ಕನ್ನಡಪ್ರಭ ವಾರ್ತೆ ಕುಣಿಗಲ್

ರಾಜ್ಯದ ಪವಿತ್ರ ಧಾರ್ಮಿಕ ಕ್ಷೇತ್ರವಾದ ಶಕ್ತಿ ಸ್ಥಳ ಎಡೆಯೂರು ಶ್ರೀ ಸಿದ್ಧಲಿಂಗೇಶ್ವರರ ಮಹಾರಥೋತ್ಸವ ಬುಧವಾರ ವಿಜೃಂಭಣೆಯಿಂದ ನಡೆಯಿತು. ಮಧ್ಯಾಹ್ನ 12 ಗಂಟೆಗೆ ಅಭಿಜಿತ್ ಮುಹೂರ್ತದಲ್ಲಿ ಜೀವಂತ ಗದ್ದುಗೆಯ ಮೇಲಿದ್ದ ವಿಗ್ರಹವನ್ನು ವಿಶೇಷವಾದ ವಾದ್ಯಗಳ ಸಮೇತ ಕರೆತಂದು ರಥದ ಮೇಲೆ ಕೂರಿಸಲಾಯಿತು. ಜಾತ್ರೆಯಲ್ಲಿ ವಿಶೇಷವಾಗಿ ಹಲವಾರು ಜಾನಪದ ಕಲಾ ತಂಡಗಳು ಸೇರಿದಂತೆ ವೀರಗಾಸೆ ವಿವಿಧ ಕುಣಿತಗಳು ಭಕ್ತರ ಗಮನ ಸೆಳೆದವು. ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಎಡೆಯೂರಿನ ಬಾಳೆಹೊನ್ನೂರು ಖಾಸಾ ಶಾಖಾ ಮಠದ ರೇಣುಕಾ ಶಿವಾಚಾರ್ಯ ಸ್ವಾಮೀಜಿ, ಬೆಟ್ಟಹಳ್ಳಿ ಮಠದ ಚಂದ್ರಶೇಖರ ಸ್ವಾಮೀಜಿ, ಸೇರಿದಂತೆ ಹಲವಾರು ಸ್ವಾಮೀಜಿಗಳು ಹಾಗೂ ಶಾಸಕ ಡಾ.ರಂಗನಾಥ್ ರಥದ ಗಾಲಿಗಳಿಗೆ ತೆಂಗಿನ ಕಾಯಿ ಒಡೆಯುವ ಮುಖಾಂತರ ರಥೋತ್ಸವಕ್ಕೆ ಚಾಲನೆ ನೀಡಿದರು. ರಥದ ಚಾಲನೆಗೆ ಮುನ್ನ ನಡೆದ ಷಟ್ ಸ್ಥಲ ಧ್ವಜದ ಹರಾಜು ಕಾರ್ಯಕ್ರಮದಲ್ಲಿ ನುಗ್ಗೆಹಳ್ಳಿಯ ಕನ್ಯಾಕುಮಾರಿ ವಿಜಯ್ ಭಾಗವಹಿಸಿ 8 ಲಕ್ಷ ರೂಪಾಯಿಗಳಿಗೆ ಪಡೆದು ಈ ವರ್ಷದ ಮಹಾಭಕ್ತರೆಂದು ಪರಿಗಣಿಸಿ ರಥದ ಮೇಲೆ ಕೂರಿಸಿ ರಥೋತ್ಸವ ನಡೆಸಲಾಯಿತು.