ನರಗುಂದ: ಶಿಕ್ಷಕರ ಮಾರ್ಗದರ್ಶನ ಇದ್ದಾಗಲೇ ಜೀವನದಲ್ಲಿ ಯಶಸ್ಸು ಹೊಂದಲು ಸಾಧ್ಯ. ಮಕ್ಕಳು ಹೆಚ್ಚು ಗೌರವ ನೀಡುವುದು ತಾಯಿ, ತಂದೆ ಬಿಟ್ಟರೆ ಶಿಕ್ಷಕರಿಗೆ ಮಾತ್ರ. ಶಿಕ್ಷಕರು ಇದನ್ನು ಅರ್ಥೈಸಿಕೊಂಡು ಬೋಧನೆ ಮಾಡಬೇಕು ಎಂದು ಶಾಸಕ ಸಿ.ಸಿ. ಪಾಟೀಲ ಹೇಳಿದರು.
ಪಟ್ಟಣದ ಆರೂಢ ಭವನದಲ್ಲಿ ಶಿಕ್ಷಣ ಇಲಾಖೆ, ತಾಪಂ ಆಶ್ರಯದಲ್ಲಿ ಶನಿವಾರ ನಡೆದ ಶಿಕ್ಷಕರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ಸಮಾಜದಲ್ಲಿ ಎಲ್ಲ ವೃತ್ತಿಗಳಲ್ಲಿ ಶ್ರೇಷ್ಠ ವೃತ್ತಿ ಶಿಕ್ಷಕ ವೃತ್ತಿಯಾಗಿದೆ. ಅದಕ್ಕೆ ನ್ಯಾಯ ಒದಗಿಸಲು ಶಿಕ್ಷಕರು ಸದಾ ಹಾತೊರೆಯಬೇಕು. ಶಿಕ್ಷಕರು ಬೋಧನೆಯಲ್ಲಿ ಕಾರ್ಯತತ್ಪರರಾಗಿ ಮಕ್ಕಳಿಗೆ ಬಾಳಿಗೆ ಬೆಳಕಾಗಬೇಕು. ವೃತ್ತಿಗೆ ಶಿಕ್ಷಕರು ನ್ಯಾಯ ಒದಗಿಸಬೇಕು. ಅದರಲ್ಲೂ ಪ್ರಾಥಮಿಕ ಶಾಲಾ ಶಿಕ್ಷಕರ ಪಾತ್ರ ಅಪಾರವಾಗಿದೆ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಆದರ್ಶಗಳನ್ನು ಶಿಕ್ಷಕರು ಅಳವಡಿಸಿಕೊಳ್ಳಬೇಕು. ಇಂದಿನ ವಿದ್ಯಾರ್ಥಿಗಳು ಉತ್ತಮ ಭವಿಷ್ಯ ಕಟ್ಟಿಕೊಳ್ಳಲು ಶಿಕ್ಷಕರು ಶ್ರಮ ಪಡಬೇಕು. ಪ್ರಚಲಿತ ವಿದ್ಯಮಾನ ಅರಿತು ಪಾಠ ಮಾಡಿ ಜೀವನದಲ್ಲಿ ಸಾರ್ಥಕತೆ ಕಂಡುಕೊಳ್ಳಬೇಕು ಎಂದು ಹೇಳಿದರು.ಉಪನ್ಯಾಸ ನೀಡಿದ ಬೀಳಗಿ ತಾಲೂಕು ಬೂದಿಹಾಳದ ಶಿಕ್ಷಕ ಗುರುರಾಜ ಲೂತಿ ಮಾತನಾಡಿ, ಶಿಕ್ಷಕ ವೃತ್ತಿ ಪವಿತ್ರ ವೃತ್ತಿ. ಅದು ಗುರು ಶಿಷ್ಯರ ನಡುವಿನ ಪವಿತ್ರ ಬಾಂಧವ್ಯ. ಅದು ದೊರೆತದ್ದು ಶಿಕ್ಷಕರ ಭಾಗ್ಯವಾಗಿದೆ. ಅದನ್ನು ನಾವು ಉಳಿಸಿಕೊಂಡಾಗ ಸಮಾಜಕ್ಕೆ ಕೊಡುಗೆಯಾಗಲು ಸಾಧ್ಯ. ರಾಧಾಕೃಷ್ಣನ್, ಕಲಾಂರಂತಹ ಮಹಾನ್ ಶಿಕ್ಷಕರು ನಮಗೆ ಸ್ಫೂರ್ತಿ. ಅವರ ಆದರ್ಶಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದರು.
ಸಾನ್ನಿಧ್ಯ ವಹಿಸಿದ್ದ ವಿರಕ್ತಮಠದ ಶಿವಕುಮಾರ ಶ್ರೀಗಳು ಮಾತನಾಡಿ, ಪ್ರತಿಯೊಬ್ಬರ ಜೀವನದಲ್ಲಿ ಶಿಕ್ಷಕರು ಮಹತ್ತರ ಪಾತ್ರ ವಹಿಸುತ್ತಾರೆ. ಶಿಕ್ಷಕರೆಂದರೆ ಮಕ್ಕಳಿಗೆ ಎಲ್ಲಿಲ್ಲದ ಪ್ರೀತಿ. ಜ್ಞಾನ ಹಂಚುವ ಶಿಕ್ಷಕರು ಅದನ್ನು ಹೆಚ್ಚಿಸಿಕೊಳ್ಳುವಂತೆ ಸಲಹೆ ಮಾಡಿದರು.ಸಮಾರಂಭದಲ್ಲಿ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು. ರಾಧಾಕೃಷ್ಣನ್ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಲಾಯಿತು. ಪ್ರಾಸ್ತಾವಿಕವಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ವಿ. ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು.
ತಾಪಂ ಇಒ ಶ್ರೀಧರ ಚಿನಗುಂಡಿ, ತಹಸೀಲ್ದಾರ್ ಶ್ರೀಶೈಲ ತಳವಾರ, ಅಕ್ಷರ ದಾಸೋಹ ಅಧಿಕಾರಿ ಮಾರುತಿ ಅಸುಂಡಿ, ಪ್ರೌಢಶಾಲೆ ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ಪಿ.ಸಿ. ಕಲಹಾಳ, ದೈಹಿಕ ಶಿಕ್ಷಣಾಧಿಕಾರಿ ಎನ್.ಆರ್. ನಿಡಗುಂದಿ, ಝಡ್.ಎಂ. ಖಾಜಿ, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಟಿ. ನಡಮನಿ ಇದ್ದರು.
ಅನ್ನಪೂರ್ಣಾ ತೇಲಿ ನಿರೂಪಿಸಿ, ವಂದಿಸಿದರು.