ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಕಾರ್ಮಿಕ ಸಂಘಟನೆಗಳು ತಮ್ಮ ಶಕ್ತಿ ಪ್ರದರ್ಶಿಸದಿದ್ದರೆ ಯಾವುದೇ ಸರ್ಕಾರಗಳು ಹೆದರುವುದಿಲ್ಲ. ಕಾರ್ಮಿಕರ ಬದುಕು ದಿನಕ್ಕೆ ಸಂಕಷ್ಟ ಪರಿಸ್ಥಿತಿಯಲ್ಲಿದೆ. ಕಾರ್ಮಿಕರ ಬಗ್ಗೆ ಹಿತಚಿಂತನೆಯಿದ್ದರೆ ಒಳ್ಳೆ ನಾಯಕನಾಗಬಹುದು. ಹೋರಾಟಗಾರರು ಐಷಾರಾಮಿ ಜೀವನ ಮಾಡಿದರೆ ನಾಯಕತ್ವ ನಾಶವಾಗುತ್ತದೆಂದು ಕರ್ನಾಟಕ ರಾಜ್ಯ ಆದಿಜಾಂಬವ ಅಭಿವೃದ್ದಿ ನಿಗಮದ ಅಧ್ಯಕ್ಷ ಜಿ.ಎಸ್.ಮಂಜುನಾಥ್ ತಿಳಿಸಿದರು.ಕರ್ನಾಟಕ ಜನಶಕ್ತಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಟ್ರೇಡ್ ಯೂನಿಯನ್ ಜಿಲ್ಲಾ ಶಾಖೆ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಾರತದ 140 ಕೋಟಿ ಜನಸಂಖ್ಯೆಯಲ್ಲಿ 63 ಕೋಟಿ ಕಾರ್ಮಿಕರಿದ್ದಾರೆ. ರಾಜ್ಯದಲ್ಲಿ2.50 ಕೋಟಿ ಕಾರ್ಮಿಕರಿದ್ದು, ಸಂಘಟನೆಯಿಲ್ಲದಂತಾಗಿದೆ. ರೈತರು, ಕಾರ್ಮಿಕರು, ಡಿಎಸ್ಎಸ್ ಸೇರಿ ಅನೇಕ ಭಾಗಗಳಾಗಿರುವುದರಿಂದ ಆಳುವ ಸರ್ಕಾರಗಳು ನಿಮ್ಮ ಹೋರಾಟಕ್ಕೆ ಹೆದರುವುದಿಲ್ಲ. ಬೀದಿ ಬದಿ ವ್ಯಾಪಾರಿಗಳು, ಅಸಂಘಟಿತ ಕಾರ್ಮಿಕರ ಹಿತ ರಕ್ಷಣೆಗೆ ಕಾಂಗ್ರೆಸ್ ಬದ್ದವಾಗಿದೆ ಎಂದು ಹೇಳಿದರು.
ಪೌರ ನೌಕರರ ರಾಜ್ಯಾಧ್ಯಕ್ಷನಾಗಿ ನಲವತ್ತು ವರ್ಷಗಳ ಹಿಂದೆ ರಾಜ್ಯ ಸರ್ಕಾರದ ವಿರುದ್ದ ಬೃಹತ್ ಹೋರಾಟ ಮಾಡಿದ ಪರಿಣಾಮ ಅಂದಿನ ಮುಖ್ಯಮಂತ್ರಿ ಜೆ.ಹೆಚ್.ಪಟೇಲ್ರವರು ಪೌರ ಕಾರ್ಮಿಕರು ಹಾಗೂ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಿದ ಪರಿಣಾಮ ಈಗ ನೇರವಾಗಿ ಖಜಾನೆಯಿಂದ ಸಂಬಳ ಪಡೆಯುತ್ತಿದ್ದಾರೆ. ಯಾವುದೇ ಸಂಘಟನೆಯಾಗಲಿ ಸೌಕರ್ಯಕ್ಕಾಗಿ ಹುಟ್ಟಿಕೊಳ್ಳದೆ ಕಾರ್ಮಿಕರ ಪರವಾಗಿದ್ದರೆ ನಾಯಕನಾಗಿ ಬೆಳೆಯಬಹುದು. ಐಎನ್ಟಿಯುಸಿ ಬೃಹತ್ ಸಂಘಟನೆಯಿದೆ. ಎರಡು ಮೂರು ರಾಜ್ಯಗಳಲ್ಲಿ ಅಧಿಕಾರ ಹಿಡಿದಿರುವ ಕಮ್ಯುನಿಸ್ಟ್ ಪಕ್ಷ ನಾಶವಾಗುತ್ತಿದೆ. ಒಗ್ಗಟ್ಟು ಮುಖ್ಯ ಎಂದು ಜಿ.ಎಸ್.ಮಂಜುನಾಥ್ ಹೇಳಿದರು.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್ಪೀರ್ ಮಾತನಾಡಿ, ಕಾರ್ಮಿಕರು ಮೊದಲು ಸಂಘಟಿತರಾದರೆ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು.ಕಾರ್ಮಿಕ ಇಲಾಖೆಯಲ್ಲಿ ಕಡ್ಡಾಯವಾಗಿ ಗುರುತಿನ ಚೀಟಿ ಮಾಡಿಸಿಕೊಂಡು ನೊಂದಣಿ ಮಾಡಿಸಿಕೊಳ್ಳಬೇಕು. ಇಲ್ಲವಾದಲ್ಲಿ ಸೌಲಭ್ಯಗಳಿಂದ ವಂಚಿತರಾಗುತ್ತೀರ ಎಂದರು.
ಈ ಸಂದರ್ಭದಲ್ಲಿ ಕರ್ನಾಟಕ ಜನಶಕ್ತಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಟ್ರೇಡ್ ಯೂನಿಯನ್ ರಾಜ್ಯಾಧ್ಯಕ್ಷ ದಿನೇಶ್, ಉಪಾಧ್ಯಕ್ಷ ದಯಾಳ್, ಜಿಲ್ಲಾಧ್ಯಕ್ಷ ವೆಂಕಟೇಶ್, ರಘುವೀರ್, ಮಹಿಳಾ ಘಟಕದ ಅಧ್ಯಕ್ಷೆ ನಾಗವೇಣಿ, ಬಡಗಿ ಕಾರ್ಮಿಕರ ಸಂಘದ ಅಧ್ಯಕ್ಷ ಎ.ಜಾಕೀರ್ ಹುಸೇನ್, ಕಣಿವೆಮಾರಮ್ಮ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ, ಪದಾಧಿಕಾರಿಗಳು ಇತರರು ಇದ್ದರು.