ಸಾರಾಂಶ
ಗ್ಯಾರಂಟಿ ಯೋಜನೆಗಾಗಿ ಇನ್ನೂ ರಾಜ್ಯದ ಜನರ ಮೇಲೆ ಯಾವ್ಯಾವ ತೆರಿಗೆ ಹಾಕಬೇಕಂತ ಮಾಡಿದ್ದೀರಿ ಎಂದು ರಾಜ್ಯ ಸರ್ಕಾರದ ವಿರುದ್ಧ ಮಾಜಿ ಶಾಸಕ ವೀರಣ್ಣ ಚರಂತಿಮಠ ಆಕ್ರೋಶ ಹೊರಹಾಕಿದ್ದಾರೆ.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಗ್ಯಾರಂಟಿ ಯೋಜನೆಗಾಗಿ ಇನ್ನೂ ರಾಜ್ಯದ ಜನರ ಮೇಲೆ ಯಾವ್ಯಾವ ತೆರಿಗೆ ಹಾಕಬೇಕಂತ ಮಾಡಿದ್ದೀರಿ ಎಂದು ರಾಜ್ಯ ಸರ್ಕಾರದ ವಿರುದ್ಧ ಮಾಜಿ ಶಾಸಕ ವೀರಣ್ಣ ಚರಂತಿಮಠ ಆಕ್ರೋಶ ಹೊರಹಾಕಿದ್ದಾರೆ.ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರು ಬೇರೆ ದೇಶದಲ್ಲಿದ್ದ ಚಿನ್ನವನ್ನು ನಮ್ಮ ದೇಶಕ್ಕೆ ತಂದು ಸಂಗ್ರಹ ಮಾಡಿದರೆ ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ರಾಜ್ಯದ ಸರ್ಕಾರಿ ಆಸ್ತಿ ಅಡವಿಡುವುದು ಹಾಗೂ ಮಾರಾಟ ಮಾಡಲು ಹುನ್ನಾರ ನಡೆಸಿದೆ. ಸರ್ಕಾರಿ ಆಸ್ತಿ ಯಾವುದೂ ಮಾರಾಟ ಮಾಡಬಾರದು ಎಂದು ಅವರು ಆಗ್ರಹಿಸಿದರು.
ಆಸ್ತಿ ಖರೀದಿ ಸ್ಟ್ಯಾಂಪ್ ತೆರಿಗೆ ಹೆಚ್ಚಳ, ಪೆಟ್ರೋಲ್, ಡಿಸೇಲ್ ದರ ಹೆಚ್ಚಳ ಮಾಡಿದ್ದಾಗಿದೆ. ಈಗ ಬೆಂಗಳೂರಿನಲ್ಲಿ ಇರುವ ಆಸ್ತಿ ಗುರುತಿಸಿ ತೆರಿಗೆ ಹೆಚ್ಚಳ ಮಾಡುವುದು, ಹೀಗೆ ಪ್ರತಿಯೊಂದು ತೆರಿಗೆ ಹೆಚ್ಚಳ ಮಾಡಿ ಗ್ಯಾರಂಟಿಗೆ ಆದಾಯ ಸಂಗ್ರಹ ಸರ್ಕಾರ ಮಾಡುತ್ತಿದೆ. ರಾಜ್ಯದ ಅಭಿವೃದ್ಧಿಗೆ ಯಾವುದೇ ಒತ್ತು ನೀಡುತ್ತಿಲ್ಲ ಎಂದು ದೂರಿದರು.ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟು ಹೋಗಿದೆ. ಕೊಲೆ ಸುಲಿಗೆ ರಾಜ್ಯದಲ್ಲಿ ನಿರಂತರವಾಗಿ ನಡೆಯುತ್ತಿವೆ. ಪೊಲೀಸ್ ಇಲಾಖೆ ಸಂಪೂರ್ಣ ನಿಷ್ಕ್ರಿಯವಾಗಿದೆ ಎಂದು ಆರೋಪಿಸಿದರು.
ರಾಜ್ಯದ ಒಂಬತ್ತು ರೈಲ್ವೆ ಕಾಮಗಾರಿಯನ್ನು ಪೂರ್ಣಗೊಳಿಸುವುದಾಗಿ ರೈಲ್ವೆ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಹೇಳಿದ್ದು ಬಾಗಲಕೋಟೆ-ಕುಡಚಿ ರೈಲ್ವೆ ಕಾಮಗಾರಿ ಕೂಡ ಪೂರ್ಣಗೊಳಿಸುವುದಾಗಿ ಹೇಳಿದ್ದಾರೆ. ಆದಷ್ಟು ಬೇಗ ರೈಲ್ವೆ ಕಾಮಗಾರಿ ಮುಕ್ತಾಯವಾಗಲಿದೆ ಎಂದರು.