ಸಾರಾಂಶ
ಕನ್ನಡಪ್ರಭ ವಾರ್ತೆ ಶಿರಾ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ, ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮ, ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳು ಹಾಗೂ ನಗರಸಭೆ ಸಂಯುಕ್ತಾಶ್ರಯದಲ್ಲಿ ನಗರದ ಹಜರತ್ ಮಲ್ಲಿಕ್ ರೆಹಾನ್ ಪಾಷ ದರ್ಗಾ ಆವರಣದಲ್ಲಿ ಮೇ ೩೧ ಹಾಗೂ ಜೂನ್ ೧ರವರೆಗೆ ಬೆಳಗ್ಗೆ ೯ ಗಂಟೆಯಿಂದ ಶಿರಾ ನಗರದಲ್ಲಿ ಮೊಟ್ಟಮೊದಲ ಬಾರಿಗೆ ಬೃಹತ್ ಕುರಿ ಮತ್ತು ಮೇಕೆ ಮಾರಾಟ ಮೇಳ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಕುರಿ ಮತ್ತು ಉಣ್ಣ ಅಭಿವೃದ್ಧಿ ನಿಗಮದ ಸಹಾಯಕ ನಿರ್ದೇಶಕರಾದ ಡಾ.ನಾಗೇಶ್ ಕುಮಾರ್ ತಿಳಿಸಿದ್ದಾರೆ. ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು ತುಮಕೂರು ಜಿಲ್ಲೆಯಲ್ಲಿ ಕುರಿ ಸಾಕಾಣಿಕೆ ಮುಖ್ಯ ಕಸುಬಾಗಿದ್ದು, ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಮಾರಾಟ ಮಾಡಲು ಟಗರು ಮತ್ತು ಹೋತ ಮರಿಗಳನ್ನು ವಿಶೇಷ ಆಸಕ್ತಿ ವಹಿಸಿ ಸಾಕಾಣಿಕೆ ಮಾಡಿ, ಕೊಬ್ಬಿಸಿ ಬೆಂಗಳೂರು ನಗರಕ್ಕೆ ತೆಗೆದುಕೊಂಡು ಹೋಗಿ ಮಾರಾಟ ಮಾಡುತ್ತಿದ್ದಾರೆ. ಶಿರಾ ಕುರಿ ಮಾಂಸ ಉತ್ಕೃಷ್ಠವಾಗಿದ್ದು, ಆಧಿಕ ಬೇಡಿಕೆ ಹೊಂದಿದೆ. ಈ ಬಾರಿಯೂ ಸಹ ರೈತರು ಅಧಿಕ ಪ್ರಮಾಣದಲ್ಲಿ ಗಂಡು ಕುರಿ ಮತ್ತು ಮೇಕೆ ಮರಿಗಳನ್ನು ಸಾಕಾಣಿಕೆ ಮಾಡಿ, ಮಾರಾಟ ಮಾಡಲು ಸಿದ್ಧರಾಗಿದ್ದಾರೆ. ಬೆಂಗಳೂರು ನಗರದಲ್ಲಿ ಅವರಿಗೆ ಮೂಲಭೂತ ಸೌಕರ್ಯಗಳಿಲ್ಲದೆ ತುಂಬಾ ತೊಂದರೆ ಅನುಭವಿಸಬೇಕಾಗುತ್ತದೆ. ಅಲ್ಲದೇ ಪ್ರಸ್ತುತ ಬೆಂಗಳೂರಿನಲ್ಲಿ ಕೋವಿಡ್ ಪ್ರಕರಣಗಳು ಕಾಣಿಸಿಗೊಂಡಿರುವ ಬಗ್ಗೆ ವರದಿಯಾಗಿದೆ. ಹಾಗಾಗಿ ತಾಲೂಕಿನ ರೈತರ ಕುರಿ, ಮೇಕೆಗಳಿಗೆ ಮಾರುಕಟ್ಟೆ ಒದಗಿಸಲು ಹಾಗೂ ಬಕ್ರೀದ್ ಹಬ್ಬಕ್ಕಾಗಿ ಕುರಿ-ಮೇಕೆಗಳನ್ನು ಖರೀದಿಸುವ ಗ್ರಾಹಕರಿಗೆ ಉತ್ತಮ ಗುಣ ಮಟ್ಟದ, ರುಚಿಕರ ಮಾಂಸ ಹೊಂದಿರುವ ಕುರಿ-ಮೇಕೆಗಳನ್ನು ಸ್ಥಳೀಯವಾಗಿ ದೊರೆಯುವಂತೆ ಮಾಡುವ ಸದುದ್ಧೇಶದಿಂದ ಬಕ್ರೀದ್ ಹಬ್ಬದ ಪ್ರಯುಕ್ತ ಶಿರಾ ನಗರದಲ್ಲಿ ಬೃಹತ್ ಕುರಿ-ಮೇಕೆ ಮೇಳ ಏರ್ಪಡಿಸಲಾಗಿದೆ, ಆದ್ದರಿಂದ ರೈತರು ಈ ಮೇಳದಲ್ಲಿ ತಮ್ಮ ಟಗರು ಮತ್ತು ಹೋತಗಳೊಂದಿಗೆ ಭಾಗವಹಿಸಿ ಮಾರಾಟ ಮಾಡಲು ಹಾಗೂ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿ ಉತ್ತಮ ಗುಣಮಟ್ಟದ ಟಗರು ಮತ್ತು ಹೋತಗಳನ್ನು ಖರೀದಿಸಿ ಈ ಮೇಳವನ್ನು ಯಶಸ್ವಿಗೊಳಿಸಬೇಕೆಂದು ತಿಳಿಸಿದ್ದಾರೆ. ಹೆಚ್ಚಿನ ವಿವರಗಳಿಗೆ ಡಾ.ಸಿ.ಎಸ್.ರಮೇಶ್ ೯೮೮೦೬೫೬೨೦೧, ಡಾ.ನಾಗೇಶ್ ಕುಮಾರ್ ೯೪೪೮೭೪೩೯೮೪, ಡಾ.ನಾಗೇಶ್.ಹೆಚ್ ೯೯೧೬೧೪೨೦೧೧, ಡಾ.ಮೊಹಮ್ಮದ್ ಫರ್ಮಾನ್ ೭೮೨೯೨೮೮೬೩೩ ಸಂಪರ್ಕಿಸುವಂತೆ ಕೋರಿದ್ದಾರೆ.