ಪಕ್ಷಕ್ಕಾಗಿ ದುಡಿದವರಿಗೆ ಅವಕಾಶ ಕೇಳುವುದರಲ್ಲಿ ತಪ್ಪೇನಿದೆ?

| Published : Nov 04 2023, 12:31 AM IST

ಪಕ್ಷಕ್ಕಾಗಿ ದುಡಿದವರಿಗೆ ಅವಕಾಶ ಕೇಳುವುದರಲ್ಲಿ ತಪ್ಪೇನಿದೆ?
Share this Article
  • FB
  • TW
  • Linkdin
  • Email

ಸಾರಾಂಶ

ರಾಮನಗರ: ಮುಖ್ಯಮಂತ್ರಿ ಸಿದ್ದರಾಮಯ್ಯ ವಿಚಾರವಾಗಿ ಯಾವ ಅಸಮಾಧಾನವೂ ಇಲ್ಲ. ನಮ್ಮ ನಾಯಕರೂ ಬೆವರು ಸುರಿಸಿ ಪಕ್ಷವನ್ನು ಅಧಿಕಾರಕ್ಕೆ ತರಲು ಹೋರಾಟ ಮಾಡಿದ್ದಾರೆ. ಅದಕ್ಕೆ ತಕ್ಕಂತೆ ನಾವೆಲ್ಲರು ಅವಕಾಶ ಕೊಡಬೇಕೆಂದು ಕೇಳುವುದರಲ್ಲಿ ತಪ್ಪೇನಿದೆ ಎಂದು ರಾಮನಗರ ಕ್ಷೇತ್ರ ಶಾಸಕ ಇಕ್ಬಾಲ್ ಹುಸೇನ್ ಪ್ರಶ್ನಿಸಿದರು.
ರಾಮನಗರ: ಮುಖ್ಯಮಂತ್ರಿ ಸಿದ್ದರಾಮಯ್ಯ ವಿಚಾರವಾಗಿ ಯಾವ ಅಸಮಾಧಾನವೂ ಇಲ್ಲ. ನಮ್ಮ ನಾಯಕರೂ ಬೆವರು ಸುರಿಸಿ ಪಕ್ಷವನ್ನು ಅಧಿಕಾರಕ್ಕೆ ತರಲು ಹೋರಾಟ ಮಾಡಿದ್ದಾರೆ. ಅದಕ್ಕೆ ತಕ್ಕಂತೆ ನಾವೆಲ್ಲರು ಅವಕಾಶ ಕೊಡಬೇಕೆಂದು ಕೇಳುವುದರಲ್ಲಿ ತಪ್ಪೇನಿದೆ ಎಂದು ರಾಮನಗರ ಕ್ಷೇತ್ರ ಶಾಸಕ ಇಕ್ಬಾಲ್ ಹುಸೇನ್ ಪ್ರಶ್ನಿಸಿದರು. ತಾಲೂಕಿನ ಬಿಳಗುಂಬ ಬೈಪಾಸ್ ರಸ್ತೆ ಬಳಿ ವಸತಿ ಯುಕ್ತ ಪರಿಶಿಷ್ಟ ಜಾತಿ - ಪರಿಶಿಷ್ಟ ಪಂಗಡದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಯಕರಾದ ಡಿ.ಕೆ.ಶಿವಕುಮಾರ್ ನಿಷ್ಠೆ ಪ್ರಾಮಾಣಿಕತೆಯಿಂದ ಹೋರಾಟ ಮಾಡಿ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ. ಅವರಿಗೆ ಅವಕಾಶ ಸಿಗಬೇಕೆಂಬುದು ನಾನು ಮಾತ್ರವಲ್ಲ ಪಕ್ಷದ ಕಾರ್ಯಕರ್ತರು ಹಾಗೂ ಜನರ ಕೂಗು, ಎಲ್ಲರ ಆಸೆ ಅಭಿಲಾಷೆಯೂ ಆಗಿದೆ ಎಂದರು. ಮುಖ್ಯಮಂತ್ರಿ ಸಿದ್ದರಾಮಯ್ಯ ವಿಚಾರವಾಗಿ ಅಸಮಾಧಾನ ಪಡುವಂತಹದು ಏನಿದೆ. ಎಲ್ಲರಿಗೂ ಅವಕಾಶ ಸಿಗಬೇಕು. ಪಕ್ಷದ ವರಿಷ್ಠರು ಸೂಕ್ತ ಸಂದರ್ಭದಲ್ಲಿ ಅವಕಾಶ ಮಾಡಿಕೊಡುತ್ತಾರೆಂಬ ವಿಶ್ವಾಸವಿದೆ. ನಮ್ಮಲ್ಲಿ ಯಾವ ಗೊಂದಲವೂ ಇಲ್ಲ. ನಮಗೆ ರಾಜ್ಯದ ಅಭಿವೃದ್ಧಿ ಆಗಬೇಕು. ಇದಕ್ಕಾಗಿ ಒಗ್ಗಟ್ಟಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು. ಡಿ.ಕೆ.ಶಿವಕುಮಾರ್ ಪರವಾಗಿ ನಿಲ್ಲಬೇಕೆಂಬ ಒತ್ತಡ ಏನಾದರು ಇದಿಯಾ ಎಂಬ ಪ್ರಶ್ನೆಗೆ ನಮ್ಮ ನಾಯಕರನ್ನು ಭೇಟಿಯಾಗಿ ಮೂರು ತಿಂಗಳಾಗಿದೆ. ನಮಗೆ ಯಾರಿಂದಲು ಯಾವ ಒತ್ತಡವೂ ಇಲ್ಲ. ಸತ್ಯ, ಧರ್ಮ, ನ್ಯಾಯಕ್ಕೆ ಕಾಲ ಇದೆ. ಶ್ರಮ ಇದ್ದರೆ ಲ ಉಂಟು ಎಂಬ ಮಾತಿದೆ. ಪಕ್ಷಕ್ಕಾಗಿ ದುಡಿದವರಿಗೆ ಅವಕಾಶ ಕೇಳುವುದರಲ್ಲಿ ತಪ್ಪೇನಿದೆ. ಸತ್ಯ, ಧರ್ಮ, ನ್ಯಾಯಕ್ಕೆ ಬೆಲೆ ಇದೆ. ನಾನು ಅದರ ಪರವಾಗಿದ್ದೇನೆಯೇ ಹೊರತು ಯಾವ ವ್ಯಕ್ತಿ ಪರವಾಗಿ ಹೋರಾಟ ಮಾಡುತ್ತಿಲ್ಲ ಎಂದು ತಿಳಿಸಿದರು. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಇಬ್ಬರು ನಮ್ಮ ಪಕ್ಷದ ನಾಯಕರು. ಒಬ್ಬರನ್ನು ಮೇಲೆ ಎತ್ತಿಕಟ್ಟಿ ಮಾತನಾಡಬಾರದು. ಕಾಂಗ್ರೆಸ್ ಪಕ್ಷ ಎಲ್ಲರ ಪರವಾಗಿ ಕೆಲಸ ಮಾಡುತ್ತಿದೆ. ಪ.ಜಾತಿ, ಪ.ಪಂಗಡ, ಹಿಂದುಳಿದವರು ಸೇರಿದಂತೆ ಎಲ್ಲರನ್ನು ಜೊತೆಯಲ್ಲಿ ಕರೆದೊಯ್ಯುವುದು ಅವರ ಕರ್ತವ್ಯ. ಅವರು ಒಂದು ಜಾತಿ , ವರ್ಗಕ್ಕೆ ಸೀಮಿತರಾದವರಲ್ಲ. ಎಲ್ಲ ಜಾತಿ ಧರ್ಮದ ನಾಯಕರು ಎಂದು ಹೇಳಿದರು. ಕಾಂಗ್ರೆಸ್ ಪಕ್ಷ ಯಾವುದೇ ಒಂದು ಜಾತಿ ಧರ್ಮದ ಪರವಾಗಿ ನಿಂತಿಲ್ಲ. ಎಲ್ಲ ಜಾತಿ ಧರ್ಮಗಳನ್ನು ಒಳಗೊಂಡಿರುವ ಪಕ್ಷವಾಗಿದೆ. ಅಲ್ಪಸಂಖ್ಯಾತರು, ಬಡವರು, ಹಿಂದುಳಿದ ವರ್ಗದವರು ಯಾರೇ ಆಗಲಿ ಎಲ್ಲ ಧರ್ಮದವರನ್ನು ಒಳಗೊಂಡಿದೆ. ಆಯಾಯ ಧರ್ಮದ ಮುಖಂಡರು ಜವಾಬ್ದಾರಿ ತೆಗೆದುಕೊಂಡು ಸಭೆ ಸಮಾರಂಭ ಮಾಡುತ್ತಾರೆ. ಆಯಾಯ ಸಮುದಾಯದ ಹಿತದೃಷ್ಟಿಯಿಂದ ಸಭೆ ಸಮಾರಂಭಗಳನ್ನು ಮಾಡುತ್ತಾರೆ. ಅಲ್ಪಸಂಖ್ಯಾತ ಸಮುದಾಯದಲ್ಲಿಯೂ ಕೆಲ ನಾಯಕರು ಮುಂದಾಳತ್ವ ವಹಿಸಿ ಕೆಲಸ ಮಾಡುವುದರಲ್ಲಿ ತಪ್ಪೇನಿದೆ ಎಂದು ಇಕ್ಬಾಲ್ ಹುಸೇನ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಮಠ , ಮಂದಿರ, ಮಸೀದಿಗಳಲ್ಲಿ ಸಮುದಾಯದ ಹಿರಿಯರು, ಮುಖಂಡರು ಕಷ್ಟ ಸುಖ ಮಾತನಾಡುತ್ತಾರೆ. ಸಮುದಾಯಕ್ಕೆ ಆಗಬೇಕಾಗಿರುವ ಕೆಲಸಗಳ ಬಗ್ಗೆಯೂ ಚರ್ಚೆ ಮಾಡುತ್ತಾರೆ. ಅದರಲೆಲ್ಲ ರಾಜಕೀಯ ಬೆರೆಸುವುದು ಸರಿಯಲ್ಲ. ಮತಯಾಚನೆ ಮಾಡಿದರೆ, ಕರಪತ್ರ ಹಂಚಿದರೆ ನೀತಿ ಸಂಹಿತೆ ಉಲ್ಲಂಘನೆ ಮಾಡಿದಂತಾಗುತ್ತದೆ ಎಂದು ಹೇಳಿದರು. ನಾನು ಎಲ್ಲ ವರ್ಗಕ್ಕೆ ಸೇರಿದವನು. ಎಲ್ಲರ ಮನೆ ಮಗ. ಎಲ್ಲರು ಸಾಕಿದ್ದರಿಂದಲೇ ನಾನು ಸೇವಕನಾಗಿ ಆಯ್ಕೆಯಾಗಿದ್ದೇನೆ. ನನಗೆ ಎಲ್ಲ ಜಾತಿ ಧರ್ಮಗಳು ಒಂದೆಯಾಗಿವೆ. ಮೇಲಿರುವವನೆ ಧರ್ಮ. ಸೂರ್ಯ, ಚಂದ್ರ, ಆಕಾಶ , ಭೂಮಿ, ನೀರು ಒಂದೆಯಾಗಿದೆ ಎಂದು ಇಕ್ಬಾಲ್ ಹುಸೇನ್ ತಿಳಿಸಿದರು. ಬಿಳಗುಂಬ ಗ್ರಾಪಂ ಅಧ್ಯಕ್ಷ ಎಸ್ .ಪುಟ್ಟಸಿದ್ದೇಗೌಡ, ಉಪಾಧ್ಯಕ್ಷೆ ಜಿ.ಕೆ.ಸೌಭಾಗ್ಯ, ಸದಸ್ಯ ನವೀನ್‌ ಗೌಡ , ಕಾಂಗ್ರೆಸ್ ಮುಖಂಡ ಪ್ರಾಣೇಶ್‌ ಮತ್ತಿತರರು ಹಾಜರಿದ್ದರು. ಬಾಕ್ಸ್‌....................... 17 ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಾಣ : ಮಕ್ಕಳ ವ್ಯಾಸಂಗಕ್ಕೆ ವಸತಿ ಸಹಿತ ಕಾಲೇಜಿನ ಅವಶ್ಯಕತೆ ಇತ್ತು. ಹೀಗಾಗಿ ಬಿಳಗುಂಬ ಬೈಪಾಸ್ ಬಳಿ 17 ಕೋಟಿ ರುಪಾಯಿ ವೆಚ್ಚದಲ್ಲಿ ವಸತಿಯುಕ್ತ ಪ.ಜಾತಿ.ಪ.ಪಂಗಡದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಟ್ಟಡ ನಿರ್ಮಾಣಕ್ಕೆ ಶಂಕು ಸ್ಥಾಪನೆ ನೆರವೇರಿಸಲಾಗಿದೆ. ಈಗಾಗಲೇ ಕಾಲೇಜು ನಡೆಯುತ್ತಿದ್ದು, ಅಲ್ಲಿ ಸ್ವಂತ ಜಾಗ ಇಲ್ಲ. ಮಕ್ಕಳ ವ್ಯಾಸಂಗಕ್ಕೆ ಅನುಕೂಲವಾದ ವಾತಾವರಣ ಹಾಗೂ ಕಟ್ಟಡ ನಿರ್ಮಾಣಕ್ಕೆ ಸೂಕ್ತವಾದ ಜಾಗ ಸಿಕ್ಕಿದೆ. ಸುಸಜ್ಜಿತವಾದ ಕಾಲೇಜು ಕಟ್ಟಡ ನಿರ್ಮಾಣಗೊಳ್ಳಲಿದೆ ಎಂದು ಇಕ್ಬಾಲ್ ಹುಸೇನ್ ಹೇಳಿದರು. 3ಕೆಆರ್ ಎಂಎನ್‌ 1.ಜೆಪಿಜಿ ರಾಮನಗರ ತಾಲೂಕಿನ ಬಿಳಗುಂಬ ಬೈಪಾಸ್ ರಸ್ತೆ ಬಳಿ ವಸತಿ ಯುಕ್ತ ಪರಿಶಿಷ್ಟ ಜಾತಿ - ಪರಿಶಿಷ್ಟ ಪಂಗಡದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಟ್ಟಡ ನಿರ್ಮಾಣಕ್ಕೆ ಶಾಸಕ ಇಕ್ಬಾಲ್ ಹುಸೇನ್ ಭೂಮಿ ಪೂಜೆ ನೆರವೇರಿಸಿದರು.