ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುದೇವರಾಜು ಪಿ. ಚಿಕ್ಕಹಳ್ಳಿ ಅವರ ನೇತೃತ್ವದ ದೇಚಿ ಕ್ರಿಯೇಷನ್ಸ್ ನ ವತಿಯಿಂದ ಕಲಾಮಂದಿರದಲ್ಲಿ ಎರಡು ದಿನಗಳು ನಡೆದ ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರ ಕೃಷ್ಣೇಗೌಡನ ಆನೆ ನಾಟಕವು ಯಶಸ್ವಿಯಾಗಿ ನಾಲ್ಕು ಪ್ರದರ್ಶನಗಳನ್ನು ಕಂಡು ಸಂಪನ್ನಗೊಂಡಿತು. ವಿಶೇಷವಾಗಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗಾಗಿಯೇ ಕಟ್ಟಿದ ಈ ನಾಟಕವು ಸಂಪೂರ್ಣವಾಗಿ ಅವರ ಪಠ್ಯಕ್ಕೆ ಪೂರಕವಾಗಿ ಸಹಾಯವಾಗುವಂತೆ ನಿರ್ಮಿಸಲಾಗಿತ್ತು. ಇದರ ಉಪಯೋಗವನ್ನು ಸುಮಾರು 3,500 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಡೆದುಕೊಂಡರು, 150ಕ್ಕೂ ಹೆಚ್ಚು ಉಪನ್ಯಾಸಕರು ಭಾಗವಹಿಸಿದ್ದರು.ವಿಶೇಷವೆಂದರೆ ಇಡೀ ನಾಟಕದ 25ಕ್ಕೂ ಹೆಚ್ಚಿನ ಕಲಾವಿದರೆಲ್ಲಾ ವಿದ್ಯಾರ್ಥಿಗಳೇ ಆಗಿದ್ದು, ರಾತ್ರಿ ಮತ್ತು ಬೆಳಗಿನ ಪಾಳಿಯಲ್ಲಿ ಅಭ್ಯಾಸ ನಡೆಸಿ ಕಾಲೇಜು ಅವಧಿಯಲ್ಲಿ ತರಗತಿಗಳನ್ನೂ ತಪ್ಪಿಸದೆ ಸತತ ಪರಿಶ್ರಮದಿಂದ ಈ ನಾಟಕವನ್ನು ಕಟ್ಟಿಕೊಟ್ಟಿದ್ದಾರೆ. ಈ ನಾಟಕದ ವಿನ್ಯಾಸ ಹಾಗೂ ನಿರ್ದೇಶನವನ್ನು ಪಿ. ಶ್ರೇಯಸ್ ನಡೆಸಿದರು. ನೆರೆದಿದ್ದ ಉಪನ್ಯಾಸಕರೆಲ್ಲ ನಟನೆ, ಹಿನ್ನೆಲೆ ಸಂಗೀತ ಬೆಳಕಿನ ವಿನ್ಯಾಸ, ನಿರ್ದೇಶನ, ನಾಟಕಕ್ಕೆ ಬಳಸಿದ್ದ ವಸ್ತುಗಳು ಅದರಲ್ಲೂ ವಿಶೇಷವಾಗಿ ಆನೆ. ಒಟ್ಟಾರೆಯಾಗಿ ಈವರೆಗೆ ನೋಡಿದ ಕೃಷ್ಣೇಗೌಡನ ಆನೆ ನಾಟಕಗಳಲ್ಲಿ ದೇಚಿ ಕ್ರಿಯೇಷನ್ಸ್ ಅವರ ಪ್ರದರ್ಶಿತ ನಾಟಕ ಅತ್ಯುತ್ತಮವಾದುದು ಎಂದು ಹಾಡಿ ಹೊಗಳಿದರು.ದೇಚಿ ಕ್ರಿಯೇಷನ್ಸ್ ಹೀಗೇ ಹತ್ತು ಹಲವಾರು ನಾಟಕಗಳು, ಕಿರುಚಿತ್ರಗಳು, ನಟನ ತರಬೇತಿ ಮುಂತಾದ ಸಮಾಜಮುಖಿ ಕಾರ್ಯಗಳನ್ನು ನಡೆಸುತ್ತಿದ್ದು, ಮುಂದಿನ ತಿಂಗಳಲ್ಲಿ ಡಾ. ಚಂದ್ರಶೇಖರ ಕಂಬಾರ ರವರ ಬೆಪ್ತಕ್ಕಡಿ ಬೋಳೇಶಂಕರ ಎಂಬ ನಾಟಕವನ್ನು ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗಾಗಿ ನಿರ್ಮಿಸುತ್ತಿದೆ.ದೇಚಿ ಕ್ರಿಯೇಷನ್ಸ್ ನ ವತಿಯಿಂದ ಕಲಾಮಂದಿರದಲ್ಲಿ ಎರಡು ದಿನಗಳ ಕಾಲ ನಾಲ್ಕು ಪ್ರದರ್ಶನಗಳನ್ನು ಕಾಣಲಿರುವ ಈ ನಾಟಕದ ನಿರ್ದೇಶನವನ್ನು ವೀರು ಅಣ್ಣಿಗೇರಿ ರವರು ನಡೆಸಲಿದ್ದಾರೆ.