ಸಾರಾಂಶ
ಕೋಲಾರ : ಸ್ಥಳೀಯ ಆಡಳಿತರೂಢ ಜನಪ್ರತಿನಿಧಿಗಳು ಕೆಲಸ ಮಾಡುವುದನ್ನು ಮರೆತಿದ್ದಾರೆ, ಜಿಲ್ಲಾಧಿಕಾರಿ ಅಕ್ರಂಪಾಷ ಸ್ವಜನ ಪಕ್ಷಪಾತ ಆಡಳಿತ ನಡೆಸುವ ಮೂಲಕ ಒಂದು ಸಮುದಾಯವನ್ನು ತುಷ್ಟೀಕರಣಗೊಳಿಸಲು ಕಾನೂನುಗಳನ್ನು ಗಾಳಿಗೆ ತೂರಿ ಜಿಲ್ಲೆಯಲ್ಲಿ ಅಕ್ರಮಗಳಿಗೆ ಅವಕಾಶ ಕಲ್ಪಿಸುತ್ತಿದ್ದಾರೆ.
ಎಲ್ಲಾ ಜನಾಂಗದವರ ಮತ ಪಡೆದು ಆಯ್ಕೆಯಾಗಿರುವ ಜನಪ್ರತಿನಿಧಿಗಳು ಜಿಲ್ಲಾಧಿಕಾರಿ ಏನೇ ಮಾಡಿದರೂ ಸಹ ಕೈಕಟ್ಟಿಕೊಂಡಿದ್ದಾರೆ ಎಂದು ಮಾಜಿ ಸಂಸದ ಎಸ್.ಮುನಿಸ್ವಾಮಿ ಆರೋಪಿಸಿದರು.
ನಗರದ ಬಿಜೆಪಿ ಕಚೇರಿಯ ಕಾರ್ಯಾಲಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿ ಏಕ ಪಕ್ಷೀಯ ಆಡಳಿತ ನಡೆಸುತ್ತಿರುವ ಜಿಲ್ಲಾಧಿಕಾರಿ ಮುಂದಿನ ಚುನಾವಣೆಗೆ ಸ್ಪರ್ಧಿಸಲು ಸಿದ್ದರಾಗುತ್ತಿದ್ದಾರೆಯೇ ಎಂಬ ಅನುಮಾನಕ್ಕೆ ಎಡೆ ಮಾಡಿ ಕೊಟ್ಟಿದ್ದಾರೆ, ಜಿಲ್ಲಾಧಿಕಾರಿಗಳು ಸರ್ಕಾರದ ಆಸ್ತಿಯನ್ನು ತಮ್ಮ ಜನಾಂಗದ ಸಂಸ್ಥೆಗೆ ಮಾಡಿ ಕೊಡುತ್ತಿದ್ದಾರೆ. ಇದಕ್ಕೆ ವಾಲ್ಮೀಕಿ ಭವನದ ಜಾಗ ಒತ್ತುವರಿಯೇ ಸಾಕ್ಷಿ ಎಂದು ದೂರಿದರು.
ಜಿಲ್ಲಾಧಿಕಾರಿಯ ಅಮಾನತಿಗೆ ಆಗ್ರಹ
ಈ ಹಿಂದೆ ಕಾರ್ಮಿಕ ಇಲಾಖೆಯಲ್ಲಿ ಆಯುಕ್ತರಾಗಿದ್ದ ಸಂದರ್ಭದಲ್ಲೂ ಅನೇಕ ಅಕ್ರಮಗಳನ್ನು ಮಾಡಿರುವ ಆರೋಪಗಳಿವೆ ಇಂತಹವರು ನಮ್ಮ ಜಿಲ್ಲೆಯ ಆಡಳಿತ ನಡೆಸಲು ನಾಲಾಯಕ್ ಆಗಿದ್ದಾರೆ. ಕೊಡಲೇ ಇವರನ್ನು ಅಮಾನತುಪಡಿಸಬೇಕು ಎಂದು ಆಗ್ರಹಿಸಿದರು.ತರಬೇತಿಯಲ್ಲೂ ಪಕ್ಷಪಾತ
ಕೌಶಲ್ಯ ತರಬೇತಿಗಾಗಿ ಒಂದು ಸಾವಿರ ಮಂದಿ ಆಯ್ಕೆಯಲ್ಲಿ950 ಮಂದಿ ಒಂದೇ ಸಮುದಾಯದವರನ್ನು ಆಯ್ಕೆ ಮಾಡುವ ಮೂಲಕ ಡಿ.ಸಿ ಅವರು ಪ್ರಾರಂಭದಲ್ಲಿಯೇ ತಮ್ಮ ಸ್ವಜನ ಪಕ್ಷಪಾತ ಪ್ರದರ್ಶಿಸಿದ್ದರು. ಇಷ್ಟೇ ಅಲ್ಲದೆ ಮುದುವಾಡಿ ಶಾಲೆ, ಅಂತರಗಂಗೆ ಜಾಗವನ್ನು ಮಸೀದಿಗೆ, ದೇವಾಲದ ಜಾಗವನ್ನು ಆಟದ ಮೈದಾನವನ್ನು ಕಲ್ಯಾಣಿ ಜಾಗವನ್ನು ಸೇರಿದಂತೆ ಸಾರ್ವಜನಿಕರ ಆಸ್ತಿ ಏಕಪಕ್ಷಿಯವಾಗಿ ಒಂದು ಸಮುದಾಯದವರಿಗೆ ಮಾಡಿಕೊಟ್ಟಿದ್ದಾರೆ ಎಂದು ಖಂಡಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್, ವಾಲ್ಮೀಕಿ ಸಮುದಾಯದ ಜಿಲ್ಲಾಧ್ಯಕ್ಷ ನರಸಿಂಹಯ್ಯ, ಪದಾಧಿಕಾರಿಗಳಾದ ಎಸ್.ಬಿ.ಮುನಿವೆಂಕಟಪ್ಪ, ವಿಜಯಕುಮಾರ್, ಸಿ.ಡಿ.ರಾಮಚಂದ್ರ ಮತ್ತಿತರರು ಇದ್ದರು.