ಸಾರಾಂಶ
ಮಂಡ್ಯ : ಮಂಡ್ಯ ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ 96,280 ಚದರಡಿ ಅಳತೆಯ 21.32 ಕೋಟಿ ರು.ಮೌಲ್ಯದ 35 ಆಸ್ತಿಗಳನ್ನು ವಕ್ಫ್ಬೋರ್ಡ್ಗೆ ಖಾತೆ ಮಾಡಿ ರಾಜ್ಯ ಸರ್ಕಾರ 2019ರಲ್ಲಿ ಅಧಿಸೂಚನೆ ಹೊರಡಿಸಿರುವುದು ಇದೀಗ ಬೆಳಕಿಗೆ ಬಂದಿದೆ.
ನಗರದ ಗುತ್ತಲು, ವಿವಿ ಬಡಾವಣೆ, ಗಾಂಧಿನಗರ, ಹಾಲಹಳ್ಳಿ, ಮಾರುತಿನಗರ, ಇಂದಿರಾ ಕಾಲೋನಿ, ತಾಲೂಕಿನ ಹಲ್ಲೇಗೆರೆ, ಬೇವಿನಹಳ್ಳಿ, ಹಳುವಾಡಿ, ಕಮ್ಮನಾಯಕನಹಳಿ, ಟಿ.ಮಲ್ಲೀಗೆರೆ, ಬೇವಿನಹಳ್ಳಿ, ಕೊತ್ತತ್ತಿ, ತಗ್ಗಹಳ್ಳಿ ಮುಂತಾದ ಕಡೆಗಳಲ್ಲಿ ಮುಸ್ಲಿಂ ಜಮಾತ್, ಮದರಸ, ಮಸೀದಿ, ಶಾದಿ ಮಹಲ್, ಅರೇಬಿಕ್ ಮದರಸ, ಖಬರಸ್ತಾನ್, ದರ್ಗಾ ಹಾಗೂ ಇನ್ನಿತರ ಉದ್ದೇಶಗಳಿಗೆ ಮೀಸಲಿರಿಸಿ ವಕ್ಫ್ ಬೋರ್ಡ್ಗೆ ಸೇರಿದ ಆಸ್ತಿ ಎಂದು ಘೋಷಣೆ ಮಾಡಲಾಗಿದೆ.
ವಿವಿಧ ಸಂಸ್ಥೆಗಳು ಹಾಗೂ ವ್ಯಕ್ತಿಗಳಿಂದ ಪಡೆದ ಜಮೀನನ್ನು ವಕ್ಫ್ ಹೆಸರಿಗೆ ಖಾತೆ ಮಾಡಿದಂತೆ ದಾಖಲಿಸಲಾಗಿದೆ. ಜಮೀನುಗಳ ಸರ್ವೆ ನಂಬರ್, ಖಾತಾ ನಂಬರ್ಗಳನ್ನು ನಮೂದಿಸಲಾಗಿದ್ದು ಆಸ್ತಿಯ ಮೌಲ್ಯವನ್ನೂ ದಾಖಲಿಸಿರುವುದು ಕಂಡು ಬಂದಿದೆ. ಡಿಸೆಂಬರ್ 11, 2019ರಂದು ಅಧಿಸೂಚನೆ ಹೊರಡಿಸಲಾಗಿದೆ.
ಈ ಮಧ್ಯೆ, ಕರ್ನಾಟಕ ಸರ್ಕಾರ ಹೊರಡಿಸಿರುವ ರಾಜ್ಯಪತ್ರದಲ್ಲಿ ಷುಗರ್ ಟೌನ್ನಲ್ಲಿ 2700 ಚದರಡಿಯ ಮೂರು ಆಸ್ತಿಗಳು ವಕ್ಫ್ ಹೆಸರಿಗೆ ಖಾತೆಯಾಗಿವೆ. ಇದರಲ್ಲಿ ಮೈಷುಗರ್ ಕಾರ್ಖಾನೆಗೆ ಸೇರಿದ ಆಸ್ತಿಯೂ ವಕ್ಫ್ ಖಾತೆಯಾಗಿರುವ ಬಗ್ಗೆ ಹಲವರು ಅನುಮಾನ ವ್ಯಕ್ತಪಡಿಸಿದ್ದಾರೆ.