ಬಾಲಕಿ ಸಾವಿನ ಬಗ್ಗೆ ತನಿಖೆಗೆ ಸಮಿತಿ ರಚನೆ: ಶಾಸಕ ಪಿ.ರವಿಕುಮಾರ್

| Published : Jun 02 2025, 11:52 PM IST

ಸಾರಾಂಶ

ಮೈಸೂರು ಮೆಡಿಕಲ್ ಕಾಲೇಜಿನ ಮಕ್ಕಳ ವಿಭಾಗದ ಮುಖ್ಯಸ್ಥ ಡಾ.ಪ್ರದೀಪ್, ನಾಗಮಂಗಲ ತಾಲೂಕು ಬಿ.ಜಿ.ನಗರ ಏಮ್ಸ್‌ನ ಮೂಳೆ ಮತ್ತು ಕೀಲು ವಿಭಾಗದ ಮುಖ್ಯಸ್ಥ ಡಾ.ಮಹೇಶ್, ಜನರಲ್ ಸರ್ಜರಿ ವಿಭಾಗದ ಮುಖ್ಯಸ್ಥ ಡಾ.ಬಾಲಕೃಷ್ಣ, ಅರಿವಳಿಕೆ ವಿಭಾಗದ ಮುಖ್ಯಸ್ಥ ಡಾ.ಚೇತನ್ ಆನಂದ್, ಜಿಲ್ಲಾ ಆರೋಗ್ಯ ಇಲಾಖೆ ಡಿಎಲ್‌ಒ ಡಾ.ಸೋಮಶೇಖರ್ ಅವರನ್ನೊಳಗೊಂಡ ಸಮಿತಿ ರಚನೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಬಾಲಕಿ ಸಾನ್ವಿ ಸಾವಿಗೆ ಮಿಮ್ಸ್ ವೈದ್ಯರ ನಿರ್ಲಕ್ಷ್ಯ ಕಾರಣವೆಂದು ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ಸತ್ಯಾಸತ್ಯತೆ ಕುರಿತು ತನಿಖೆ ನಡೆಸಲು ತಜ್ಞರ ಸಮಿತಿ ರಚಿಸಲಾಗಿದೆ. ಹದಿನೈದು ದಿನಗಳೊಳಗೆ ಸಮಿತಿ ವರದಿ ಸಲ್ಲಿಸುವಂತೆ ಸೂಚಿಸಿರುವುದಾಗಿ ಶಾಸಕ ಪಿ.ರವಿಕುಮಾರ್ ಹೇಳಿದರು.

ಮೈಸೂರು ಮೆಡಿಕಲ್ ಕಾಲೇಜಿನ ಮಕ್ಕಳ ವಿಭಾಗದ ಮುಖ್ಯಸ್ಥ ಡಾ.ಪ್ರದೀಪ್, ನಾಗಮಂಗಲ ತಾಲೂಕು ಬಿ.ಜಿ.ನಗರ ಏಮ್ಸ್‌ನ ಮೂಳೆ ಮತ್ತು ಕೀಲು ವಿಭಾಗದ ಮುಖ್ಯಸ್ಥ ಡಾ.ಮಹೇಶ್, ಜನರಲ್ ಸರ್ಜರಿ ವಿಭಾಗದ ಮುಖ್ಯಸ್ಥ ಡಾ.ಬಾಲಕೃಷ್ಣ, ಅರಿವಳಿಕೆ ವಿಭಾಗದ ಮುಖ್ಯಸ್ಥ ಡಾ.ಚೇತನ್ ಆನಂದ್, ಜಿಲ್ಲಾ ಆರೋಗ್ಯ ಇಲಾಖೆ ಡಿಎಲ್‌ಒ ಡಾ.ಸೋಮಶೇಖರ್ ಅವರನ್ನೊಳಗೊಂಡ ಸಮಿತಿ ರಚಿಸಿರುವುದಾಗಿ ಸೋಮವಾರ ಸುದ್ದಿಗಾರರಿಗೆ ತಿಳಿಸಿದರು.

ಬಾಲಕಿ ಸಾನ್ವಿ ಸಾವಿನ ಕುರಿತು ವೈದ್ಯರು ನೀಡಿರುವ ಹೇಳಿಕೆಗಳು ತೃಪ್ತಿದಾಯಕವಾಗಿಲ್ಲ. ಟೈಲ್ಸ್ ಕಾಲಿನ ಮೇಲೆ ಬಿದ್ದು ಮೂಳೆ ಮುರಿತಕ್ಕೊಳಗಾದ ನಾಲ್ಕೈದು ದಿನ ಆದ ನಂತರ ಆಸ್ಪತ್ರೆಗೆ ಕರೆತಂದಿದ್ದರು. ಸೋಂಕು ಎಲ್ಲೆಡೆ ಹಬ್ಬಿದ್ದರಿಂದ ಚಿಕಿತ್ಸೆಗೆ ಸ್ಪಂದಿಸಲಾಗದೆ ಬಾಲಕಿ ಸಾವನ್ನಪ್ಪಿದಳು ಎಂದು ಹೇಳಿದ್ದಾರೆ. ವೈದ್ಯರ ಹೇಳಿಕೆಯ ಸತ್ಯಾಸತ್ಯತೆಯನ್ನು ತಿಳಿಯಲು ತಜ್ಞರ ಸಮಿತಿ ರಚಿಸಿರುವುದಾಗಿ ಹೇಳಿದರು.

ಸೋಮವಾರ ಜಿಲ್ಲಾಧಿಕಾರಿ, ಮಿಮ್ಸ್ ನಿರ್ದೇಶಕ ನರಸಿಂಹಸ್ವಾಮಿ ಹಾಗೂ ವೈದ್ಯಾಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ವಿವರಣೆ ನೀಡಿದರು.

ತಮಿಳುನಾಡಿನವರು ನಮ್ಮ ಋಣದಲ್ಲಿದ್ದಾರೆ: ಪಿ.ರವಿಕುಮಾರ್‌

ಕನ್ನಡಪ್ರಭ ವಾರ್ತೆ ಮಂಡ್ಯ

ಕರ್ನಾಟಕದವರು ತಮಿಳುನಾಡಿನವರ ಋಣದಲ್ಲಿಲ್ಲ. ತಮಿಳುನಾಡಿನವರು ನಮ್ಮ ಋಣದಲ್ಲಿದ್ದಾರೆ. ಕನ್ನಡ, ಕನ್ನಡಿಗರ ಬಗ್ಗೆ ಮಾತನಾಡುವಾಗ ಎಚ್ಚರದಿಂದ ಇರಬೇಕು ಎಂದು ಶಾಸಕ ಪಿ.ರವಿಕುಮಾರ್‌ ಖಡಕ್‌ ಎಚ್ಚರಿಕೆ ನೀಡಿದರು.

ಕಾವೇರಿ ಕರ್ನಾಟಕದಲ್ಲಿ ಹುಟ್ಟೋದು. ಕಾವೇರಿ ನೀರು ನಿಲ್ಲಿಸಿದರೆ ಕುಡಿಯಲು, ಬೆಳೆಗೆ ನೀರಿರುವುದಿಲ್ಲ. ಇದು ತಮಿಳುನಾಡಿನವರ ತಲೆಯಲ್ಲಿರಲಿ. ಕಾವೇರಿ ನಮ್ಮದು. ತಮಿಳುನಾಡಿನವರು ನಮ್ಮ ಋಣದಲ್ಲಿದ್ದಾರೆ ಎಂದು ಕನ್ನಡದ ಬಗ್ಗೆ ನಟ ಕಮಲ್‌ ಹಾಸನ್ ಹೇಳಿಕೆ ವಿಚಾರವಾಗಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ಕಮಲ್‌ ಹಾಸನ್ ಚಿತ್ರ ನಿಷೇಧ ಮಾಡುವುದಾಗಿ ಚಲನಚಿತ್ರ ವಾಣಿಜ್ಯ ಮಂಡಳಿಯವರು ಹೇಳಿದ್ದಾರೆ. ನಿಷೇಧ ಮಾಡಲಿ. ಕನ್ನಡಕ್ಕಿಂತ ದೊಡ್ಡವರು ಯಾರೂ ಇಲ್ಲ. ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ. ಕನ್ನಡಕ್ಕೆ ಅವಮಾನವಾದರೇ ನಮ್ಮ ತಾಯಿಗೆ ಅವಮಾನ ಮಾಡಿದಂತೆ. ಕ್ಷಮೆಯಾಚನೆ ಬಗ್ಗೆ ಕಮಲ್ ಹಾಸನ್ ಉದ್ಧಟತನ ತೋರುತ್ತಿದ್ದಾರೆ. ಇದು ಅವರ ಹಿರಿತನಕ್ಕೆ ಗೌರವ ತರುವುದಿಲ್ಲ ಎಂದರು.

ಊಟಿ ಮತ್ತು ಹೊಸೂರು ಹಿಂದೆ ಮೈಸೂರು ಸಂಸ್ಥಾನದ ಭಾಗವಾಗಿತ್ತು. ಈಗ ತಮಿಳುನಾಡಿನಲ್ಲಿದೆ. ಅವೆರಡನ್ನೂ ಕರ್ನಾಟಕಕ್ಕೆ ಸೇರಿಸಲಿ. ನಮ್ಮ ರಾಜ್ಯದ ನೆಲೆ ಪುರಾತನವಾದುದ್ದು. ಅದು ಕರ್ನಾಟಕದ ಭಾಗವಾಗಿರಬೇಕು. ಅದಕ್ಕಾಗಿ ಹೊಸೂರು, ಊಟಿಯನ್ನು ಕರ್ನಾಟಕಕ್ಕೆ ಸೇರಿಸಲಿ. ಇದು ತಮಿಳುನಾಡಿನವರು ಮಾಡ್ತಿರೋದು ದೌರ್ಜನ್ಯವಲ್ಲವೇ ಎಂದು ಪ್ರಶ್ನಿಸಿದರು.

ಪಕ್ಕದ ರಾಜ್ಯದವರ ಜೊತೆ ಹೇಗೆ ನಡೆದುಕೊಳ್ಳಬೇಕೆಂಬುದನ್ನು ಕಮಲ್‌ ಹಾಸನ್‌ ತಿಳಿದುಕೊಳ್ಳಲಿ. ಇಲ್ಲವೇ ತಮಿಳುನಾಡು ಸಿಎಂ ಸ್ಟಾಲಿನ್ ನಟ ಕಮಲ್‌ ಹಾಸನ್‌ಗೆ ಬುದ್ಧಿವಾದ ಹೇಳಲಿ ಎಂದರು.