ಸಾರಾಂಶ
ಬೀದಿ ನಾಯಿಗಳಿಗೆ ವಿಶೇಷವಾಗಿ ತಯಾರಿಸಿದ ಭಕ್ಷ್ಯನೀಡುತ್ತಿಲ್ಲ, ಮಾನವ ಗುಣಮಟ್ಟದ ಆಹಾರವನ್ನು ಬೀದಿ ನಾಯಿಗಳಿಗೆ ನೀಡುವುದಿಲ್ಲ, ನಾಯಿ ದರ್ಜೆಯ ಆಹಾರ ನೀಡಲಾಗುವುದು ಎಂದು ಬಿಬಿಎಂಪಿ ಅಧಿಕೃತವಾಗಿ ಸ್ಪಷ್ಟಿಕರಣ ನೀಡಿದೆ.
ಬೆಂಗಳೂರು : ಬೀದಿ ನಾಯಿಗಳಿಗೆ ವಿಶೇಷವಾಗಿ ತಯಾರಿಸಿದ ಭಕ್ಷ್ಯನೀಡುತ್ತಿಲ್ಲ, ಮಾನವ ಗುಣಮಟ್ಟದ ಆಹಾರವನ್ನು ಬೀದಿ ನಾಯಿಗಳಿಗೆ ನೀಡುವುದಿಲ್ಲ, ನಾಯಿ ದರ್ಜೆಯ ಆಹಾರ ನೀಡಲಾಗುವುದು, ಟೆಂಡರ್ನಲ್ಲಿ ಊಟದ ಪದಾರ್ಥಗಳ ನಮೂದಿಸಿದ್ದು, ಬಿಟ್ಟರೆ ವಿತರಿಸುವ ಆಹಾರಕ್ಕೆ ಹೆಸರಿಟ್ಟಿಲ್ಲ ಎಂದು ಬಿಬಿಎಂಪಿ ಅಧಿಕೃತವಾಗಿ ಸ್ಪಷ್ಟಿಕರಣ ನೀಡಿದೆ.
ರಾಷ್ಟ್ರಮಟ್ಟದಲ್ಲಿ ಸಂಚಲನ ಸೃಷ್ಟಿಸಿದ ‘ಕನ್ನಡಪ್ರಭ’ದ ವಿಶೇಷ ವರದಿ ‘ಬೀದಿ ನಾಯಿಗಳಿಗೆ ಪಾಲಿಕೆಯಿಂದ ಚಿಕನ್ ರೈಸ್ ಭಾಗ್ಯ’ ಕುರಿತು ಮೊದಲ ಬಾರಿಗೆ ಬಿಬಿಎಂಪಿಯ ಪಶುಪಾಲನೆ ವಿಭಾಗದ ಅಧಿಕಾರಿಗಳು ಪ್ರತಿಕ್ರಿಯೆ ನೀಡಿದ್ದು, ಕೋಳಿ ಮಾಂಸದ ತ್ಯಾಜ್ಯವನ್ನು ಬಳಸಿ ಆಹಾರ ಸಿದ್ಧಪಡಿಸಿ ಬೀದಿ ನಾಯಿಗಳಿಗೆ ನೀಡಲಾಗುವುದು. ಅದಕ್ಕಾಗಿ ಕೋಳಿಯನ್ನು ಕೊಂದು ಹಾಕುವುದಿಲ್ಲ.
ಟೆಂಡರ್ನಲ್ಲಿ ಬೀದಿ ನಾಯಿಗಳಿಗೆ ತಯಾರಿಸುವ ಆಹಾರದ ಪದಾರ್ಥವನ್ನು ಮಾತ್ರ ನಮೂದಿಸಲಾಗಿತ್ತು. ಚಿಕನ್ ರೈಸ್, ಚಿಕನ್ ಬಿರಿಯಾನಿ ಎಂದು ನಮೂದಿಸಿಲ್ಲ. ಸಸ್ಯಾಹಾರವನ್ನು ಬೀದಿ ನಾಯಿಗಳು ತಿನ್ನುವುದಿಲ್ಲ. ಹಾಗಾಗಿ, ಮಾಂಸಾಹಾರ ನೀಡಲಾಗುತ್ತಿದೆ.
ನಗರದ ಕೆಲವು ಕಡೆ ಬೀದಿ ನಾಯಿಗಳ ಹಿಡಿದು ಸಂತಾನಹರಣ ಶಸ್ತ್ರ ಚಿಕಿತ್ಸೆ (ಎಬಿಸಿ) ಹಾಗೂ ಆ್ಯಂಟಿರೇಬಿಸ್ ಲಸಿಕೆ(ಎಆರ್ವಿ) ಹಾಕುವುದು ಕಷ್ಟವಾಗಿದೆ. ಆಹಾರ ವಿತರಣೆಯಿಂದ ಆ ನಾಯಿಗಳ ಹಿಡಿದು ಎಬಿಸಿ ಹಾಗೂ ಎಆರ್ವಿಗೆ ಸಹಕಾರಿಯಾಗಲಿದೆ. ಬೀದಿ ನಾಯಿಗಳ ಆಹಾರ ದೊರೆಯುವುದರಿಂದ ನಾಯಿಗಳ ಆಕ್ರಮಣಶೀಲತೆ ಕಡಿಮೆಯಾಗಲಿದೆ. ಸಾರ್ವಜನಿಕರಿಗೆ ಹತ್ತಿರವಾಗಲಿವೆ. ಬೀದಿ ನಾಯಿ ನಿಯಂತ್ರಣ ಕಾರ್ಯಕ್ರಮಕ್ಕೆ ಸಹಕಾರಿಯಾಗಲಿದೆ. ಅಗತ್ಯವಿರುವ ಕಡೆ ಮಾತ್ರ ಆಹಾರ ವಿತರಣೆ ಮಾಡಲಾಗುವುದು.
ಪ್ರತಿ ಒಂದು ನಾಯಿಗೆ ದಿನದ ಆಹಾರಕ್ಕೆ 11 ರು. ವೆಚ್ಚ ಮಾಡಲಾಗುತ್ತಿದೆ. ಆಹಾರ ಸಾಗಾಣಿಕೆ ವೆಚ್ಚ, ಸ್ವಚ್ಛತೆ, ಜಿಎಸ್ಟಿ ಸೇರಿದಂತೆ ಒಟ್ಟು ವೆಚ್ಚ 22.42 ರು. ಆಗಲಿದೆ. ಭಾರತ ಪ್ರಾಣಿ ಕಲ್ಯಾಣ ಮಂಡಳಿಯ ಕೈಪಿಡಿ, ಸಂಶೋಧನೆಯ ಶಿಫಾರಸ್ಸು ಆಧಾರಿಸಿ ಆಹಾರ ವಿತರಣೆ ಯೋಜನೆ ರೂಪಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.