ಮಕ್ಕಳಿಗೆ ಸಂಸ್ಕಾರ ಕಲಿಸಲು ಸಂಡೆ ಸ್ಕೂಲ್: ಡಾ. ಶಿವಾನಂದ ಶಿವಾಚಾರ್ಯ ಸ್ವಾಮೀಜಿ

| Published : Feb 12 2024, 01:32 AM IST

ಮಕ್ಕಳಿಗೆ ಸಂಸ್ಕಾರ ಕಲಿಸಲು ಸಂಡೆ ಸ್ಕೂಲ್: ಡಾ. ಶಿವಾನಂದ ಶಿವಾಚಾರ್ಯ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಮಕ್ಕಳನ್ನು ಸಂಸ್ಕಾರವಂತರನ್ನಾಗಿ ಮಾಡಬೇಕು, ಮುಂದೆ ಎದುರಾಗಬಹುದಾದ ಸಮಸ್ಯೆಗಳನ್ನು ದಿಟ್ಟವಾಗಿ ಎದುರಿಸಲು ಮಕ್ಕಳಲ್ಲಿ ಧೈರ್ಯ, ಸ್ಥೈರ್ಯ, ಸಾಹಸ ಮನೋಭಾವ ಬೆಳೆಸಲು ತಂದೆ, ತಾಯಿ ಆಸಕ್ತಿ ವಹಿಸಬೇಕು ಎಂದು ಹಿರೇಮಠದ ಡಾ. ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಕನ್ನಡಪ್ರಭ ವಾರ್ತೆ, ತುಮಕೂರು

ಮಕ್ಕಳನ್ನು ಸಂಸ್ಕಾರವಂತರನ್ನಾಗಿ ಮಾಡಬೇಕು, ಮುಂದೆ ಎದುರಾಗಬಹುದಾದ ಸಮಸ್ಯೆಗಳನ್ನು ದಿಟ್ಟವಾಗಿ ಎದುರಿಸಲು ಮಕ್ಕಳಲ್ಲಿ ಧೈರ್ಯ, ಸ್ಥೈರ್ಯ, ಸಾಹಸ ಮನೋಭಾವ ಬೆಳೆಸಲು ತಂದೆ, ತಾಯಿ ಆಸಕ್ತಿ ವಹಿಸಬೇಕು ಎಂದು ಹಿರೇಮಠದ ಡಾ. ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ನಗರದ ಆರ್‌.ಟಿ. ನಗರದ ಹೋರಿ ಮುದ್ದಪ್ಪ ಕಾಂಪೌಂಡ್‌ನ ಸಿದ್ಧಿಗಣಪತಿ ದೇವಾಲಯದ ಪ್ರಥಮ ವರ್ಷದ ವಾರ್ಷಿಕೋತ್ಸವ ಸಮಾರಂಭದ ಸಾನಿಧ್ಯವಹಿಸಿ ಮಾತನಾಡಿದ ಸ್ವಾಮೀಜಿ, ಮಕ್ಕಳಲ್ಲಿ ಸಂಸ್ಕಾರ ಬೆಳೆಸುವ ಅಗತ್ಯವಿದೆ. ಈ ಕಾರಣಕ್ಕೆ ಹಿರೇಮಠದಲ್ಲಿ ಮಕ್ಕಳಿಗಾಗಿ ಸಂಡೆ ಸ್ಕೂಲ್ ಆರಂಭಿಸಲು ತೀರ್ಮಾನಿಸಲಾಗಿದೆ. ದೇಶದ ಧೈರ್ಯ, ಸಾಹಸಿಗರ ಕಥೆ ಹೇಳುವ, ದೇಶ ಭಕ್ತಿ ಮೂಡಿಸುವ, ಗುರುಹಿರಿಯರನ್ನು ಗೌರವಿಸುವಂತಹ ಸಂಸ್ಕಾರವನ್ನು ಮಕ್ಕಳಿಗೆ ಕಲಿಸಲು ಸಂಡೆ ಸ್ಕೂಲ್ ತೆರೆಯಲು ತೀರ್ಮಾನಿಸಲಾಗಿದೆ ಎಂದರು.

ಶಾಲೆಗಳ ಪರೀಕ್ಷೆಗಳು ಮುಗಿದ ನಂತರ ಏಪ್ರಿಲ್ ಆರಂಭದಲ್ಲಿ ಹಿರೇಮಠದಲ್ಲಿ ಸಂಡೆ ಸ್ಕೂಲ್ ಆರಂಭಿಸಲಾಗುವುದು. ಹಲವು ಶಿಕ್ಷಕರು ಬೋಧನೆ ಮಾಡಲು ಮುಂದೆ ಬಂದಿದ್ದಾರೆ. ಮಕ್ಕಳಲ್ಲಿ ಸಂಸ್ಕಾರ, ದೇಶಪ್ರೇಮ ಮೂಡಿಸುವಂತಹ ಬೋಧನೆ ಅಗತ್ಯವಿದ್ದು, ಇತರ ಮಠಗಳೂ ಇಂತಹ ಪ್ರಯತ್ನ ಮಾಡಲಿ ಎಂದು ಸ್ವಾಮೀಜಿ ಆಶಿಸಿದರು.

ಬಿಜೆಪಿ ಮುಖಂಡ ಎಸ್.ಪಿ. ಚಿದಾನಂದ್ ಮಾತನಾಡಿ, ದೇವರು, ದೇವಸ್ಥಾನ ಹಿಂದೂಗಳ ಸಂಸ್ಕೃತಿಯ ಹಿರಿಮೆ ಸಾರುತ್ತಿವೆ. ನಮ್ಮ ಆಚಾರ, ವಿಚಾರ, ಪರಂಪರೆಯನ್ನು ಉಳಿಸಿ, ಮುಂದಿನ ತಲೆಮಾರಿನವರಿಗೂ ಕಲಿಸಬೇಕು. ದ್ವೇಷ, ವೈರ ಬಿಟ್ಟು ಎಲ್ಲರೂ ಭಾವೈಕ್ಯತೆಯಿಂದ ಬಾಳಲು ನಮ್ಮ ಸಂಸ್ಕಾರವನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು. ಬಿಜೆಪಿ ಮುಖಂಡ ಅರಕೆರೆ ರವೀಶ್, ಪಾವನ ಆಸ್ಪತ್ರೆಯ ಡಾ. ಮುರಳೀಧರ್‌ ಮಾತನಾಡಿದರು.

ಸಿದ್ಧಗಂಗಾ ಮಠದ ಸಿದ್ಧಲಿಂಗಸ್ವಾಮೀಜಿ ಆಗಮಿಸಿ ಸಿದ್ಧಿಗಣಪತಿಗೆ ಪೂಜೆ ಸಲ್ಲಿಸಿದರು. ನಂತರ ದೇವಸ್ಥಾನ ಸಮಿತಿಯವರು ಸ್ವಾಮೀಜಿಗಳ ಪಾದಪೂಜೆ ನೆರವೇರಿಸಿದರು.

ಇದರ ಅಂಗವಾಗಿ ಶುಕ್ರವಾರ ಸಂಜೆ ಗೋಪೂಜೆ, ಗಂಗಾ ಕಳಸ, ಪುಣ್ಯಾ: ದೇವತಾನಾಂದಿ, ಪಂಚ ಕಳಸ, ರಕ್ಷೋಘ್ನ ಹೋಮ, ವಾಸ್ತು ಹೋಮ, ಕಳಾಹೋಮ, ಗಣಪತಿ ಹೋಮ, ಜಯಾದಿ ಹೋಮ, ತೀರ್ಥಪ್ರಸಾದ ವಿನಿಯೋಗದ ವ್ಯವಸ್ಥೆ ಮಾಡಲಾಗಿತ್ತು.

ನಗರಸಭೆ ಮಾಜಿ ಸದಸ್ಯ ಟಿ.ಎಚ್. ಬಾಲಕೃಷ್ಣ, ಮುಖಂಡರಾದ ನಟರಾಜ ಶೆಟ್ಟಿ, ಪದ್ಮನಾಭ ಶೆಟ್ಟಿ, ಹೋರಿ ಮುದ್ದಪ್ಪ ನಾಗರಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಮಂಜಣ್ಣ, ಉಪಾಧ್ಯಕ್ಷ ಟಿ.ಆರ್‌. ಬಸವರಾಜು, ಕಾರ್ಯದರ್ಶಿ ಟಿ.ಎಸ್. ರೇಣುಕಾ ಪ್ರಸಾದ್, ಸಹಕಾರ್ಯದರ್ಶಿ ಟಿ.ಎಸ್. ನಾಗರಾಜು, ಸಂಘಟನಾ ಕಾರ್ಯದರ್ಶಿ ಟಿ.ಎಂ. ಮಹೇಶ್‌ಕುಮಾರ್‌, ಖಜಾಂಚಿ ಟಿ.ಆರ್‌. ಶಿವಾನಂದ್, ನಿರ್ದೇಶಕರಾದ ಗುರುಮೂರ್ತಿ, ಹೊಸಳಪ್ಪ, ಶಾಂತಕುಮಾರ್‌, ಎಚ್.ಆರ್‌. ಯೋಗೀಶ್, ಟಿ.ಎಸ್. ಶಿವಕುಮಾರ್‌, ಹೇಮಾ, ಪವಿತ್ರ ಅಲ್ಲದೆ ಆರ್‌.ಟಿ. ನಗರ, ಶಂಕರಪುರಂ, ಹುರಳಿತೋಟ, ಕೋತಿತೋಪು, ಬಿ.ಎಂ. ತೋಟ ಬಡಾವಣೆ ನಾಗರಿಕರು ಭಾಗವಹಿಸಿದ್ದರು.Quote

ದೇವಸ್ಥಾನಗಳು ನಮ್ಮ ಸಂಸ್ಕೃತಿ, ಪರಂಪರೆ ಮೆರೆಯುವ ಶ್ರದ್ಧಾ ಕೇಂದ್ರಗಳು. ಭಕ್ತಿ, ಭಾವೈಕ್ಯತೆಗೆ ದೇವಸ್ಥಾನಗಳು ಉಳಿಯಬೇಕು. ಹಿಂದೆ ಮಹಮದೀಯರು ದಾಳಿ ಮಾಡಿ ನಮ್ಮ ಪುರಾತನ ದೇವಸ್ಥಾನಗಳನ್ನು ಹಾಳುಮಾಡಿದರೂ ಮತ್ತೊಂದು ಕಾಲಘಟ್ಟದಲ್ಲಿ ದೇವಸ್ಥಾನಗಳ ಜೀರ್ಣೋದ್ಧಾರ, ನಿರ್ಮಾಣ ಕಾರ್ಯಗಳು ನಡೆಯುತ್ತಲೇ ನಮ್ಮ ಸಂಸ್ಕೃತಿ, ಪರಂಪರೆ ಉಳಿಸುವ ಪ್ರಯತ್ನವಾಗುತ್ತಿದೆ. ಇತ್ತೀಚೆಗೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಸಾಕ್ಷಿಯಾಗಿದೆ.

ಡಾ. ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಹಿರೇಮಠ