್ನಡವು ಶೇ. 98.09ರಷ್ಟು ಉತ್ತೀರ್ಣತೆಯೊಂದಿಗೆ ಮೂರನೇ ಸ್ಥಾನ ಉಳಿಸಿಕೊಂಡಿದೆ. ಇಲ್ಲಿ ಪರೀಕ್ಷೆ ಬರೆದ 8,809 ವಿದ್ಯಾರ್ಥಿಗಳಲ್ಲಿ 8,641 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಶಿರಸಿ ಶೇ. 97.21ನೊಂದಿಗೆ 7ನೇ ಸ್ಥಾನದಿಂದ ಆರನೇ ಸ್ಥಾನಕ್ಕೆ ಏರಿದರೆ, ಹಾವೇರಿ 9,115 ವಿದ್ಯಾರ್ಥಿಗಳಲ್ಲಿ ಶೇ. 96.87ರಷ್ಟು ಉತ್ತೀರ್ಣರಾಗಿ 13ರಿಂದ ಏಳನೇ ಸ್ಥಾನಕ್ಕೆ ಗಮನಾರ್ಹವಾಗಿ ಏರಿದೆ. ಗದಗ ಶೇ.95.24ರಷ್ಟು ಫಲಿತಾಂಶ ಪಡೆದು 17ರಿಂದ 16ನೇ ಸ್ಥಾನಕ್ಕೆ ಏರಿದೆ. ಒಟ್ಟು 14,612 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಈ ಪೈಕಿ 13,916 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ವಿಜಯಪುರ (ಸೇ.94.16) 34ನೇ ಸ್ಥಾನದಿಂದ 22ನೇ ಸ್ಥಾನಕ್ಕೆ ಜಿಗಿತ ಕಂಡಿದೆ. 38,423 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಈ ಪೈಕಿ 36,180 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಚಿಕ್ಕೋಡಿ (ಶೇ.94.09) 26ನೇ ಸ್ಥಾನದಿಂದ 23ನೇ ಸ್ಥಾನಕ್ಕೆ ಏರಿದೆ. ಇಲ್ಲಿ 41,500 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಅದರಲ್ಲಿ 39,049 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಬಾಗಲಕೋಟೆ (ಶೇ.95.42) 16ನೇ ಸ್ಥಾನದಿಂದ 14ನೇ ಸ್ಥಾನಕ್ಕೆ ಏರಿದ್ದು ಪರೀಕ್ಷೆ ಬರೆದ ಒಟ್ಟು 30,111 ವಿದ್ಯಾರ್ಥಿಗಳಲ್ಲಿ 28,731 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ಮಾಹಿತಿ ನೀಡಿದರು.
ಧಾರವಾಡ ಶೇ.95.59ರಷ್ಟು ಉತ್ತೀರ್ಣರಾಗುವ ಮೂಲಕ 18ರಿಂದ 12ನೇ ಸ್ಥಾನಕ್ಕೆ ಏರಿದೆ. ಹಾಜರಾದ ಒಟ್ಟು 26,113 ವಿದ್ಯಾರ್ಥಿಗಳಲ್ಲಿ 24,961 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಬೆಳಗಾವಿ ಕೂಡ ಉತ್ತಮ ಸುಧಾರಣೆ ಕಂಡಿದೆ. ಕಳೆದ ವರ್ಷ ಶೇ.80.48ಕ್ಕೆ ಹೋಲಿಸಿದರೆ ಈ ಬಾರಿ ಶೇ. 94.75ರಷ್ಟು ಉತ್ತೀರ್ಣರಾಗಿದ್ದಾರೆ. ಹೀಗಾಗಿ 25ರಿಂದ 18ನೇ ಸ್ಥಾನಕ್ಕೆ ಏರಿದೆ. 30,860 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಅದರಲ್ಲಿ 29,241 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ಉಳ್ಳಾಗಡ್ಡಿ ತಿಳಿಸಿದರು.ಏನು ಕಾರಣ?
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಈ ಪ್ರದೇಶದಾದ್ಯಂತ ಪ್ರಾರಂಭಿಸಿದ ''''''''ಮಿಷನ್ -40'''''''' ಈ ಯಶಸ್ಸಿಗೆ ಕಾರಣ ಎಂದಿರುವ ಅಪರ ಆಯುಕ್ತ ಈಶ್ವರ್ ಉಳ್ಳಾಗಡ್ಡಿ, ಎಲ್ಲ ಜಿಲ್ಲೆಗಳ ಡಿಡಿಪಿಐ, ಶಿಕ್ಷಕರು ಹಾಗೂ ಸಾಧಕ ವಿದ್ಯಾರ್ಥಿಗಳ ಪರಿಶ್ರಮವೇ ಕಾರಣ ಎಂದರು.