ಬೆಳ್ತಂಗಡಿ: ಉಜಿರೆ ಎಸ್‌ಡಿಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಅತಿ ಶೀಘ್ರ ಎಂಆರ್‌ ಐ ಸ್ಕ್ಯಾನಿಂಗ್ ಸೇವೆ ಆರಂಭಗೊಳ್ಳಲಿದೆ. ಸೇವೆಯಲ್ಲಿರುವ ಸಂತೋಷ ಬೇರೆಲ್ಲಿಯೂ ಸಿಗಲಾರದು. ನಮ್ಮೆಲ್ಲ ವೈದ್ಯರಲ್ಲಿ ಆ ಸೇವಾ ಮನೋಭಾವವಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.ಆಸ್ಪತ್ರೆಯಲ್ಲಿ ಶನಿವಾರ ನಡೆದ ವೈದ್ಯರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವೈದ್ಯರಿಗೆ ಅವರ ಪರಿವಾರದವರ ಸಹಕಾರ ಇರುವುದರಿಂದ ಮಾತ್ರ ಇಂತಹ ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸಲು ಸಾಧ್ಯವಾಗಿದೆ. ಕೇವಲ ವೈದ್ಯಕೀಯ ಸಲಕರಣೆಗಳು ಇದ್ದರೆ ಸಾಲದು. ಅದನ್ನು ಸರಿಯಾಗಿ ಬಳಸುವ ಮೂಲಕ ರೋಗಿಗಳಿಗೆ ಉಪಯುಕ್ತವಾಗಬೇಕು ಎಂದರು.

ಹೇಮಾವತಿ ವೀ. ಹೆಗ್ಗಡೆ ಮಾತನಾಡಿ, ಗಿಡ ಹೆಮ್ಮರವಾಗಿ ಬೆಳೆಯುವಂತೆ ನಮ್ಮ ಉಜಿರೆಯ ಈ ಆಸ್ಪತ್ರೆ ಬೆಳೆಯುತ್ತಿದೆ ಎಂದರು.

ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಂ. ಜನಾರ್ದನ್ ಮಾತನಾಡಿ, 2025-26ರ ಸಾಲಿನಲ್ಲಿ 4 ಕೋಟಿ ರು.ಗೂ ಹೆಚ್ಚು ಮೊತ್ತದ ವೈದ್ಯಕೀಯ ಸೇವೆಯನ್ನು ಉಚಿತವಾಗಿ ನೀಡಲಾಗಿದೆ. 11 ಹಾಸಿಗೆಗಳ ಸುಸಜ್ಜಿತ ಹವಾ ನಿಯಂತ್ರಿತ ಡಯಾಲಿಸಿಸ್ ಸೆಂಟರ್‌ನಲ್ಲಿ ಉಚಿತ ಡಯಾಲಿಸಿಸ್ ಸೇವೆ ನೀಡುತ್ತಿದ್ದು, 2025-26ರಲ್ಲಿ 1.44 ಕೋಟಿ ರು. ಮೊತ್ತದ 9644 ಉಚಿತ ಡಯಾಲಿಸಿಸ್‌ ಸೇವೆ ನೀಡಲಾಗಿದೆ ಎಂದರು.

ವೈದ್ಯಕೀಯ ಅಧೀಕ್ಷಕ ಡಾ. ದೇವೇಂದ್ರ ಕುಮಾರ್ ಪಿ. ಮಾತನಾಡಿ, ಎಲ್ಲ ವಿಭಾಗಗಳಲ್ಲಿ ತಜ್ಞ ವೈದ್ಯರಿದ್ದು, ಅತ್ಯಾಧುನಿಕ ಸೇವೆಯನ್ನು ಇಲ್ಲಿ ನೀಡಲಾಗುತ್ತಿದೆ ಎಂದರು.ಮುಖ್ಯ ವೈದ್ಯಾಧಿಕಾರಿ ಡಾ. ಸಾತ್ವಿಕ್ ಜೈನ್ ಮಾತನಾಡಿ, 40 ಲಕ್ಷ ರೂ. ಮೌಲ್ಯದ ಲ್ಯಾಪ್ರೋಸ್ಕೋಪಿಕ್ ಯಂತ್ರ ಅಳವಡಿಸಿದ್ದು, ಕಳೆದ ಮೇ ತಿಂಗಳಲ್ಲಿ 100ಕ್ಕೂ ಹೆಚ್ಚು ಲ್ಯಾಪರೋಸ್ಕೋಪಿಕ್ ಸರ್ಜರಿ ನಡೆಸಲಾಗಿದೆ ಎಂದರು.


ನೋವು ರಹಿತ ಹೆರಿಗೆ ತಜ್ಞ ಡಾ. ಶತಾನಂದ ಪ್ರಸಾದ್ ರಾವ್ ಮಾತನಾಡಿ, ವಿಶ್ವ ಮಟ್ಟದಲ್ಲಿ ನಮ್ಮ ಆಸ್ಪತ್ರೆ ಗುರುತಿಸಲ್ಪಟ್ಟಿದೆ. ಈ ಹಿಂದೆ ಸರ್ಜರಿ ಎಂದರ ಮಾಡಿಸಲು ಮಂಗಳೂರಿಗೆ ಹೋಗುತ್ತಿದ್ದ ಜನ ಇವತ್ತಿನ ದಿನಗಳಲ್ಲಿ ಇಲ್ಲಿಯೇ ಶಸ್ತ್ರಚಿಕಿತ್ಸೆ ನಡೆಸಿ ಎಂದು ನಮ್ಮ ವೈದ್ಯರಲ್ಲಿ ವಿನಂತಿ ಮಾಡುತ್ತಿದ್ದಾರೆ ಎಂದರು.

ಡಾ. ಉಷಾ ಜಿ. ಶೆಟ್ಟಿ ಅನಿಸಿಕೆ ವ್ಯಕ್ತಪಡಿಸಿದರು. ಧರ್ಮಸ್ಥಳ ಬೀಡಿನ ಮಾನ್ಯ ಉಪಸ್ಥಿತರಿದ್ದರು. ಜಗನ್ನಾಥ ಎಂ. ಮತ್ತು ಸೃಜನ್ ಶೆಟ್ಟಿ ನಿರೂಪಿಸಿದರು.