ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಧರ್ಮಸ್ಥಳದಲ್ಲಿನ ಶವ ಹೂತ ಪ್ರಕರಣವನ್ನು ಎಸ್ಐಟಿಗೆ ನೀಡಲಾಗಿದೆ. ಇವತ್ತು ತನಿಖೆ ಆರಂಭವಾಗಿದೆ. ಅದರ ಬಗ್ಗೆ ಮಾತಾಡೋದು ಸರಿಯಲ್ಲ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದರು.ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಉಪರಾಷ್ಟ್ರಪತಿ ಜಗದೀಪ್ ಧನಕರ್ ರಾಜೀನಾಮೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಯಾಕೆ ರಾಜೀನಾಮೆ ಕೊಟ್ಟಿದ್ದಾರೆ ಅಂತ ಬಿಜೆಪಿಯವರಿಗೆ ಕೇಳಿ. ಯಾವ ಕಾರಣದಿಂದ ಅವರು ರಾಜೀನಾಮೆ ಕೊಡಬೇಕಾಗಿ ಬಂತು ಅಂತ ಕೇಳಿ. ಅವರು ರಾಜ್ಯಸಭೆಯಲ್ಲಿ ವಿರೋಧ ಪಕ್ಷದವರ ಬಿಲ್ ಒಪ್ಪಿಕೊಂಡಿದ್ದರು ಅಂತ ನನಗೆ ಮಾಹಿತಿ. ಹಾಗಾಗಿ ಎಲ್ಲರೂ ಒತ್ತಡ ಮಾಡಿ ರಾಜೀನಾಮೆ ಕೊಡಿಸಿದ್ದಾರೆ ಎಂದು ಆರೋಪಿಸಿದರು.
ಕಾರ್ಮಿಕರಿಗೆ ಉಚಿತ ಬಸ್ ಪಾಸ್ ವಿಚಾರ ಪ್ರಸ್ತಾಪಿಸಿದ ಸಚಿವರು, ಇಡೀ ಕರ್ನಾಟಕದಲ್ಲೇ ಈಗ ಮಹಿಳೆಯರಿಗೆ ಬಸ್ ಸಂಚಾರ ಉಚಿತವಾಗಿದೆ. ಕಾರ್ಮಿಕರಿಗೆ ಫ್ರೀ ಮಾಡೋದು ಬಹಳ ಕಷ್ಟ ಇದೆ. ಕಾರ್ಮಿಕರನ್ನು ಮೊದಲು ವಿಂಗಡಿಸಬೇಕು. ನಮ್ಮ ಇಲಾಖೆಯಲ್ಲಿ ಅಸಂಘಟಿತ ಕಾರ್ಮಿಕರಿಗೆ ಉಚಿತ ಬಸ್ ಪಾಸ್ ಕೊಡಲು ದುಡ್ಡಿಲ್ಲ ಎಂದರು.ರಾಜ್ಯ ಸರ್ಕಾರದಿಂದ ಆನ್ಲೈನ್ ಕ್ಯಾಶ್ ವಹಿವಾಟು ಮಾಡಿದವರ ಮೇಲೆ ತೆರಿಗೆ ಹಾಕುವ ವಿಚಾರಕ್ಕೆ, ಈ ಬಗ್ಗೆ ಇದುವರೆಗೆ ಜನರು ಮಾತಾಡಿಲ್ವಾ? ಈವಾಗ ಮಾತಾಡ್ತಿದ್ದಾರಾ?. ಜಿಎಸ್ಟಿ ಬರುವಾಗ ಜನರು ಮಾತಾಡಿಲ್ವಾ?. ಈ ಬಗ್ಗೆ ಸಿಎಂ ಸಭೆ ಕರೆದಿದ್ದಾರೆ, ಸಭೆ ನಂತರ ನಿರ್ಣಯಿಸಲಾಗುತ್ತದೆ. ಜಿಎಸ್ಟಿ ಅನ್ನೋದು ಇನ್ಕ್ಲೊಸಿವ್ ಆಗಿರುವುದರಿಂದ ಪಾಪ್ ಕಾರ್ನ್ ಇದ್ರೆ ಒಂದು ಜಿಎಸ್ಟಿ, ಖಾಲಿ ಪಾಪ್ ಕಾರ್ನ್ ಇದ್ರೆ ಒಂದು ಜಿಎಸ್ಟಿ. ಅದಕ್ಕೆ ಹನಿ ಇದ್ರೆ ಒಂದು ಜಿಎಸ್ಟಿ ಇದೆ. ಮಾತಾಡೋದಿದ್ರೆ ಸಂಪೂರ್ಣವಾಗಿ ಕೂತ್ಕೊಂಡು ಮಾತನಾಡಬಹುದು. ಸಿಎಂ ಈ ಬಗ್ಗೆ ಸಭೆ ಕರೆದಿದ್ದಾರೆ. ಇದಕ್ಕೆ ಒಂದು ಪರಿಹಾರ ಸಿಗುತ್ತದೆ ಎಂದು ಸಚಿವ ಲಾಡ್ ಹೇಳಿದರು.
ಬಾಗಲಕೋಟೆ ಕಾರ್ಮಿಕ ಇಲಾಖೆಯಲ್ಲಿ ₹8 ಕೋಟಿ ಹಣ ಗೋಲ್ ಮಾಲ್ ಆಗಿರುವ ಪ್ರಕರಣದ ತನಿಖೆ ಫೈನಲ್ ಹಂತದಲ್ಲಿದೆ. ಯಾರು ತಪ್ಪಿತಸ್ಥರಿದ್ದಾರೆ ಅವರಿಗೆ ಖಂಡಿತವಾಗಿ ಕಾನೂನು ಪ್ರಕಾರ ಏನು ಕ್ರಮ ತೆಗೆದುಕೊಳ್ಳಬೇಕು ತೆಗೆದುಕೊಳ್ಳುತ್ತೇವೆ. ಈ ಬಗ್ಗೆ ತನಿಖೆಯಾಗಬೇಕು ಅಂತ ನಾನೇ ಸುಮೊಟೋ ಆಗಿ ಬರೆದಿದ್ದು, ಸ್ವಲ್ಪ ವಿಳಂಬವಾಗಿದೆ. ನಿಜ ಆದರೆ, ತಪ್ಪಿತಸ್ಥರು ಯಾರೇ ಇದ್ದರೂ ಕ್ರಮ ಕೈಗೊಳ್ತೇವೆ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದರು.