ಸಾರಾಂಶ
ಗದಗ: ಸಮಸ್ತ ಮನುಕುಲಕ್ಕೆ ಉಪದೇಶ ಮಾಡುವ ಗ್ರಂಥ ಸಿದ್ಧಾಂತ ಶಿಖಾಮಣಿ ಎಂದು ಜಂಗಮವಾಡಿಮಠ ವಾರಾಣಸಿ ಕಾಶೀ ಮಹಾಪೀಠದ ಕಾಶೀ ಜ್ಞಾನಸಿಂಹಾಸನಾಧೀಶ್ವರ ಜ. ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಭಗವತ್ಪಾದಂಗಳವರು ಹೇಳಿದರು.
ನಗರದ ಗಾಣಿಗ ಭವನದಲ್ಲಿ ಶ್ರೀ ಸಿದ್ಧಾಂತ ಶಿಖಾಮಣಿ ಆಧ್ಯಾತ್ಮಿಕ ಪ್ರವಚನ ಸಮಿತಿ ಶ್ರೀಮದ್ ಕಾಶೀ ನೂತನ ಜಗದ್ಗುರುಗಳವರ ಆಷಾಢ ಮಾಸದ ಇಷ್ಟಲಿಂಗ ಮಹಾಪೂಜೆ ಹಾಗೂ ಶ್ರೀ ಸಿದ್ಧಾಂತ ಶಿಖಾಮಣಿ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಈ ಪವಿತ್ರ ಗ್ರಂಥವನ್ನು ವೀರಶೈವ ಧರ್ಮಗ್ರಂಥ ಎಂದು ಬಣ್ಣಿಸಲಾಗಿದ್ದರೂ ಅದು ವೀರಶೈವರಿಗೆ ಅಷ್ಟೇ ಸೀಮಿತವಾಗಿಲ್ಲ, ಜಗತ್ತಿನ ಎಲ್ಲ ಧರ್ಮೀಯರು ಅಧ್ಯಯನ ಮಾಡುವುದರಿಂದ ಇದನ್ನು ಜಾಗತಿಕ ಧರ್ಮಗ್ರಂಥ ಎನ್ನಲಾಗಿದೆ. ಎಲ್ಲ ಸಿದ್ಧಾಂತಗಳಿಗಿಂತ ಈ ಗ್ರಂಥ ಮೇಲಿನ ಸ್ತರದಲ್ಲಿ ಇರುವುದರಿಂದ ವೀರಶೈವ ಧರ್ಮದ ಪ್ರಮುಖ ಗ್ರಂಥವೆಂದು ಬಣ್ಣಿಸಲಾದ ಈ ಗ್ರಂಥವನ್ನು ಎಲ್ಲರೂ ಓದಬೇಕು, ತಿಳಿಯಬೇಕು. ಹಾಗೆಯೇ ಅದರಂತೆ ಧರ್ಮದ ಹಾದಿಯಲ್ಲಿ ಮುನ್ನಡೆಯಬೇಕು ಎಂದು ಹೇಳಿದರು.ಗುಳೇದಗುಡ್ಡದ ಒಪ್ಪತ್ತೇಶ್ವರ ಮಠದ ಒಪ್ಪತ್ತೇಶ್ವರ ಸ್ವಾಮಿಗಳು ಮಾತನಾಡಿ, ಎಲ್ಲರೂ ಧರ್ಮದ ಸನ್ಮಾರ್ಗದಲ್ಲಿ ಮುನ್ನಡೆಯಬೇಕು. ಭಾರತೀಯ ಸಂಸ್ಕೃತಿ, ಸಂಸ್ಕಾರವನ್ನು ಪಾಲಿಸುವ ಮೂಲಕ ಮಕ್ಕಳಿಗೂ ಇವುಗಳನ್ನು ರೂಢಿಸಬೇಕು. ಈ ಶರೀರಕ್ಕೆ ಸದ್ಗುಣಗಳ ಸಂಸ್ಕಾರ ನೀಡಿದಲ್ಲಿ ಮೋಕ್ಷ ಪ್ರಾಪ್ತಿಯಾಗಲು ಸಾಧ್ಯ ಎಂದರು.
ಯಲಬುರ್ಗಾದ ಧರಮುರಡಿ ಹಿರೇಮಠದ ಬಸವಲಿಂಗ ಶಿವಾಚಾರ್ಯ ಸ್ವಾಮಿಗಳು ಮಾತನಾಡಿದರು. ನರೇಗಲ್ ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು ಪ್ರಾಸ್ತಾವಿಕವಾಗಿ ಮಾತನಾಡಿದರು.ಪಂಢರಾಪುರದ ಸುಭಾಸ ಸಿದ್ಧರಾಮ ಮಮಾನೆ ಅವರಿಗೆ ಧರ್ಮಪ್ರಕಾಶ ಪ್ರಶಸ್ತಿ ಹಾಗೂ ಉಡನಕಲ್ನ ಸರ್ಕಾರಿ ಪ್ರೌಢಶಾಲೆಯ ಸಂಗೀತ ಶಿಕ್ಷಕ ವೀರಭದ್ರಪ್ಪ ಹಿರೇಬೆನಕಲ್ ಅವರಿಗೆ ದಿವ್ಯಾಂಗ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಭಕ್ತಿಸೇವೆ ವಹಿಸಿಕೊಂಡಿದ್ದ ಪಂಚಾಕ್ಷರಯ್ಯ ಹಿರೇಮಠ, ಲಿಂಗರಾಜ ಶಿಗ್ಲಿಮಠ, ಎಸ್.ಎಸ್. ಮೇಟಿ, ಮರಿಸ್ವಾಮಿ ಹಿರೇಮಠ, ಅನ್ನಪೂರ್ಣಾ ಗಡಾದ, ಶಾಂತಾ ಹಿರೇಮಠ, ಶಾಂತೇಶ ಅರಮನಿ ದಂಪತಿಯನ್ನು ಶ್ರೀಗಳು ಆಶೀರ್ವದಿಸಿದರು.ವಿ.ಸಿ. ಧನ್ನೂರಹಿರೇಮಠ, ಕೆ.ವಿ. ಪಾಟೀಲ, ಉಮೇಶ ಭೂಸ್ತ, ಗುರುಸಿದ್ಧಯ್ಯ ಹಿರೇಮಠ ಇದ್ದರು. ಕಸ್ತೂರಿಬಾಯಿ ಕಮ್ಮಾರ ಗೀತೆ ಹಾಡಿದರು. ಸುರೇಶ ಅಬ್ಬಿಗೇರಿ ಸ್ವಾಗತಿಸಿದರು. ನಿತ್ಯಂ ಯೋಗ ಕೇಂದ್ರದ ಮಹಿಳೆಯರಿಂದ ನೃತ್ಯ ದರ್ಶನ ಜರುಗಿತು. ವಿ.ಕೆ. ಗುರುಮಠ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.