ಶಿವಮೊಗ್ಗ: ವರಮಹಾಲಕ್ಷ್ಮೀ ಪೂಜೆ ಹಬ್ಬದ ಹಿನ್ನೆಲೆ ಗುರುವಾರ ಶಿವಮೊಗ್ಗದ ಮುಖ್ಯ ಮಾರುಕಟ್ಟೆಗಳಲ್ಲಿ ಹೂವು, ಹಣ್ಣು ಹಾಗೂ ಪೂಜಾ ಸಾಮಗ್ರಿಗಳನ್ನು ಖರೀದಿಸಲು ಜನಸಾಗರವೇ ಹರಿದುಬಂದಿದ್ದು, ಎಲ್ಲಡೆ ಹಬ್ಬದ ಸಂಭ್ರಮ ಹಾಗೂ ಬಿರುಸಿನ ಖರೀದಿ ಕಂಡು ಬಂತು.

ಪ್ರಮುಖ ಮಾರುಕಟ್ಟೆಗಳಾದ ಗಾಂಧಿಬಜಾರ್, ದುರ್ಗಿಗುಡಿ, ಬಿ.ಎಚ್ ರಸ್ತೆ, ಶಿವಪ್ಪ ನಾಯಕ ಮಾರುಕಟ್ಟೆಯಲ್ಲಿ ಹಬ್ಬಕ್ಕೆ ಬೇಕಾದ ಅಗತ್ಯ ವಸ್ತುವಿನ ಖರೀದಿಯಲ್ಲಿ ಜನತೆ ತೊಡಗಿಕೊಂಡಿದ್ದರು.

ದೇವಿಯ ಪೂಜೆಗೆ ಬೇಕಾದ ಹಸಿರು, ಕೆಂಪು ಹಾಗೂ ಹಳದಿ ಬಣ್ಣದ ಸೀರೆಗಳ ಖರೀದಿ. ತರಹೇವಾರಿ ಹೂವು, ಬಾಳೆಕಂದು, ಮಾವಿನ ಸೊಪ್ಪು ಮತ್ತು ತೆಂಗಿನಕಾಯಿ, ಅರಿಶಿಣ ಕುಂಕುಮ ಸೇರಿದಂತೆ ಹಬ್ಬಕ್ಕೆ ಬೇಕಾದ ಸಾಮಗ್ರಿಗಳ ಮಾರಾಟ ಕೂಡ ಭರ್ಜರಿಯಾಗಿ ಸಾಗಿತ್ತು.

ಮಾರುಕಟ್ಟೆಯಲ್ಲಿ ಜನರು ಹಬ್ಬದ ಪೂಜಾ ಸಾಮಗ್ರಿಗಳ ಜತೆಗೆ ಹೂವು, ಹಣ್ಣು, ಮಾವಿನ ಎಲೆ, ಬಾಳೆದಿಂಡು, ಲಕ್ಷ್ಮೀ ವಿಗ್ರಹದ ಮುಖವಾಡಗಳನ್ನು ಚೌಕಾಸಿ ಮಾಡಿ ಖರೀದಿಸುತ್ತಿದ್ದದ್ದು ಗೋಚರಿಸಿತು.

ಹೂವುಗಳ ದರಗಳಲ್ಲಿ ಭಾರಿ ಏರಿಕೆಯಾಗಿದೆ. ಕಾಕಡ 500 ರು, ಚೆಂಡು ಹೂವು 80 ರು., ಸೇವಂತಿಗೆ 300 ರು.ಕ್ಕೆ ಮಾರಾಟವಾಗುತ್ತಿದ್ದವು. ಹಬ್ಬದ ಕಾರಣಕ್ಕೆ ಹಣ್ಣುಗಳ ಬೆಲೆಯಲ್ಲಿ ಏರಿಕೆಯಾಗಿದೆ. ಸೇಬು ಒಂದು ಕೆ.ಜಿಗೆ 200-250ರು., ದಾಳಿಂಬೆ 200, ಏಲಕ್ಕಿ ಬಾಳೆ 100, ದ್ರಾಕ್ಷಿ 150 ರುಗಳಿಗೆ ಮಾರಾಟವಾಗುತ್ತಿರುವುದು ಕಂಡುಬಂತು.


ಹಣ್ಣಿನ ಅಂಗಡಿ, ಹೂವಿನ ಮಾರಾಟ ಕೇಂದ್ರ, ತರಕಾರಿ ಮಾರುಕಟ್ಟೆ, ಬಳೆ ಅಂಗಡಿಗಳಲ್ಲಿ ಹೆಚ್ಚಿನ ಜನಸಂದಣಿ ಹೆಚ್ಚಾಗಿ ಕಂಡು ಬಂತು. ಖರೀದಿ ಪ್ರಕ್ರಿಯೆ ಜೋರಾಗಿ ಸಾಗಿತ್ತು.