ಸಾರಾಂಶ
ಮಂಡ್ಯ : ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಆಪರೇಷನ್ ಕುರಿತ ತಮ್ಮ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆ ಶ್ರೀರಂಗಪಟ್ಟಣ ಶಾಸಕ ರಮೇಶ್ ಬಂಡಿಸಿದ್ದೇಗೌಡ ವಿಷಾದ ವ್ಯಕ್ತಪಡಿಸಿದ್ದಾರೆ. ನಾನು ಯಾವುದೇ ದುರುದ್ದೇಶ ಅಥವಾ ದ್ವೇಷದಿಂದ ಕುಮಾರಸ್ವಾಮಿ ಅವರ ಆರೋಗ್ಯದ ಬಗ್ಗೆ ಮಾತನಾಡಿಲ್ಲ. ಅವರ ಆರೋಗ್ಯದ ಬಗೆಗಿನ ಕಾಳಜಿಯಿಂದ ಹಾಗೆ ಮಾತನಾಡಿದ್ದೇನೆ. ನನ್ನ ಮಾತಿನಿಂದ ಅವರ ಮನಸ್ಸಿಗೆ ನೋವಾಗಿದ್ದರೆ ವಿಷಾದಿಸುತ್ತೇನೆ ಎಂದು ಹೇಳಿದ್ದಾರೆ.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಕುಮಾರಸ್ವಾಮಿ ಅವರಿಗಿಂತ ದೊಡ್ಡವನಲ್ಲ, ದುರುದ್ದೇಶಪೂರಕವಾಗಿ ಮಾತಾಡಿಲ್ಲ. ಹಾಗಾಗಿ ನಾನು ವಿಷಾದಿಸುತ್ತೇನೆ. ಕ್ಷಮೆ ಕೇಳುವಂಥ ಮಾತುಗಳನ್ನು ನಾನೇನೂ ಆಡಿಲ್ಲ. ಈ ವಿಚಾರ ಇಲ್ಲಿಗೇ ಮುಗಿಯಲಿ ಎನ್ನುವುದು ನನ್ನ ಅಭಿಪ್ರಾಯ ಎಂದರು.
ನಾನು ದೇವೇಗೌಡರ ಕುಟುಂಬದ ಬಗ್ಗೆಯಾಗಲಿ, ಕುಮಾರಣ್ಣನ ಬಗ್ಗೆಯಾಗಲಿ, ರಾಜಕೀಯದಲ್ಲಾಗಲಿ ವೈಯಕ್ತಿಕವಾಗಿಯಾಗಲಿ ಮಾತಾಡಿಲ್ಲ. ಇಷ್ಟು ವರ್ಷ ರಾಜಕಾರಣ ಮಾಡಿ, ಅವರ ಜೊತೆಯಲ್ಲೇ ಇದ್ದುದರಿಂದ ನಾನು ಅವರ ಆರೋಗ್ಯದ ಬಗೆಗಿನ ಕಾಳಜಿಯಿಂದ ಮಾತಾಡಿದ್ದೇನೆ. ನಾನು ಅವರಿಗೆ ಆಪರೇಷನ್ ಆಗಿರೋದು ಅನುಮಾನ ಎಂದು ಹೇಳಿದ್ದೇನಾ ಎಂದು ಪ್ರಶ್ನಿಸಿದರು.