ಸೋಮವಾರಪೇಟೆ: ಸಾಹಿತಿ ಡಾ.ಎಚ್.ಎಸ್.ವೆಂಕಟೇಶ್ ಮೂರ್ತಿ ನುಡಿನಮನ

| Published : Jun 02 2025, 11:52 PM IST

ಸಾರಾಂಶ

ನಾಡಿನ ಹೆಸರಾಂತ ಸಾಹಿತಿ ಡಾ. ಎಚ್‌.ಎಸ್‌. ವೆಂಕಟೇಶ್‌ಮೂರ್ತಿ ಅವರ ನಿಧನಕ್ಕೆ ಇಲ್ಲಿನ ಕನ್ನಡ ಸಿರಿ ಬಳಗದ ವತಿಯಿಂದ ನುಡಿನಮನ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಸೋಮವಾರಪೇಟೆ

ನಾಡಿನ ಹೆಸರಾಂತ ಸಾಹಿತಿ ಡಾ.ಎಚ್.ಎಸ್.ವೆಂಕಟೇಶಮೂರ್ತಿ ಅವರ ನಿಧನಕ್ಕೆ ಇಲ್ಲಿನ ಕನ್ನಡ ಸಿರಿ ಬಳಗದ ವತಿಯಿಂದ ನುಡಿನಮನ ಸಲ್ಲಿಸಲಾಯಿತು.

ಭಾನುವಾರದಂದು ಇಲ್ಲಿನ ಪತ್ರಿಕಾಭವನದಲ್ಲಿ ಆಯೋಜಿಸಿದ್ದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಜಿಲ್ಲಾ ಕಸಾಪ ಮಾಜಿ ಕೋಶಾಧ್ಯಕ್ಷ ಎಸ್.ಎ.ಮುರಳೀಧರ್ ಮಾತನಾಡಿ, ನಾಡು ಕಂಡ ಶ್ರೇಷ್ಠ ಸಾಹಿತಿಗಳಲ್ಲಿ ಒಬ್ಬರಾದ ವೆಂಕಟೇಶಮೂರ್ತಿಯವರು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ನಾಟಕ, ಕವನಸಂಕಲನ ಸೇರಿದಂತೆ ಹಲವು ಪ್ರಕಾರಗಳಲ್ಲಿ ಅವರ ಸಾಹಿತ್ಯ ಸೇವೆಯನ್ನು ಶ್ಲಾಘಿಸಿದರು.

ಗ್ರಾಮೀಣ ಪ್ರದೇಶದಿಂದ ಅರಳಿದ ಪ್ರತಿಭೆಯಾದ ಸಾಹಿತಿ ವೆಂಕಟೇಶಮೂರ್ತಿ ಅವರು, ಗ್ರಾಮೀಣ ಸೊಗಡಿನ ಮತ್ತು ಪರಿಸರದ ಕುರಿತು ನೈಜ ಕಾಳಜಿ ಹೊಂದಿದ್ದರಲ್ಲದೇ, ತಮ್ಮ ಅನುಭವದಿಂದಲೇ ಸಾಹಿತ್ಯ ರಚನೆಯಲ್ಲಿ ತೊಡಗಿದ್ದು ವಿಶೇಷವಾಗಿತ್ತು. ಅವರ ನಿಧನದಿಂದಾಗಿ ಕನ್ನಡ ನಾಡು ಓರ್ವ ಶ್ರೇಷ್ಠ ಸಾಹಿತಿಯನ್ನು ಕಳೆದುಕೊಂಡಂತಾಗಿದೆ ಎಂದರು.

ಕನ್ನಡ ಸಿರಿ ಬಳಗದ ಅಧ್ಯಕ್ಷ ಜವರಪ್ಪ, ಹಿರಿಯ ಸಾಹಿತಿಗಳಾದ ಜಲ ಕಾಳಪ್ಪ, ನ.ಲ.ವಿಜಯ ಅಗಲಿದ ಸಾಹಿತಿಗಳ ಕುರಿತು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಸಾಹಿತಿ ಸಿ.ಕೆ.ಮಲ್ಲಪ್ಪ, ಜಾನಪದ ಪರಿಷತ್‌ನ ನಿರ್ದೇಶಕಿ ರೇಣುಕಾ ವೆಂಕಟೇಶ್, ಶಿಕ್ಷಕಿ ಕವಿತ ಜನಾರ್ಧನ್, ಹಿರಿಯ ಪತ್ರಕರ್ತರಾದ ಲೋಕೇಶ್, ಹಿರಿಕರ ರವಿ ಮತ್ತಿತರರು ಇದ್ದರು.

ಗಾಯಕರಾದ ಶರ್ಮಿಳಾ ರಮೇಶ್, ಸುಮತಿ ಅವರುಗಳು ಎಚ್.ಎಸ್.ವಿ ಅವರು ರಚಿಸಿದ ಗೀತೆಗಳನ್ನು ಸುಮಧುರವಾಗಿ ಹಾಡುವ ಮೂಲಕ ತಮ್ಮ ಶ್ರದ್ಧಾಂಜಲಿ ಸಲ್ಲಿಸಿದರು.