ಸಾರಾಂಶ
ಕೇರಳದ ತಿರುವನಂತಪುರಂ ಲೋಕಸಭಾ ಕ್ಷೇತ್ರದಲ್ಲಿ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಅವರು ಕಾಂಗ್ರೆಸ್ನ ಶಶಿ ತರೂರ್ ವಿರುದ್ಧ 16 ಸಾವಿರ ಮತಗಳಿಂದ ಸೋತಿದ್ದಾರೆ.
ತಿರುವನಂತಪುರಂ: ಕೇರಳದ ತಿರುವನಂತಪುರಂ ಲೋಕಸಭಾ ಕ್ಷೇತ್ರದಲ್ಲಿ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಅವರು ಕಾಂಗ್ರೆಸ್ನ ಶಶಿ ತರೂರ್ ವಿರುದ್ಧ 16 ಸಾವಿರ ಮತಗಳಿಂದ ಸೋತಿದ್ದಾರೆ. ಆದರೆ ಸೋಲುವ ಮುನ್ನ ಹಲವು ಸುತ್ತುಗಳಲ್ಲಿ ರಾಜೀವ್ ಅವರು ಮುನ್ನಡೆ ಸಾಧಿಸಿ ತುರುಸಿನ ಸ್ಪರ್ಧೆ ನೀಡಿ ಗಮನ ಸೆಳೆದಿದ್ದಾರೆ.
ಮತ ಎಣಿಕೆಯ ಆರಂಭಿಕ ಗಂಟೆಗಳಲ್ಲಿ ಚಂದ್ರಶೇಖರ್ ಮತ್ತು ತರೂರ್ ನಡುವಿನ ಹಣಾಹಣಿ ಪರಸ್ಪರ ಜಿದ್ದಾಜಿದ್ದಿನಿಂದ ಕೂಡಿತ್ತು. ಪರಸ್ಪರ ಕೆಲವು ಸಾವಿರ ಮತಗಳ ಮುನ್ನಡೆಯನ್ನು ಇಬ್ಬರೂ ಸಾಧಿಸುತ್ತಿದ್ದರು. ಆದಾಗ್ಯೂ, ಮಧ್ಯಾಹ್ನದ ವೇಳೆಗೆ, ಚಂದ್ರಶೇಖರ್ 1,77,269 ಮತ್ತು ತರೂರ್ 1,54,309 ಮತಗಳನ್ನು ಪಡೆದಿದ್ದರು. ಸಿಪಿಐನ ಪನ್ನಿಯನ್ ರವೀಂದ್ರನ್ 1,22,258 ಮತಗಳನ್ನು ಪಡೆದು 3ನೇ ಸ್ಥಾನದಲ್ಲಿದ್ದರು. ಆಗ ರಾಜೀವ್ 22,000 ಮತಗಳಿಂದ ಮುನ್ನಡೆ ಸಾಧಿಸಿದ್ದರು.
ಆದರೆ ಮತ ಎಣಿಕೆಯ ಅಂತ್ಯಕ್ಕೆ ತರೂರ್ 3,53,679 ಮತ ಪಡೆದರೆ, ರಾಜೀವ್ 3,37,920 ಮತ ಹಾಗೂ ರವೀಂದ್ರನ್ 2,44,433 ಮತ ಪಡೆದರು. ಈ ಮೂಲಕ ರಾಜೀವ್ರಿಂದ ಸಾಕಷ್ಟು ಆತಂಕದ ಕ್ಷಣ ಎದುರಿಸಿ 4ನೇ ಬಾರಿಗೆ ತರೂರ್ ಆಯ್ಕೆಯಾದರು.
ಈ ಬಗ್ಗೆ ಮಾತನಾಡಿದ ರಾಜೀವ್, ‘ನಾನು ಸೋತಿರಬಹುದು. ಆದರೆ ಬಿಜೆಪಿಗೆ ಮತ ನೀಡುವ ಮತದಾರರ ಸಂಖ್ಯೆ ವೃದ್ಧಿ ಆಗಿರುವುದು ಖುಷಿಯ ವಿಚಾರ’ ಎಂದರು.