ಸಾರಾಂಶ
ನವದೆಹಲಿ: ದೇಶದ ಮಾಹಿತಿ ತಂತ್ರಜ್ಞಾನ (ಐಟಿ) ರಾಜಧಾನಿ ಹಾಗೂ ಭಾರತದ ದೊಡ್ಡ ನಗರಗಳಲ್ಲಿ ಒಂದಾಗಿರುವ ಬೆಂಗಳೂರಿಗೆ ಮೆಟ್ರೋ ನಗರದ ಸ್ಥಾನಮಾನ ನೀಡಲಾಗದು ಎಂದು ಕೇಂದ್ರ ಸರ್ಕಾರ ಸಂಸತ್ತಿಗೆ ತಿಳಿಸಿದೆ.
ಮುಂಗಾರು ಅಧಿವೇಶನದಲ್ಲಿ ಮಾತನಾಡಿದ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ, 1962ರ ಆದಾಯ ತೆರಿಗೆ ಕಾಯ್ದೆಯ ನಿಯಮ 2ಎ ಅಡಿ ಮೆಟ್ರೋ ನಗರಿಗಳಿಗೂ ಹಾಗೂ ಇತರೆ ಪ್ರದೇಶಗಳಿಗೂ ವ್ಯತ್ಯಾಸವಿದೆ. ಹಾಲಿ ಇರುವ ನೀತಿಯಲ್ಲಿ ಯಾವುದೇ ಬದಲಾವಣೆ ಬಯಕೆ ಸರ್ಕಾರಕ್ಕೆ ಇಲ್ಲ ಎಂದು ತಿಳಿಸಿದ್ದಾರೆ.
ಏನಿದರ ಲಾಭ?:
ದೇಶದಲ್ಲಿ ಸದ್ಯ ಮುಂಬೈ, ದೆಹಲಿ, ಕೋಲ್ಕತಾ ಹಾಗೂ ಚೆನ್ನೈ ಮಾತ್ರವೇ ಮೆಟ್ರೋ ನಗರಿ ಸ್ಥಾನಮಾನವನ್ನು ಹೊಂದಿವೆ. ಮೆಟ್ರೋ ನಗರಿಗಳಲ್ಲಿ ವಾಸಿಸುವವರಿಗೆ ಕೆಲವೊಂದು ತೆರಿಗೆ ವಿನಾಯಿತಿಗಳು ಸಿಗುತ್ತವೆ. ಉದಾಹರಣೆಗೆ, ಮನೆ ಬಾಡಿಗೆ ಭತ್ಯೆಗೆ ಆದಾಯ ತೆರಿಗೆ ವಿನಾಯಿತಿ ಇರುತ್ತದೆ. ಸದ್ಯ ಅದನ್ನು ತಡೆ ಹಿಡಿಯಲಾಗಿದೆ.
ಜತೆಗೆ, ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 10(13ಎ) ಅಡಿ ಮೆಟ್ರೋ ನಗರಗಳಲ್ಲಿ ಆದಾಯ ತೆರಿಗೆ ವಿನಾಯಿತಿ ನೀಡುವಾಗ ಶೇ.50ರಷ್ಟು ಸಂಬಳವನ್ನು ಪರಿಗಣಿಸಲಾಗುತ್ತದೆ. ಬೆಂಗಳೂರು ಸೇರಿದಂತೆ ಇತರೆ ನಗರಗಳಲ್ಲಿ ಶೇ.40ರಷ್ಟು ವೇತನ ಪರಿಗಣಿಸಲಾಗುತ್ತದೆ.
ಒಂದು ವೇಳೆ, ಕೇಂದ್ರ ಸರ್ಕಾರ ಬೆಂಗಳೂರಿಗೆ ಮೆಟ್ರೋ ಸ್ಥಾನ ನೀಡಿದ್ದರೆ ಇಂತಹ ತೆರಿಗೆ ವಿನಾಯಿತಿಗಳು ಜನರಿಗೆ ಲಭಿಸುತ್ತಿದ್ದವು. ಆದರೆ ಕೇಂದ್ರ ಸರ್ಕಾರ ಆ ಸ್ಥಾನ ನೀಡಲು ನಿರಾಕರಿಸಿರುವುದರಿಂದ ಬಹು ದಿನಗಳಿಂದ ಮೆಟ್ರೋ ಸ್ಥಾನಕ್ಕೆ ಬೇಡಿಕೆ ಇಡುತ್ತಿರುವ ಬೆಂಗಳೂರಿಗರಿಗೆ ನಿರಾಸೆಯಾಗಿದೆ.
ಕಳೆದ ಕೆಲವು ದಶಕಗಳಿಂದ ಬೆಂಗಳೂರು ನಿರೀಕ್ಷೆಗೂ ಮೀರಿ ಬೆಳವಣಿಗೆ ಹೊಂದಿದೆ. ಪಿಂಚಣಿದಾರರ ಸ್ವರ್ಗ ಎಂದು ಕರೆಯಲ್ಪಡುತ್ತಿದ್ದ ನಗರವನ್ನು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಆದ ಕ್ರಾಂತಿ ಬಹು ಸಂಸ್ಕೃತಿಯ ನೆಲೆವೀಡನ್ನಾಗಿಸಿದೆ.