- ಕರಿಬಸಪ್ಪ ಗೌಡ ಕಿಡಿ । ರೈತ ಸಂಘದ ನೇತೃತ್ವದಲ್ಲಿ ಸಭೆ । ಪ್ರಕರಣ ಹಿಂಪಡೆಯಲು ಆಗ್ರಹ
- - -ಕನ್ನಡಪ್ರಭ ವಾರ್ತೆ ಹೊನ್ನಾಳಿ
ರಾಜ್ಯ ಸರ್ಕಾರ ಬಿಡದಿಯ ರೈತರ ಜಮೀನನ್ನು ಭೂಸ್ವಾಧೀನ ಮಾಡುವ ಮೂಲಕ ಟೌನ್ಶಿಪ್ ವಿಷಯದಲ್ಲಿ ಅಮಾಯಕ ರೈತರ ಮೇಲೆ ದಬ್ಬಾಳಿಕೆ ನಡೆಸಿ ಎಫ್ಐಆರ್ ದಾಖಲಿಸಿರುವುದನ್ನು ಕೂಡಲೇ ವಾಪಾಸ್ ತೆಗೆದುಕೊಳ್ಳಬೇಕೆಂದು ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಎಂ.ಪಿ.ಕರಿಬಸಪ್ಪ ಗೌಡ ಒತ್ತಾಯಿಸಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರೈತ ಸಂಘ ಮತ್ತು ರಾಜ್ಯ ಹಸಿರು ಸೇನೆ ವತಿಯಿಂದ ರೈತರ ಸಭೆಯಲ್ಲಿ ಮಾತನಾಡಿ, ಬಿಡದಿಯ ಬೈಲಹೊಂಗಲದ ಮಂಡಲಹಳ್ಳಿಯಲ್ಲಿ ರೈತರು ನಮ್ಮ ಭೂಮಿ ನಮ್ಮ ಹಕ್ಕು ಎಂಬ ಧ್ಯೇಯ ವಾಕ್ಯದೊಂದಿಗೆ ಹೋರಾಟ ಮಾಡುತ್ತಿರುವ ಸಂದರ್ಭದಲ್ಲಿ ರಾಜ್ಯ ಸರ್ಕಾರ ರೈತರು ಮತ್ತು ರೈತ ಮಹಿಳೆಯರ ಮೇಲೆ ಪೊಲೀಸರಿಂದ ಲಾಠಿ ಬಳಿಸಿ ದೌರ್ಜನ್ಯ ನಡೆಸಿರುವುದು ಸಲ್ಲದು. ಲಾಠಿ, ಬೂಟು ಬಂದೂಕಿನಿಂದ ರೈತರು ಮತ್ತು ರೈತ ಮಹಿಳೆಯರ ಮೇಲೆ ದಬ್ಬಾಳಿಕೆ ದೌರ್ಜನ್ಯ ಮಾಡಿದ ಯಾವ ಸರ್ಕಾರಗಳು ಉಳಿದಿಲ್ಲ ಎಂದರು.
ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಎಲ್ಲರಿಗೂ ಸಮಾನತೆ ತತ್ವವಿದೆ. 450 ದಿನ ರೈತರು ಶಾಂತಿಯುತ ಹೋರಾಟ ಮಾಡುವ ಸಂದರ್ಭದಲ್ಲಿ ನಮ್ಮ ಭೂಮಿ ನಮ್ಮ ಹಕ್ಕು ಘೋಷಣೆ ಮಾಡುತ್ತಿರುವ ವೇಳೆ ಸರ್ಕಾರ ಸರ್ವೆ ಇಲಾಖೆಯಿಂದ ಸರ್ವೇ ಮಾಡಲು ಮುಂದಾಗಿದೆ ಅಧಿಕಾರಿಗಳು ಸಹ ರೈತಪರ ಗಮನ ಹರಿಸಿಲ್ಲ ಎಂದು ಆಕ್ರೋಷ ವ್ಯಕ್ತಪಡಿಸಿದರು.
ಬಿಡದಿಯ ರೈತರ ಮೇಲೆ ದೌಜ್ಯನ್ಯ ಮಾಡುತ್ತಿರುವ ಸರ್ಕಾರದ ವಿರುದ್ದ ರಾಜ್ಯದ ಎಲ್ಲಾ ತಾಲೂಕು ಹಾಗೂ ಜಿಲ್ಲಾ ರೈತ ಸಂಘದವರು ರೈತರ ಬೆಂಬಲವಾಗಿ ನಿಂತು ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ರೈತ ಸಂಘದ ತಾಲೂಕು ಅಧ್ಯಕ್ಷ ಕೆ.ಸಿ.ಬಸಪ್ಪ, ತಾಲೂಕು ರೈತ ಸಂಘದ ಅಧ್ಯಕ್ಷ ಕೆ.ಸಿ.ಬಸಪ್ಪ,ಉಪಾಧ್ಯಕ್ಷ ಬಸವರಾಜಪ್ಪ ಬಣಕಾರ್,ನ್ಯಾಮತಿ ತಾಲೂಕು ಅಧ್ಯಕ್ಷ ಉಮೆಶ್ ಬೆಳಗುತ್ತಿ, ವಿರೂಪಾಕ್ಷಪ್ಪ, ರಾಜಪ್ಪ, ರೈತರು ಇದ್ದರು.- - -
-15ಎಚ್.ಎಲ್.ಐ1:ಹೊನ್ನಾಳಿಯಲ್ಲಿ ಕರ್ನಾಟಕ ರೈತ ಸಂಘದ ರೈತರ ಸಭೆಯಲ್ಲಿ ರೈತ ಸಂಘದ ರಾಜ್ಯಾಧ್ಯಕ್ಷ ಎಂ.ಪಿ. ಕರಿಬಸಪ್ಪಗೌಡ ಮಾತನಾಡಿದರು.