ಬ್ರಹ್ಮಾವರ ಜಿಎಂ ಸ್ಕೂಲಿನಲ್ಲಿ ವಿಶ್ವ ಪರಿಸರ ದಿನಾಚರಣೆ

| Published : Jun 06 2025, 12:49 AM IST

ಸಾರಾಂಶ

ಬ್ರಹ್ಮಾವರ ಜಿಎಂ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್‌ನಲ್ಲಿ ವಿಶ್ವ ಪರಿಸರ ದಿನಾಚರಣೆ ನಡೆಯಿತು. ಶಾಲೆಯ ವಿದ್ಯಾರ್ಥಿಗಳು ತಯಾರಿಸಿದ ಪೇಪರ್ ಬ್ಯಾಗನ್ನು ಸ್ಥಳೀಯ ಅಂಗಡಿಗಳಿಗೆ ವಿತರಿಸಿದರು.

ಕನ್ನಡಪ್ರಭ ವಾರ್ತೆ ಬ್ರಹ್ಮಾವರ

ಇಲ್ಲಿನ ಜಿಎಂ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್‌ನಲ್ಲಿ ಗುರುವಾರ ವಿಶ್ವ ಪರಿಸರ ದಿನಾಚರಣೆ ನಡೆಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಪರಿಸರವಾದಿ ಸುನಿಲ್ ಸಾಲಿಯಾನ್‌ ಆಗಮಿಸಿ ಮಾತನಾಡಿ, ಪ್ಲಾಸ್ಟಿಕ್‌ನ ಇತಿಹಾಸ ಮತ್ತು ಅತಿಯಾದ ಬಳಕೆ ಅದರ ಪರಿಣಾಮಗಳ ಕುರಿತು ಮಾಹಿತಿ ನೀಡಿ, ಕಳೆದ ಇಪ್ಪತ್ತು ವರ್ಷಗಳಿಂದ ಈಚೆಗೆ ಪ್ಲಾಸ್ಟಿಕ್ ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತಿದೆ. ದಿನನಿತ್ಯದ ಜೀವನ ಕ್ರಮದಲ್ಲಿ ಪ್ಲಾಸ್ಟಿಕ್ ರಹಿತ ವಸ್ತುಗಳನ್ನು ಬಳಸಬೇಕೆಂದು ತಿಳಿಸಿದರು.ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಮಾತನಾಡಿ, ಪ್ರತಿದಿನವೂ ಪರಿಸರ ದಿನವಾಗಿರಬೇಕು. ಸ್ವಚ್ಛತೆಯನ್ನು ನಾವು ಪಾಲಿಸಿ ಇತರರಿಗೆ ಮಾಹಿತಿ ನೀಡಬೇಕು. ಗಿಡ ನೆಟ್ಟು ಆರೈಕೆ ಮಾಡಿ ಅವುಗಳು ಬೆಳೆದಾಗ ಮಕ್ಕಳನ್ನು ಪೋಷಿಸಿದ ಹಾಗೆ ಸಂತೃಪ್ತಿ ದೊರೆಯುತ್ತದೆ ಎಂದರು.ಶಾಲಾ ಪ್ರಾಂಶುಪಾಲ ಜಾರ್ಜ್ ಕುರಿಯನ್, ಎಲ್ಲರಿಂದಲೂ ಪ್ಲಾಸ್ಟಿಕ್ ಮುಕ್ತ ಪರಿಸರದ ಪ್ರತಿಜ್ಞೆಯನ್ನು ಸ್ವೀಕರಿಸಿ ಮಾತನಾಡಿ, ನಾವು ಪ್ಲಾಸ್ಟಿಕ್ ಮುಕ್ತ ಸಮಾಜವನ್ನು ನಿರ್ಮಾಣ ಮಾಡುವುದರಲ್ಲಿ ಗೆಲುವನ್ನು ಸಾಧಿಸಬೇಕು. ಹಾಗೆಯೇ ಸ್ವಚ್ಛ, ಹಸಿರು ಪ್ರಕೃತಿಯನ್ನು ನಿರ್ಮಾಣ ಮಾಡಬೇಕೆಂದರು.ನಂತರ ಶಾಲೆಯ ವಿದ್ಯಾರ್ಥಿಗಳು ತಯಾರಿಸಿದ ಪೇಪರ್ ಬ್ಯಾಗನ್ನು ಸ್ಥಳೀಯ ಅಂಗಡಿಗಳಿಗೆ ವಿತರಿಸಿದರು. ಇದೇ ಸಂದರ್ಭದಲ್ಲಿ ಶಾಲಾ ವಠಾರದಲ್ಲಿ ಗಿಡಗಳನ್ನು ನೆಡಲಾಯಿತು.