ರಾಜನಹಳ್ಳಿ ಮಹರ್ಷಿ ವಾಲ್ಮೀಕಿ ಗುರುಪೀಠದ ಆವರಣದಲ್ಲಿ ಫೆ.8 ಮತ್ತು 9 ರಂದು ನಡೆಯುವ ವಾಲ್ಮೀಕಿ ಜಾತ್ರೆಯಲ್ಲಿ ಸಮುದಾಯದ ಜನರಲ್ಲಿ ವೈಚಾರಿಕತೆ, ಜಾಗೃತಿ ಬೆಳೆಸಲು ಆದ್ಯತೆ ನೀಡಲಾಗುವುದೆಂದು ಕರ್ನಾಟಕ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮ ಅಧ್ಯಕ್ಷ ಹಾಗೂ ಜಾತ್ರಾ ಸಮಿತಿ ಅಧ್ಯಕ್ಷ ಬಸನಗೌಡ ದದ್ದಲ್ ಹೇಳಿದ್ದಾರೆ.
- ರಾಜನಹಳ್ಳಿಯಲ್ಲಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ
- - -ಕನ್ನಡಪ್ರಭ ವಾರ್ತೆ ಹರಿಹರ
ರಾಜನಹಳ್ಳಿ ಮಹರ್ಷಿ ವಾಲ್ಮೀಕಿ ಗುರುಪೀಠದ ಆವರಣದಲ್ಲಿ ಫೆ.8 ಮತ್ತು 9 ರಂದು ನಡೆಯುವ ವಾಲ್ಮೀಕಿ ಜಾತ್ರೆಯಲ್ಲಿ ಸಮುದಾಯದ ಜನರಲ್ಲಿ ವೈಚಾರಿಕತೆ, ಜಾಗೃತಿ ಬೆಳೆಸಲು ಆದ್ಯತೆ ನೀಡಲಾಗುವುದೆಂದು ಕರ್ನಾಟಕ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮ ಅಧ್ಯಕ್ಷ ಹಾಗೂ ಜಾತ್ರಾ ಸಮಿತಿ ಅಧ್ಯಕ್ಷ ಬಸನಗೌಡ ದದ್ದಲ್ ಹೇಳಿದರು.ಶ್ರೀಮಠದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಂಪ್ರದಾಯಿಕ ಜಾತ್ರೆಗಳಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಮಾತ್ರ ನಡೆಯುತ್ತವೆ. ಆದರೆ ವಾಲ್ಮೀಕಿ ಜಾತ್ರೆಯಲ್ಲಿ ಧಾರ್ಮಿಕತೆ ಬೆಳೆಸುವ ಜೊತೆಗೆ ಜನರನ್ನು ಸಂಕಷ್ಟಕ್ಕೆ ದೂಡುವ ಮೌಢ್ಯತೆ, ಕಂದಾಚಾರಗಳನ್ನು ಸಮುದಾಯದಿಂದ ಕಿತ್ತೊಗೆಯುವ ಸಲುವಾಗಿ ಜಾಗೃತಿ ಮೂಡಿಸಲೂ ಆದ್ಯತೆ ನೀಡಲಾಗುತ್ತದೆ ಎಂದರು.
ಶ್ರೀ ಮಠದ 28ನೇ ವಾರ್ಷಿಕೋತ್ಸವ, ಲಿಂಗೈಕ್ಯ ಪುಣ್ಯಾನಂದಪುರಿ ಶ್ರೀ ಅವರ 19ನೇ ಪುಣ್ಯಾರಾಧನೆ, ಪ್ರಸನ್ನಾನಂದ ಶ್ರೀಗಳ 18ನೇ ವರ್ಷದ ಪಟ್ಟಾಧಿಕಾರ ಮಹೋತ್ಸವವನ್ನೂ ಇದೇ ಸಂದರ್ಭದಲ್ಲಿ ಆಚರಿಸಲಾಗುವುದು ಎಂದರು.ಫೆ.8ರಂದು ಬೆಳಗ್ಗೆ ವಾಲ್ಮೀಕಿ ಭಾವಚಿತ್ರದ ಮೆರವಣಿಗೆ, ಧ್ವಜಾರೋಹಣ, ಸರ್ವಧರ್ಮ ಸಾಮೂಹಿಕ ವಿವಾಹ, ಬುಡಕಟ್ಟು ವಸ್ತು ಪ್ರದರ್ಶನ, ಉದ್ಯೋಗ, ಕೃಷಿ ಮೇಳ ನಂತರ ಮಹಿಳಾ, ನೌಕರರ, ಯುವಕರ, ವೈದ್ಯರ, ವಕೀಲರ ಗೋಷ್ಠಿಗಳು, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ರಾತ್ರಿ ಹಾಸನದ ಕಲಾವಿದರಿಂದ ಸಂಪೂರ್ಣ ರಾಮಾಯಣ ನಾಟಕ ಪ್ರದರ್ಶನವಿದೆ ಎಂದು ತಿಳಿಸಿದರು.
ಫೆ.9ರಂದು ಬೆಳಗ್ಗೆ 6 ಗಂಟೆಗೆ ಸ್ವಚ್ಛತಾ ಕಾರ್ಯ, 7 ರಿಂದ 8.30 ರವರೆಗೆ ಗುರುಗಳ ದರ್ಶನ, 9ಕ್ಕೆ ನಾಡಿನ ಮಠಾಧೀಶರ ಸಮ್ಮುಖ ವಾಲ್ಮೀಕಿ ರಥೋತ್ಸವ, 9ರಿಂದ ಧರ್ಮಸಭೆ, ಮಧ್ಯಾಹ್ನ 12 ಕ್ಕೆ ಜನಜಾಗೃತಿಗಾಗಿ ಜಾತ್ರಾ ಮಹೋತ್ಸವ ಸಭೆ ನಡೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ವಿಪಕ್ಷ ನಾಯಕರು, ಸಚಿವರು, ಸಂಸದರು, ಶಾಸಕರು ಭಾಗವಹಿಸುವರು. ಜಾತ್ರೆಗೆ ರಾಜ್ಯದ ವಿವಿಧೆಡೆಯಿಂದ 5 ಲಕ್ಷ ಜನ ಆಗಮಿಸುವ ನಿರೀಕ್ಷೆ ಇದೆ ಎಂದರು.ಪ್ರಸನ್ನಾನಂದ ಶ್ರೀ ಮಾತನಾಡಿ, ವರ್ಷಗಟ್ಟಲೆ ಧರಣಿ ಸತ್ಯಾಗ್ರಹ ನಡೆಸಿದ ಪರಿಣಾಮ ಪರಿಶಿಷ್ಟ ಜಾತಿ ಮತ್ತು ಪಂಗಡದವರ ಮೀಸಲಾತಿಯನ್ನು ರಾಜ್ಯ ಸರ್ಕಾರ ಹೆಚ್ಚಿಸಿದೆ. ಹೆಚ್ಚಿಸಿರುವ ಈ ಮೀಸಲಾತಿಗೆ ದೇಶದ ಕಾನೂನಿನ ಮಾನ್ಯತೆ ದೊರಕಲು ಕೇಂದರ ಸರ್ಕಾರ ಈ ಮೀಸಲಾತಿಯನ್ನು ಹೆಚ್ಚಳವನ್ನು 9ನೇ ಶೆಡ್ಯೂಲ್ನಲ್ಲಿ ಪ್ರಕಟಿಸಬೇಕಿದೆ. ಪರಿಶಿಷ್ಟ ಜಾತಿಯ ನಕಲಿ ಜಾತಿ ಪ್ರಮಾಣಪತ್ರ ನೀಡುವುದನ್ನು ತಡೆಯುವುದು ಸೇರಿದಂತೆ ಸಮುದಾಯದ ಹಲವು ಬೇಡಿಕೆಗಳನ್ನು ಜಾತ್ರಾ ಸಮಯದಲ್ಲಿ ಸರ್ಕಾರದ ಮುಂದಿಡಲಾಗುವುದು ಎಂದರು.
ಜಾತ್ರಾ ಸಮಿತಿ ಸಂಚಾಲಕ ಪಂಪಾಪತಿ, ರಾಯಚೂರು ಸಂಸದ ಜಿ.ಕುಮಾರ ನಾಯಕ, ಶಾಸಕ ಟಿ.ರಘುಮೂರ್ತಿ, ಮಠದ ಧರ್ಮದರ್ಶಿಗಳಾದ ಬಿ.ವೀರಣ್ಣ, ಕೆ.ಬಿ. ಮಂಜಣ್ಣ, ಹೊದಿಗೆರೆ ರಮೇಶ್, ಜಿಗಳಿ ಆನಂದ ಹಾಗೂ ಇತರರು ಇದ್ದರು.- - -
-09ಎಚ್ಆರ್ಆರ್೦5 ಹಾಗೂ ಬಿ:ಸಭೆಯಲ್ಲಿ ಶಾಸಕ ಹಾಗೂ ವಾಲ್ಮೀಕಿ ಜಾತ್ರಾ ಸಮಿತಿ ಅಧ್ಯಕ್ಷ ಬಸನಗೌಡ ದದ್ದಲ್ ಮಾತನಾಡಿದರು. ಪೀಠಾಧಿಪತಿ ಪ್ರಸನ್ನಾನಂದ ಶ್ರೀ, ಜಾತ್ರಾ ಸಮಿತಿ ಸಂಚಾಲಕ ಪಂಪಾಪತಿ ಇತರರು ಇದ್ದರು.
-09ಎಚ್ಆರ್ಆರ್೦5ಸಿ: ಪ್ರಸನ್ನಾನಂದ ಶ್ರೀ.