ಈಗ ಭವಾನಿ ರೇವಣ್ಣ ಕಾರು ಚಾಲಕನೂ ನಾಪತ್ತೆ: ಶೋಧ

| Published : May 23 2024, 01:04 AM IST / Updated: May 23 2024, 04:46 AM IST

bhavani revanna

ಸಾರಾಂಶ

ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಲೈಂಗಿಕ ಹಗರಣದ ಸಂತ್ರಸ್ತೆ ಅಪಹರಣ ಪ್ರಕರಣ ಸಂಬಂಧ ಸಂಸದರ ತಾಯಿ ಭವಾನಿ ರೇವಣ್ಣ ಅವರ ಕಾರು ಚಾಲಕನಿಗೆ ವಿಶೇಷ ತನಿಖಾ ದಳ (ಎಸ್ಐಟಿ)ದ ತನಿಖೆ ಸಂಕಷ್ಟ ಎದುರಾಗಿದೆ.

 ಬೆಂಗಳೂರು : ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಲೈಂಗಿಕ ಹಗರಣದ ಸಂತ್ರಸ್ತೆ ಅಪಹರಣ ಪ್ರಕರಣ ಸಂಬಂಧ ಸಂಸದರ ತಾಯಿ ಭವಾನಿ ರೇವಣ್ಣ ಅವರ ಕಾರು ಚಾಲಕನಿಗೆ ವಿಶೇಷ ತನಿಖಾ ದಳ (ಎಸ್ಐಟಿ)ದ ತನಿಖೆ ಸಂಕಷ್ಟ ಎದುರಾಗಿದೆ.

ಈ ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಭವಾನಿ ರೇವಣ್ಣ ಅವರ ಕಾರು ಚಾಲಕ ಅಜಿತ್‌ಗೆ ಎರಡು ಬಾರಿ ಎಸ್‌ಐಟಿ ನೋಟಿಸ್ ಜಾರಿಗೊಳಿಸಿತ್ತು. ಆದರೆ ಈ ನೋಟಿಸ್‌ಗೆ ಪ್ರತಿಕ್ರಿಯಿಸದೆ ನಾಪತ್ತೆಯಾಗಿರುವ ಅಜಿತ್‌ ಪತ್ತೆಗೆ ಹಾಸನ, ಮಂಡ್ಯ ಹಾಗೂ ಮೈಸೂರು ಸೇರಿದಂತೆ ಇತರೆಡೆ ಎಸ್‌ಐಟಿ ಹುಡುಕಾಟ ನಡೆಸಿದೆ ಎಂದು ತಿಳಿದು ಬಂದಿದೆ.

ಮೈಸೂರು ಜಿಲ್ಲೆ ಕೆ.ಆರ್‌.ನಗರ ತಾಲೂಕಿನ ಸಂತ್ರಸ್ತೆ ಅಪಹರಣ ಪ್ರಕರಣದಲ್ಲಿ ಅಜಿತ್ ಪಾತ್ರವಹಿಸಿರುವ ಆರೋಪ ಕೇಳಿ ಬಂದಿದೆ. ಇದೇ ಪ್ರಕರಣದಲ್ಲಿ ಮಾಜಿ ಸಚಿವ ರೇವಣ್ಣ ಬಂಧನದ ಬಳಿಕ ಅಜಿತ್‌ ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದೆ. ಹೀಗಾಗಿ ವಿಚಾರಣೆಗೆ ಬರುವಂತೆ ಹೊಳೆನರಸೀಪುರ ತಾಲೂಕಿನಲ್ಲಿರುವ ಅಜಿತ್‌ ಮನೆಗೆ ತೆರಳಿ ಎಸ್‌ಐಟಿ ಅಧಿಕಾರಿಗಳು ನೋಟಿಸ್‌ ಅಂಟಿಸಿದ್ದರು. ಆದರೆ ವಿಚಾರಣೆಗೆ ಮಾತ್ರ ಕಾರು ಚಾಲಕ ಆಗಮಿಸದೆ ನಾಪತ್ತೆಯಾಗಿದ್ದಾರೆ. ಇನ್ನೊಂದೆಡೆ ಅಜಿತ್ ಸಂಪರ್ಕಿಸಲು ಅವರ ಕುಟುಂಬ ಸದಸ್ಯರ ಮೂಲಕ ಎಸ್‌ಐಟಿ ಪ್ರಯತ್ನ ವಿಫಲವಾಗಿದೆ, ಕೊನೆಗೆ ಕಾರು ಚಾಲಕನ ಪತ್ತೆಗೆ ವಿಶೇಷ ತಂಡಗಳನ್ನು ರಚಿಸಿ ಅಧಿಕಾರಿಗಳು ಕಾರ್ಯಾಚರಣೆಗಿಳಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ನೋಟಿಸ್‌ಗೆ ಉತ್ತರಿಸದ ಭವಾನಿ ರೇವಣ್ಣ?ಇನ್ನು ಇದೇ ಅಪಹರಣ ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಎಸ್‌ಐಟಿ ನೀಡಿದ್ದ ನೋಟಿಸ್‌ಗಳಿಗೆ ಭವಾನಿ ರೇವಣ್ಣರವರು ಸಹ ಉತ್ತರಿಸಿಲ್ಲ ಎಂದು ತಿಳಿದು ಬಂದಿದೆ. ಅಪಹರಣ ಪ್ರಕರಣದ ಎಫ್‌ಐಆರ್‌ನಲ್ಲಿ ಭವಾನಿ ರೇವಣ್ಣರವರ ಹೆಸರು ಕೂಡಾ ಉಲ್ಲೇಖವಾಗಿತ್ತು. ಈ ಹಿನ್ನಲೆಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಹೊಳೇನರಸೀಪುರದಲ್ಲಿ ಮನೆಗೆ ತೆರಳಿ ಭವಾನಿ ಅವರಿಗೆ ಎರಡು ಬಾರಿ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ಆದರೆ, ಇದುವರೆಗೆ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಮೂಲಗಳು ಹೇಳಿವೆ.