ಚರಂಡಿ ಇಲ್ಲದೆ ರೋಗರುಜಿನ, ಸೊಳ್ಳೆ ಕಾಟ, ಜ್ವರದಂತಹ ಸಮಸ್ಯೆಗಳು ಉಲ್ಭಣಿಸಿ ನಿತ್ಯ ಸಾಲ ಮಾಡಿಕೊಂಡು ಚಿಕಿತ್ಸೆಗಾಗಿ ಆಸ್ಪತ್ರೆಗೆ ತೆರಳುವಂತಾಗಿದೆ. ಈ ಬಗ್ಗೆ ಎಲ್ಲರಿಗೂ ಮನವಿ ನೀಡಿ ಸಾಕಾಗಿದೆ. ತಾವು ಮನೆಗೆ, ತೆರಿಗೆ, ಕಂದಾಯ ಕಟ್ಟುತ್ತೇವೆ. ಇ- ಖಾತಾ ಕಾನೂನು ಬದ್ಧವಾಗಿ ಮಾಡಿಸಿಕೊಂಡಿದ್ದೇವೆ. ಕನಿಷ್ಠ ನಾಗರೀಕರಿಗೆ ಮೂಲ ಸೌಲಭ್ಯ ನೀಡುವುದನ್ನು ಮರೆತಿದ್ದೀರಿ.
ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಪಟ್ಟಣದ ಚನ್ನನಕೊಪ್ಪಲು ಬಡಾವಣೆಯಲ್ಲಿ ಚರಂಡಿ ನಿರ್ಮಾಣಕ್ಕೆ ಆಗ್ರಹಿಸಿ ನಿವಾಸಿಗಳು ಗ್ರಾಮ ಪಂಚಾಯ್ತಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.ಗ್ರಾಪಂ ಕಚೇರಿಗೆ ಶುಕ್ರವಾರ ಆಗಮಿಸಿದ ನಿವಾಸಿಗಳು ಕಚೇರಿಗೆ ಹಾಕಿ ಸಿಬ್ಬಂದಿ ಹೊರಗೆ ಹೋಗದಂತೆ ದಿಗ್ಭಂಧನ ಹಾಕಿದರು. ಹತ್ತಾರು ವರ್ಷಗಳಿಂದ ಚರಂಡಿ ನಿರ್ಮಿಸುವಂತೆ ಮನವಿ ನೀಡಿದರೂ ಗ್ರಾಪಂ ಸದಸ್ಯರು, ಪಿಡಿಒ, ಮೇಲಾಧಿಕಾರಿಗಳು ಗಮನ ಹರಿಸುತ್ತಿಲ್ಲ ಎಂದು ಆಕ್ರೋಶ ಹೊರ ಹಾಕಿದರು.
ಚರಂಡಿ ಇಲ್ಲದೆ ರೋಗರುಜಿನ, ಸೊಳ್ಳೆ ಕಾಟ, ಜ್ವರದಂತಹ ಸಮಸ್ಯೆಗಳು ಉಲ್ಭಣಿಸಿ ನಿತ್ಯ ಸಾಲ ಮಾಡಿಕೊಂಡು ಚಿಕಿತ್ಸೆಗಾಗಿ ಆಸ್ಪತ್ರೆಗೆ ತೆರಳುವಂತಾಗಿದೆ. ಈ ಬಗ್ಗೆ ಎಲ್ಲರಿಗೂ ಮನವಿ ನೀಡಿ ಸಾಕಾಗಿದೆ. ತಾವು ಮನೆಗೆ, ತೆರಿಗೆ, ಕಂದಾಯ ಕಟ್ಟುತ್ತೇವೆ. ಇ- ಖಾತಾ ಕಾನೂನು ಬದ್ಧವಾಗಿ ಮಾಡಿಸಿಕೊಂಡಿದ್ದೇವೆ. ಕನಿಷ್ಠ ನಾಗರೀಕರಿಗೆ ಮೂಲ ಸೌಲಭ್ಯ ನೀಡುವುದನ್ನು ಮರೆತಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.ನಿವಾಸಿ ರೋಹಿತ್ ಮಾತನಾಡಿ, ಗ್ರಾಪಂ ಸದಸ್ಯರಿಗೆ ಪೋನು ಮಾಡಿದರೂ ಇತ್ತ ಸುಳಿಯುತ್ತಿಲ್ಲ. ತಮ್ಮ ಮನವಿ, ಪ್ರತಿಭಟನೆಗೆ ಕವಡೆ ಕಾಸು ಮನ್ನಣೆ ಇಲ್ಲ. ಬಡಾವಣೆಯಲ್ಲಿರುವ ಹಳೆಯ ಚರಂಡಿಯಿಂದ ನೀರು ಸಮರ್ಪಕವಾಗಿ ಹೊರಹೋಗದೆ ಕೊಳೆತು ಗಬ್ಬು ವಾಸನೆ, ಸೊಳ್ಳೆಗಳ ಕಾಟ ವಿಪರೀತವಾಗಿದೆ ಎಂದು ದೂರಿದರು.
ಸಾಂಕ್ರಾಮಿಕ ರೋಗ, ಜ್ವರದಂತಹ ಹತ್ತಾರು ಸಮಸ್ಯೆಗಳು ಜನರನ್ನು ಕಾಡುತ್ತಿವೆ. ಮೂಗು ಮುಚ್ಚಿ ಓಡಾಡುವಂತಾಗಿದೆ. ಅಧಿಕಾರಿಗಳು ಚರಂಡಿ ನೀರು ಹೊರಹೋಗಲು ಸ್ಥಳವಿಲ್ಲ. ಸ್ಥಳ ಕೊಡಿಸಿ ಚರಂಡಿ ನಿರ್ಮಿಸಿಕೊಡುತ್ತೇವೆ ಎನ್ನುವುದು ಸರಿಯಲ್ಲ ಎಂದು ಕಿಡಿಕಾರಿದರು.ಮೇಲಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಬಡಾವಣೆ ನಾಗರಿಕರು ನೆಮ್ಮದಿಯಿಂದ ಬದುಕಲು ವ್ಯವಸ್ಥೆ ಮಾಡಿಕೊಡುವ ತನಕ ಕಚೇರಿ ಬೀಗ ತೆಗೆಯುವುದಿಲ್ಲ. ಜಾಗ ಬಿಟ್ಟು ಕದಲುವುದಿಲ್ಲ ಎಂದು ಧಿಕ್ಕಾರ ಕೂಗಿದರು.
ಗ್ರಾಪಂ ಕಾರ್ಯದರ್ಶಿ ಪಾಪೇಗೌಡ, ಪೊಲೀಸರು, ಪ್ರತಿಭಟನಾಕಾರರ ಮನವೊಲಿಸಿ ಮಾತನಾಡಿ, ಮೇಲಾಧಿಕಾರಿಗಳಿಗೆ ತಿಳಿಸಲಾಗಿದೆ. ಪಿಡಿಒ ಕರ್ತವ್ಯದ ಮೇಲೆ ಬೀದರ್ಗೆ ತೆರಳಿದ್ದಾರೆ. ಒಂದೆರಡು ದಿನಗಳಲ್ಲಿ ಸಭೆ ಕರೆದು ಸಮಸ್ಯೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.ಅಂತಿಮವಾಗಿ ವಾರದ ಗಡುವು ನೀಡಿ ಪ್ರತಿಭಟನೆ ವಾಪಸ್ಸು ಪಡೆದರು. ಪ್ರತಿಭಟನೆಯಲ್ಲಿ ಹರೀಶ್, ಶ್ರೀನಿವಾಸ್, ಹನುಮಂತ, ರೋಹಿತ್, ಲೋಕೇಶ್, ಗಂಗಣ್ಣ, ರಮೇಶ್, ತರಕಾರಿ ನಾಗಣ್ಣ, ಕೈಲಾಶ್, ಚಂದ್ರು, ಸ್ವಾಮಿ, ಕರವೇ ವೇಣು, ಗುರುಮೂರ್ತಿ, ಆನಂದ್, ಸುರೇಶ್, ಶಂಕರ್ ಮತ್ತಿತರರಿದ್ದರು.