ಉಡುಪಿ/ಮಂಗಳೂರು:

ಸೋಮವಾರ ಬೆಳಗ್ಗೆ ಭಾರಿ ಗಾಳಿ ಮಳೆಗೆ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ವಾರಂಬಳ್ಳಿ ಗ್ರಾಮದ ಬೋರ್ಡ್ ಪ್ರೈಮರಿ ಶಾಲೆಯ ಮೇಲ್ಚಾವಣಿಯ ಹೆಂಚು ಬಿದ್ದು ವಿದ್ಯಾರ್ಥಿನಿ ಕಾಲಿಗೆ ಗಾಯವಾಗಿದೆ.

ಬ್ರಹ್ಮಾವರ ತಹಸೀಲ್ದಾರರ ಕಚೇರಿ ಪ್ರಾಥಮಿಕ ವರದಿ ಸಲ್ಲಿಸಿದ್ದು, ಹೆಂಚು ಬಿದ್ದು ವಿದ್ಯಾರ್ಥಿನಿ ಕಾಲಿಗೆ ಗಾಯವಾಗಿದೆ. ಚಿಕಿತ್ಸೆ ನೀಡಲಾಗಿದೆ ಎಂದು ತಿಳಿಸಲಾಗಿದೆ.

ಈ ಶಾಲೆಯ ಮಾಡು ಸಂಪೂರ್ಣ ಶಿಥಿಲಾವಸ್ಥೆಯಲ್ಲಿದ್ದು, ತರಗತಿಯಿಂದ ತಕ್ಷಣ ವಿದ್ಯಾರ್ಥಿಗಳನ್ನು ತೆರವುಗೊಳಿಸಲಾಯಿತು. ಕಂದಾಯ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ, ಮಾಡು ದುರಸ್ತಿಗೆ ಕ್ರಮ ಕೈಗೊಳ್ಳಲಾಗಿದೆ.ಜಿಲ್ಲೆಯಲ್ಲಿ ಮಳೆ ತೀವ್ರಗತಿ ಪಡೆದಿದ್ದು, ಭಾರಿ ಗಾಳಿಯಿಂದಾಗ ಸಾಕಷ್ಟು ಮನೆಗಳಿಗೆ ಹಾನಿಯಾಗಿದೆ. ಕಳೆದ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ 60 ಮಿ.ಮೀ.ಗೂ ಅಧಿಕ ಮಳೆಯಾಗಿದೆ.ಕುಂದಾಪುರ ತಾಲೂಕಿನ ಸಿದ್ದಾಪುರದಲ್ಲಿ 4 ಮನೆಗಳಿಗೆ ತೀವ್ರ ಹಾನಿ ಉಂಟಾಗಿದೆ. ಇಲ್ಲಿನ ಪುಷ್ಪ ತಿಮ್ಮ ಅವರ ಮನೆಗೆ 15,000 ರು., ಸಂಜೀವಿ ಮಹಾಬಲ ಶೆಟ್ಟಿ ಅವರ ಮನೆಗೆ 20,000 ರು., ಪ್ರೇಮ ಉಮೇಶಅವರ ಮನೆಗೆ 20,000 ರು., ಜ್ಯೋತಿ ವಸಂತ ಶೆಟ್ಟಿ ಅವರ ಮನೆಗೆ 15,000 ರು. ನಷ್ಟ ಸಂಭವಿಸಿದೆ.ಅಂಪಾರು ಗ್ರಾಮದ ಪಾರ್ವತಿ ಕಾಂಚನ್ ಅವರ ಮನೆಯ ಮೇಲೆ ಮರ ಬಿದ್ದು 10,000 ರು., ಕರ್ಕುಂಜೆ ಗ್ರಾಮದ ಹಾಜಿರಾ ಅಬ್ದುಲ್ ರಹಿಮಾನ್ ಅವರ ಮನೆ ಮೇಲೆ ಮರ ಬಿದ್ದು 50,000 ರು. ಮತ್ತು ಮುತ್ತು ಶೇಷ ಅವರ ಮನೆ ಮೇಲೆ ಮರ ಬಿದ್ದು 20,000 ರು., ಹಾರ್ದಳ್ಳಿಮಂಡಳ್ಳಿ ಗ್ರಾಮದ ಗಣಪು ಮೊಗವೀರ ಮನೆ ಮೇಲೆ ಮರ ಬಿದ್ದು 30,000 ರು., ಕನ್ಯಾನ ಗ್ರಾಮದ ಜಲಜಾ ಮೊಗವೀರ ಅವರ ಮನೆ ಮೇಲೆ ಮರ ಬಿದ್ದು 20,000 ರು., ಗುಜ್ಜಾಡಿ ಗ್ರಾಮದ ಮಂಜುನಾಥ ಆಚಾರ್ಯ ಅವರ ಮನೆಗೆ 30,000 ರು., ಉಳ್ಳೂರು ಗ್ರಾಮದ ಸಾಧಮ್ಮ ಶೆಟ್ಟಿ ಅವರ ಮನೆ ಮೇಲೆ ಮರ ಬಿದ್ದು 6,500 ರು., ಕೆದೂರು ಗ್ರಾಮದ ಸಾಧು ಶೆಟ್ಟಿ ಮನೆ ಮೇಲೆ ಮರ ಬಿದ್ದು10,000 ರು. ಹಾನಿಯಾಗಿದೆ.

ಬೈಂದೂರು ತಾಲೂಕಿನ ಶಿರೂರು ಗ್ರಾಮದ ಮಾಧವ ಪೂಜಾರಿ ಮನೆಗೆ 40,000 ರು. ಮತ್ತು ಹೆಬ್ರಿ ತಾಲೂಕಿನ ಪಾರ್ವತಿ ಪೂಜಾರಿ ಮನೆ ಮೇಲೆ ಮರ ಬಿದ್ದು 30,000 ರು. ಹಾನಿಯಾಗಿದೆ.ಮಂಗಳೂರು ವರದಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರ ಸಾಧರಣ ಮಳೆಯಾಗಿದೆ. ಬಿಟ್ಟು ಬಿಟ್ಟು ಮಳೆಯಾಗುತ್ತಿರುವುದು ಮುಂದುವರಿದಿದೆ.ಸೋಮವಾರ ಬೆಳ್ತಂಗಡಿ, ಪುತ್ತೂರು, ಕಡಬ ಸೇರಿದಂತೆ ಹಲವೆಡೆ ಬೆಳಗಿನ ಜಾವ ಗಾಳಿ ಸಹಿತ ಉತ್ತಮ ಮಳೆಯಾಗಿದ್ದರೆ, ಮಧ್ಯಾಹ್ನದ ವೇಳೆಗೆ ಬಿಸಿಲು ಮಿಶ್ರಿತ ವಾತಾವರಣ ಕಂಡುಬಂದಿತ್ತು. ಸಂಜೆ ಹಲವು ಭಾಗಗಳಲ್ಲಿ ಮತ್ತೆ ಮಳೆಯಾಗಿದೆ. ಸೋಮವಾರ ಬೆಳಗ್ಗಿನ ವರೆಗೆ ಜಿಲ್ಲೆಯಲ್ಲಿ ಒಟ್ಟು 35.8 ಮಿಲಿ ಮೀಟರ್ ಮಳೆ ದಾಖಲಾಗಿದೆ. ಜಿಲ್ಲೆಯ ಗರಿಷ್ಠ ಮಳೆ ಬೆಳ್ತಂಗಡಿಯಲ್ಲಿ 52.8 ಮಿ.ಮೀ. ದಾಖಲಾಗಿದೆ.