ಸಾರಾಂಶ
ಗದಗ: ಸದಾ ಧರ್ಮಕಾರ್ಯಕ್ಕೆ ಸಂಚಾರ ಮಾಡುವರನ್ನು ಜಂಗಮರೆಂದು ಹೇಳುತ್ತಾರೆ. ಸೂಡಿ ಮಠಕ್ಕೆ ಆಸ್ತಿಯಿಲ್ಲ, ಭಕ್ತರೆ ಆಸ್ತಿ, ಸೂಡಿ ಮಠ ನಿರ್ಮಿಸಲು ಹಲವರು ತಮ್ಮ ಆಸ್ತಿ ದಾನ ಮಾಡಿದ್ದಾರೆ ಎಂದು ಸೂಡಿ ಜುಕ್ತಿಹಿರೇಮಠದ ಕೊಟ್ಟೂರು ಶಿವಾಚಾರ್ಯ ಶ್ರೀಗಳು ಹೇಳಿದರು.
ನಗರದ ಸೂಡಿ ಜುಕ್ತಿಹಿರೇಮಠ ಶಾಖಾ ಮಠದಲ್ಲಿ ಭಾನುವಾರ ಏರ್ಪಡಿಸಿದ್ದ ಲಿಂಗೈಕ್ಯ ಕೊಟ್ಟೂರು ಬಸವೇಶ್ವರ ಶಿವಾಚಾರ್ಯರ 107ನೇ ಪುಣ್ಯಾರಾಧನೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.ಸೂಡಿ ಜುಕ್ತಿ ಹಿರೇಮಠದಲ್ಲಿ ದಿವ್ಯಶಕ್ತಿ ಇದೆ. ಸೂಡಿ ಪುಣ್ಯ ಭೂಮಿ ಆಗಿದೆ. ರಾಣಿ ಅಕ್ಕದೇವಿ ಆಳ್ವಿಕೆ ಅವಧಿಯಲ್ಲಿ ಜುಕ್ತಿ ಹಿರೇಮಠ ಪೂರ್ವಜರು ಬಂದು ನೆಲೆಸಿದ್ದರು. ಧರ್ಮ ಕಾರ್ಯಕ್ಕೆ ಸಂಚಾರ ನಡೆಸಿ ಬಿಜಾಪುರದಿಂದ ಬಂದು ಇಲ್ಲಿ ನೆಲೆಸಿದ್ದರು. ಬಿಜಾಪುರದ ಆದಿಲ್ ಷಾಹಿಗಳಿಗೆ ಕಷ್ಟಕಾಲದಲ್ಲಿ ಜೋತಿಷ್ಯ ಶಾಸ್ತ್ರ ಮೂಲಕ ಅವರ ಕಷ್ಟಗಳನ್ನು ಜುಕ್ತಿಹಿರೇಮಠ ಪೂರ್ವಜ ಶ್ರೀಗಳು ದೂರು ಮಾಡಿದ್ದರು. ಲಿಂಗೈಕ್ಯ ಕೊಟ್ಟೂರು ಬಸವೇಶ್ವರ ಶಿವಾಚಾರ್ಯರ ಅವಧಿಯಲ್ಲಿ ಮಠ ನಿರ್ಮಾಣ ಆಯಿತು ಎಂದರು.
ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ ಮಾತನಾಡಿ, ರೋಣ ತಾಲೂಕು ಮಹಾತ್ಮರು ಹುಟ್ಟಿದ ನಾಡು, ಹಾಲಕೇರಿ ಅನ್ನಿದಾನೇಶ್ವರ, ಸೂಡಿ ಜುಕ್ತಿ ಹಿರೇಮಠ ಕೊಟ್ಟುರೇಶ್ವ ಶ್ರೀಗಳು ಮಹನೀಯರು. ಕೊಪ್ಪಳ ಗವಿಸಿದ್ದ ಮಠದ ಬೆಳವಣಿಗೆಗೆ ಮೂಲವು ಸೂಡಿ ಜುಕ್ತಿ ಹಿರೇಮಠವಾಗಿದೆ. ವೀರಶೈವ ಲಿಂಗಾಯತರು ಮತ್ತು ಲಿಂಗಾಯತರು ಎರಡೂ ಒಂದೇ. ಈ ಸತ್ಯ ಅರಿತುಕೊಳ್ಳಬೇಕು. ಪಂಚಪೀಠಗಳು ಮತ್ತು 12ನೇ ಶತಮಾನದ ಬಸವಾದಿ ಶರಣರು ವೀರಶೈವ ಲಿಂಗಾಯತ ಸಮುದಾಯದ ಎರಡು ಕಣ್ಣುಗಳಿದಂತೆ. ಪಂಚಪೀಠಗಳಿಗೂ ಮತ್ತು ವಿರಕ್ತಮಠಗಳ ಬಗ್ಗೆ ಒಂದೇ ಭಾವ ಹೊಂದಿರಬೇಕು. ಮಾನವ ಸಂಪನ್ಮೂಲ ಅಭಿವೃದ್ಧಿಗೆ ಮಠಗಳು ಕಾರಣವಾಗಿವೆ. ಅನ್ನದಾನ, ಶಿಕ್ಷಣದಾನದ ಮೂಲಕ ಮಾನವವ ಅಭಿವೃದ್ಧಿಗೆ ಮಠಗಳು ಕೊಡುಗೆ ನೀಡಿವೆ ಎಂದರು.ಚಂದ್ರು ಬಾಳಿಹಳ್ಳಿಮಠ ಮಾತನಾಡಿ, ವೀರಶೈವ ಧರ್ಮ ಸ್ಥಾಪನೆಯನ್ನು ಪಂಚಪೀಠಗಳು ಮಾಡಿದವು. ಧರ್ಮಪ್ರಚಾರ ಮಾಡುವ ಉದ್ದೇಶದಿಂದ ದೇಶಾದ್ಯಂತ ಸಂಚರಿಸಿದರು. ಸೂಡಿ ಜೂಕ್ತಿಹಿರೇಮಠವು ಕಾಶೀ ಜಗದ್ಗುರು ಮಠದ ಶಾಖಾಮಠ ಆಗಿದೆ. ಈಗಿನ ಶ್ರೀಗಳು 14ನೇ ಪಟ್ಟಾಧೀಶ್ವರರು ಆಗಿದ್ದಾರೆ. ಹಾನಗಲ್ ಕುಮಾರಸ್ವಾಮಿಗಳು ಶಿವಯೋಗ ಮಂದಿರ ಕಟ್ಟುವ ಸಂದರ್ಭದಲ್ಲಿ ಲಿಂಗೈಕ್ಯ ಕೊಟ್ಟರು ಬಸವೇಶ್ವರ ಶಿವಾಚಾರ್ಯರು ಸಹಕಾರ ನೀಡಿದ್ದರು ಎಂದರು.ಶ್ರೀಕಾಂತ ಚೌಕಿಮಠ ಮಾತನಾಡಿದರು. ಶಿವಕುಮಾರ್ ಹಿರೇಮಠ ಅವರಿಂದ ವೇದಘೋಷ ನೆರವೇರಿತು. ವೀರೇಶ ಕಿತ್ತೂರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಸಾಧಕರಿಗೆ ಗುರುರಕ್ಷೆ ನೀಡಲಾಯಿತು.ಈ ವೇಳೆ ವೀರಣ್ಣ ಮತ್ತಿಕಟ್ಟಿ, ಈಶಣ್ಣ ಮುನವಳ್ಳಿ, ಮೃತ್ಯುಂಜಯ ಸಂಕೇಶ್ವರ, ರವಿ ದಂಡಿನ, ಬಿ.ಬಿ. ಅಸೂಟಿ, ಮುಕ್ತಾಂಬ, ಪ್ರಕಾಶ ಬೇಲಿ, ವಿಜಯಲಕ್ಷ್ಮಿ ಮಾನ್ವಿ, ಅನೀಲ ಅಬ್ಬಿಗೇರಿ, ವಿಜಯಲಕ್ಷ್ಮಿ ದಿಂಡೂರು, ಶಿವಾನಂದಯ್ಯ ಹಿರೇಮಠ, ಆರ್. ಕೆ. ಮಠದ, ಶರಣಬಸವ ಗುಡಿಮನಿ, ಬಿ. ಎಂ. ಪಾಟೀಲ, ಎಸ್. ಕೆ. ಸವಡಿ, ಉಮಾಕಾಂತ ಚೌಕಿಮಠ, ತಾತನಗೌಡ ಪಾಟೀಲ, ನಂದಾ ಬಾಳಿಹಳ್ಳಿಮಠ, ಬಸವರಾಜ ಎಚ್.ಎಂ., ಜಯದೇವ ಶಿರೂರು, ಶರಣಯ್ಯ ಬೂದಿಹಾಳಮಠ, ಪ್ರಭು, ಚಂದ್ರಶೇಖರ ಆರಾಧ್ಯ, ಸಚಿನ ಪಾಟೀಲ, ಮಲ್ಲಿಕಾರ್ಜುನ, ಎಂ. ಎನ್. ಅಷ್ಟಗಿಮಠ, ಪಾಲಾಕ್ಷಿ ಅಳ್ಳೊಳ್ಳಿ, ಕವಿತಾ ಜಾಲಿಹಾಳ, ಮಂಜುನಾಥ ಕರೆಡೆಪ್ಪನ್ನವರ ಇದ್ದರು.