ಕಟೀಲಿನಲ್ಲಿ ತುಳುನಾಡ ಆದಿಮೂಲ ದೈವೊಲು ವಿಚಾರಸಂಕಿರಣ

| Published : Mar 17 2025, 01:32 AM IST

ಕಟೀಲಿನಲ್ಲಿ ತುಳುನಾಡ ಆದಿಮೂಲ ದೈವೊಲು ವಿಚಾರಸಂಕಿರಣ
Share this Article
  • FB
  • TW
  • Linkdin
  • Email

ಸಾರಾಂಶ

ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಥಮ ದರ್ಜೆ ಕಾಲೇಜಿನಲ್ಲಿ ತುಳು ಫೌಂಡೇಶನ್ ಸಂಯೋಜಿಸಿದ ತುಳುಮಾಡ ಆದಿಮೂಲ ದೈವೊಲು ಬೆರ್ಮೆರ್, ಲೆಕ್ಕೇಸಿರಿ ಪಾಡ್ದನ ಆಲಡೆ ಮತ್ತು ಪ್ರಾದೇಶಿಕ ಅಧ್ಯಯನ ತುಳು ವಿಚಾರ ಸಂಕಿರಣ ನಡೆಯಿತು.

ಕನ್ನಡಪ್ರಭ ವಾರ್ತೆ ಮೂಲ್ಕಿ

ತುಳು, ಕನ್ನಡ ಭಾಷೆಗಳಲ್ಲಿರುವ ಅನೇಕ ಪದಗಳು ಸಂಸ್ಕೃತದ್ದೇ ಆಗಿದ್ದು ತುಳು ಎಲ್ಲ ದ್ರಾವಿಡ ಭಾಷೆಗಳಿಗಿಂತ ಪುರಾತನವಾದುದು. ಪುರಾಣದ ಬಲಿ ಪ್ರಾದೇಶಿಕವಾಗಿ ನಾನಾ ರೂಪದಲ್ಲಿ ಕಾಣಿಸಿಕೊಳ್ಳುವುದನ್ನು ಕಂಡಿದ್ದೇವೆ. ಅಧ್ಯಯನ ಮೂಲಕ, ಪುರಾಣ, ಜನಪದ ನಂಬಿಕೆಗಳನ್ನು, ಸಮನ್ವಯಗೊಳಿಸಿ ನಿರ್ಧಾರಕ್ಕೆ ಬರಬೇಕು. ತುಳು ಶಾಸ್ತ್ರೀಯ ಭಾಷೆಯಾಗಿ ಬೆಳೆಯಬೇಕು ಎಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳದ ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ ಹೇಳಿದರು.

ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಥಮ ದರ್ಜೆ ಕಾಲೇಜಿನಲ್ಲಿ ತುಳು ಫೌಂಡೇಶನ್ ಸಂಯೋಜಿಸಿದ ತುಳುಮಾಡ ಆದಿಮೂಲ ದೈವೊಲು ಬೆರ್ಮೆರ್, ಲೆಕ್ಕೇಸಿರಿ ಪಾಡ್ದನ ಆಲಡೆ ಮತ್ತು ಪ್ರಾದೇಶಿಕ ಅಧ್ಯಯನ ತುಳು ವಿಚಾರ ಸಂಕಿರಣದ ಉದ್ಘಾಟಿಸಿ ಮಾತನಾಡಿದ ಅವರು ಭಾಷಾ ಸಮನ್ವಯತೆಯೂ ಬೇಕು. ವಿಮರ್ಶೆಯ ಮೂಲಕ ನಿರ್ಧಾರಗಳಾಗಬೇಕು. ಧರ್ಮವನ್ನು ಉಳಿಸಬೇಕೆಂದು ಹೇಳಿದರು.

ಖ್ಯಾತ ವಿದ್ವಾಂಸ ಕೆ.ಎಲ್. ಕುಂಡಂತಾಯ ಮಾತನಾಡಿ, ತುಳುನಾಡಿನಲ್ಲಿ ಬೆರ್ಮೆರ್, ಬೊಮ್ಮೆ, ಬೆರ್ಮೆ ಇತ್ಯಾದಿ ಹೆಸರಿನಿಂದ ಗುರುತಿಸಲ್ಪಡುವ ತುಳುನಾಡಿನ ಬೆರ್ಮೆ ಚತುರ್ಮುಖ ಬ್ರಹ್ಮನಲ್ಲ, ಕಪಾಲ ಬ್ರಹ್ಮನೂ ಅಲ್ಲ, ಡಕ್ಕಾಯುಧನೂ ಅಲ್ಲ. ಉತ್ತರಕನ್ನಡದಲ್ಲಿ ಗುರುತಿಸಲ್ಪಡುವ ಬೊಮ್ಮಯನೂ ನಮ್ಮ ಬೆರ್ಮೆ ಆಗಿರಬಹುದು. ಲೆಕ್ಕೆಸಿರಿ ಮಾತೃಸ್ವರೂಪದ ಶಕ್ತಿ. ಆಲಡೆಗಳಲ್ಲಿರುವ ಬೆರ್ಮೆರ್ ಬ್ರಹ್ಮಲಿಂಗೇಶ್ವರ ಮಹಾಲಿಂಗೇಶ್ವರ ಕ್ಷೇತ್ರಗಳಾಗಿ ಸ್ವರೂಪ ಬದಲಾಯಿಸಿಕೊಳ್ಳುತ್ತಿವೆ. ಬೆರ್ಮೆರ್ ಹಾಗೂ ಲೆಕ್ಕೇಸಿರಿಗಳ ಮೂಲ ಸ್ವರೂಪಗಳ ಅಧ್ಯಯನ ಆಗಬೇಕಾಗಿದೆ ಎಂದು ಹೇಳಿದರು.

ಪಾಂಗಾಳ ಬಾಬು ಕೊರಗ ಮಾತನಾಡಿ ತಳಮಟ್ಟದ ಅಧ್ಯಯನ, ಸಂಶೋಧನೆಗಳಿಂದ ಪೂರ್ಣಪ್ರಮಾಣದ ಬರಹಗಳು ಬರಬೇಕು. ಗ್ರಹಿಕೆಗಳಿಂದ ಬರೆಯುವುದಲ್ಲ. ಕೊರಗರಲ್ಲಿಗೆ ಹೋಗುವುದೇ ಉದಾಸೀನ ಎಂಬ ಭಾವನೆ ಹೋಗಬೇಕು ಎಂದರು.

ಕಟೀಲು ದೇವಳದ ಆಡಳಿತ ಮಂಡಳಿ ಅಧ್ಯಕ್ಷ ಕೊಡೆತ್ತೂರುಗುತ್ತು ಸನತ್ ಕುಮಾರ ಶೆಟ್ಟಿ, ತುಳು ಜನಪದ ವಿದ್ವಾಂಸರಾದ ಡಾ. ಇಂದಿರಾ ಹೆಗ್ಗಡೆ, ಕಟೀಲು ಪದವಿ ಕಾಲೇಜಿನ ಪ್ರಾಚಾರ್ಯ ಡಾ. ವಿಜಯ್, ಶಮಿನ ಆಳ್ವ, ಬಿ.ಎಸ್.ಶಿವಕುಮಾರ್ ಮತ್ತಿತರರಿದ್ದರು. ವಿಚಾರ ಸಂಕಿರಣದ ಸಂಯೋಜಕರಾದ ಪುರುಷೋತ್ತಮ ಬಲ್ಯಾಯ ಪ್ರಸ್ತಾವನೆಗೈದರು. ಡಾ. ರಾಜೇಶ್ ಆಳ್ವ ಬದಿಯಡ್ಕ ಸ್ವಾಗತಿಸಿದರು. ಕಿರಣ್ ಶೆಟ್ಟಿ ಅತ್ತೂರು ನಿರೂಪಿಸಿದರು.ಗೋಷ್ಟಿಬೆರ್ಮೆರ್ : ಪಾಡ್ದನ ಆಲಡೆಲು ಬೊಕ್ಕ ಪ್ರಾದೇಶಿಕತೆದ ಮಿತ್ ಅಧ್ಯಯನ ಗೋಷ್ಠಿಯಲ್ಲಿ ದಯಾನಂದ ಕತ್ತಲ್‌ಸಾರ್ ಉಪನ್ಯಾಸ ನೀಡಿದರು. ವಿದ್ವಾಂಸ ಯದುಪತಿ ಗೌಡ, ಉಪನ್ಯಾಸಕ ಸುಧೀರ್, ಯಶೋದಾ ಕೇಶವ್ ಉಪಸ್ಥಿತರಿದ್ದರು.ಲೆಕ್ಕೆಸಿರಿ ಪಾಡ್ದನ ಆಲಡೆಲು ಬೊಕ್ಕ ಪ್ರಾದೇಶಿಕತೆದ ಮಿತ್ ಅಧ್ಯಯನ ಗೋಷ್ಠಿಯಲ್ಲಿ ಪ್ರೊ. ಪುರುಷೋತ್ತಮ ಬಲ್ಯಾಯ ವಿಚಾರ ಮಂಡಿಸಿದರು. ಮಂಜುನಾಥೇಶ್ವರ ತುಳು ಪೀಠ ಅಧ್ಯಯನ ವಿಭಾಗದ ಡಾ. ಮಾಧವ ಎಂ.ಕೆ., ಸಾಹಿತಿ ಸುಂದರ ಬಾರಡ್ಕ, ಶ್ರೀಶಾವಾಸವಿ ತುಳುನಾಡ್ ಉಪಸ್ಥಿತರಿದ್ದರು.ಸಮಾರೋಪ: ಡಾ. ನಿರಂಜನ್ ರೈ ಉಪ್ಪಿನಂಗಡಿ, ವಿದ್ವಾಂಸ ನಂದಳಿಕೆ ನಾರಾಯಣ ಶೆಟ್ಟಿ, ತುಳು ಅಕಾಡಮಿಯ ಮಾಜಿ ಸದಸ್ಯೆ ತಾರಾ ಆಚಾರ್ಯ, ಕಸಾಪ ಮಾಜಿ ಅಧ್ಯಕ್ಷ ಡಾ. ಹರಿಕೃಷ್ಣ ಪುನರೂರು, ಪ್ರಮೋದ್ ಸಪ್ರೆ, ರಾಜೇಶ್ ಭಟ್ ಮಂದಾರ, ಪದ್ಮಶ್ರೀ ಭಟ್, ವಸಂತ ರೈ, ಚಂದ್ರಹಾಸ ದೇವಾಡಿಗ ಮತ್ತಿತರರಿದ್ದರು.