ಮಗನಿಗೆ ಉದ್ಯೋಗವಿಲ್ಲದಿದ್ದರಿಂದ ಮನನೊಂದು ತಾಯಿ ನೇಣಿಗೆ ಶರಣು...!

KannadaprabhaNewsNetwork |  
Published : Mar 01, 2024, 02:16 AM IST
೨೯ಕೆಎಂಎನ್‌ಡಿ-೬ತಾಯಿ ಆತ್ಮಹತ್ಯೆಗೆ ಶರಣಾಗಿದ್ದರಿಂದ ನೊಂದು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಬೋಧಕೇತರ ಸಿಬ್ಬಂದಿ ಪ್ರಮೋದ್ ಅವರನ್ನು ಶ್ರೀರಂಗಪಟ್ಟಣ ಶಾಸಕ ರಮೇಶ್ ಬಂಡಿಸಿದ್ದೇಗೌಡ ಮಂಡ್ಯ ಮಿಮ್ಸ್ ಆಸ್ಪತ್ರೆಯಲ್ಲಿ ಭೇಟಿಯಾಗಿ ಸಾಂತ್ವನ ಹೇಳಿದರು. | Kannada Prabha

ಸಾರಾಂಶ

ಮೈಸೂರು ವಿವಿಯಲ್ಲಿ ಕೆಲಸ ಮಾಡುತ್ತಿದ್ದವರನ್ನು ತೆಗೆದುಕೊಳ್ಳಲು ಮಂಡ್ಯ ವಿವಿ ನಕಾರ, ಐದು ತಿಂಗಳಿಂದ ಸಂಬಳವಿಲ್ಲದೆ ೩೨ ಸಿಬ್ಬಂದಿ ಪರದಾಟ, ಅತಂತ್ರ ಸ್ಥಿತಿ ಎದುರಿಸುತ್ತಿದ್ದ ೩೨ ಬೋಧಕೇತರ ಸಿಬ್ಬಂದಿ ಕಳೆದೊಂದು ತಿಂಗಳಿಂದ ಪ್ರತಿಭಟನೆಯ ಹಾದಿ ಹಿಡಿದಿದ್ದರು. ಮಂಡ್ಯ ತಾಲೂಕಿನ ಎಲೆಚಾಕನಹಳ್ಳಿ ಗ್ರಾಮದ ಭಾಗ್ಯಮ್ಮ ಆತ್ಮಹತ್ಯೆ ಮಾಡಿಕೊಂಡ ಮಹಿಳೆ.

ಕನ್ನಡಪ್ರಭ ವಾರ್ತೆ ಮಂಡ್ಯಮಂಡ್ಯ ವಿಶ್ವವಿದ್ಯಾಲಯದಲ್ಲಿ ಕರ್ತವ್ಯದಲ್ಲಿ ಮುಂದುವರೆಯಲು ಅವಕಾಶ ನಿರಾಕರಣೆಗೊಳಗಾಗಿ ಪ್ರತಿಭಟನೆಯ ಹಾದಿ ಹಿಡಿದಿದ್ದ ೩೨ ಬೋಧಕೇತರ ಸಿಬ್ಬಂದಿ ಪೈಕಿ ನೌಕರರೊಬ್ಬರ ತಾಯಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಉದ್ಯೋಗ ನಿರಾಕರಣೆಯಿಂದ ನೊಂದಿದ್ದ ಸಿಬ್ಬಂದಿಯೊಬ್ಬರು ತಾಯಿಯ ಸಾವಿನಿಂದ ಜಿಗುಪ್ಸೆಗೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಗುರುವಾರ ನಡೆದಿದೆ.

ತಾಲೂಕಿನ ಎಲೆಚಾಕನಹಳ್ಳಿ ಗ್ರಾಮದ ಭಾಗ್ಯಮ್ಮ ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಉದ್ಯೋಗ ಕಳೆದುಕೊಂಡು ನಿರಾಶನಾಗಿದ್ದ ಈಕೆಯ ಮಗ ಪ್ರಮೋದ್ (೨೪) ಆತ್ಮಹತ್ಯೆಗೆ ಯತ್ನಿಸಿದ ಬೋಧಕೇತರ ಸಿಬ್ಬಂದಿಯಾಗಿದ್ದಾನೆ.

ತೂಬಿನಕೆರೆಯ ಸರ್.ಎಂ.ವಿಶ್ವೇಶ್ವರಯ್ಯ ಸ್ನಾತಕೋತ್ತರ ಕೇಂದ್ರದಲ್ಲಿ ಸಂಚಿತ ವೇತನದ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿದ್ದ ಬೋಧಕೇತರ ಸಿಬ್ಬಂದಿಯನ್ನು ಮಂಡ್ಯ ವಿಶ್ವವಿದ್ಯಾಲಯದಲ್ಲಿ ಕರ್ತವ್ಯದಲ್ಲಿ ಮುಂದುವರೆಸಲು ನಿರಾಕರಿಸಿದ್ದರು. ಅತಂತ್ರ ಸ್ಥಿತಿ ಎದುರಿಸುತ್ತಿದ್ದ ೩೨ ಬೋಧಕೇತರ ಸಿಬ್ಬಂದಿ ಕಳೆದೊಂದು ತಿಂಗಳಿಂದ ಪ್ರತಿಭಟನೆಯ ಹಾದಿ ಹಿಡಿದಿದ್ದರು.

ಈ ಬೋಧಕೇತರ ಸಿಬ್ಬಂದಿಗೆ ಐದಾರು ತಿಂಗಳಿಂದ ಸಂಬಳವಾಗದಿದ್ದರಿಂದ ಸಂಕಷ್ಟದಲ್ಲಿ ಜೀವನ ನಡೆಸುತ್ತಿದ್ದರು. ಪ್ರಮೋದ್ ಅವರ ತಾಯಿ ಭಾಗ್ಯಮ್ಮರಿಗೆ ನಿತ್ಯವೂ ಮಗನ ಉದ್ಯೋಗದ ಬಗ್ಗೆಯೇ ಚಿಂತೆ ಕಾಡಿತ್ತು. ಪ್ರತಿದಿನವೂ ಪ್ರಮೋದ್ ಮನೆಗೆ ಬಂದಾಗ ಉದ್ಯೋಗದ ಬಗ್ಗೆ ವಿಚಾರಿಸುತ್ತಿದ್ದರು. ಪ್ರಮೋದ್ ಕೂಡ ನಿರಾಸೆಯಿಂದಲೇ ತಾಯಿಗೆ ಉತ್ತರ ನೀಡುತ್ತಿದ್ದರೆನ್ನಲಾಗಿದೆ.

ಇದರಿಂದ ಮನನೊಂದ ಭಾಗ್ಯಮ್ಮ ಗುರುವಾರ ಬೆಳಗ್ಗೆ ೫ ಗಂಟೆ ಸಮಯದಲ್ಲಿ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ತಾಯಿಯ ಸಾವಿನಿಂದ ಪ್ರಮೋದ್ ಕೂಡ ಕಂಗಾಲಾಗಿದ್ದರೆನ್ನಲಾಗಿದ್ದು, ತಾಯಿಯ ಅಂತ್ಯಕ್ರಿಯೆ ಮುಗಿಸಿ ಬಂದ ಪ್ರಮೋದ್ ಬೋಧಕೇತರ ಸಿಬ್ಬಂದಿ ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ಬಂದು ನನ್ನ ತಾಯಿಯ ಸಾವಿಗೆ ನಾನೇ ಕಾರಣನಾದೆ ಎಂದು ಕಣ್ಣೀರಿಟ್ಟಿದ್ದನು. ಈ ವೇಳೆ ಎಲ್ಲರೂ ಆತನನ್ನು ಸಮಾಧಾನಪಡಿಸಿ ಮನೆಗೆ ಕಳುಹಿಸಿದ್ದರು. ತಾಯಿಯನ್ನು ಕಳೆದುಕೊಂಡು, ಉದ್ಯೋಗವಿಲ್ಲದ ಪರಿಸ್ಥಿತಿಯನ್ನು ಎದುರಿಸಲಾಗದೆ ಪ್ರಮೋದ್ ಸಂಜೆ ೪.೩೦ರ ಸಮಯದಲ್ಲಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದನು ಎಂದು ಹೇಳಲಾಗಿದೆ. ಕೂಡಲೇ ಕುಟುಂಬದವರು, ಸ್ನೇಹಿತರು ಆತನನ್ನು ಮಂಡ್ಯ ಮಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

ಪ್ರಮೋದ್ ಸರ್.ಎಂ.ವಿಶ್ವೇಶ್ವರಯ್ಯ ಸ್ನಾತಕೋತ್ತರ ಕೇಂದ್ರದಲ್ಲಿ ಕಳೆದ ನಾಲ್ಕು ವರ್ಷದಿಂದ ಸೇವೆ ಸಲ್ಲಿಸುತ್ತಿದ್ದರೆನ್ನಲಾಗಿದೆ. ಕಳೆದ ಐದು ತಿಂಗಳಿಂದ ಸಂಬಳವಿಲ್ಲದ ಕಾರಣ ತೀವ್ರವಾಗಿ ಮನನೊಂದಿದ್ದರು. ಇತರೆ ಬೋಧಕೇತರ ಸಿಬ್ಬಂದಿ ಬಳಿಯೂ ತನ್ನ ಪರಿಸ್ಥಿತಿಯನ್ನು ಹೇಳಿಕೊಂಡು ಗೋಳಿಡುತ್ತಿದ್ದನು ಎಂದು ಗೊತ್ತಾಗಿದೆ.

ಶಾಸಕ ರಮೇಶ್ ಬಂಡಿಸಿದ್ದೇಗೌಡ ಭೇಟಿ:

ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಬೋಧಕೇತರ ಸಿಬ್ಬಂದಿ ಪ್ರಮೋದ್ ಅವರನ್ನು ಶ್ರೀರಂಗಪಟ್ಟಣ ಶಾಸಕ ರಮೇಶ್ ಬಂಡಿಸಿದ್ದೇಗೌಡ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ಕುಟುಂಬದವರಿಗೆ ಸಾಂತ್ವನ ಹೇಳಿದರಲ್ಲದೆ, ಬೋಧಕೇತರ ಸಿಬ್ಬಂದಿ ಯಾರೂ ದುಡುಕಿನ ಪ್ರಯತ್ನ ಮಾಡಬಾರದು. ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸುವ ಭರವಸೆ

ಏನಾಗಿತ್ತು?

ಸುಮಾರು ೪ ವರ್ಷದಿಂದ ೧೬ ವರ್ಷದವರೆಗೆ ಮೈಸೂರು ವಿಶ್ವವಿದ್ಯಾಲಯದ ಅಧೀನದಲ್ಲಿದ್ದ ಮಂಡ್ಯ ತಾಲೂಕು ತೂಬಿನಕೆರೆಯಲ್ಲಿರುವ ಸರ್.ಎಂ.ವಿಶ್ವೇಶ್ವರಯ್ಯ ಸ್ನಾತಕೋತ್ತರ ಕೇಂದ್ರದಲ್ಲಿ ೩೨ ಮಂದಿ ಬೋಧಕೇತರ ಸಿಬ್ಬಂದಿ ಸಂಚಿತ ವೇತನದ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದರು. ಕಚೇರಿ, ಗ್ರಂಥಾಲಯ, ವಸತಿ ನಿಲಯ, ಪ್ರಯೋಗಾಲಯಗಳಲ್ಲಿ ಈ ಸಿಬ್ಬಂದಿ ಕರ್ತವ್ಯದಲ್ಲಿ ತೊಡಗಿದ್ದರು.

ರಾಜ್ಯ ಸರ್ಕಾರದಿಂದ ಮಂಡ್ಯ ವಿಶ್ವವಿದ್ಯಾಲಯ ಘೋಷಣೆಯಾದ ಬಳಿಕ ೨೦೨೩-೨೪ನೇ ಶೈಕ್ಷಣಿಕ ಸಾಲಿನಿಂದ ಸ್ನಾತಕೋತ್ತರ ಕೇಂದ್ರವು ಮೈಸೂರು ವಿಶ್ವವಿದ್ಯಾಲಯದಿಂದ ಮಂಡ್ಯ ವಿವಿ ಸುಪರ್ದಿಗೆ ಬಂದಿತು. ಮೈಸೂರು ವಿಶ್ವ ವಿದ್ಯಾಲಯವು ೩೨ ಬೋಧಕೇತರ ಸಿಬ್ಬಂದಿ ಪಟ್ಟಿಯನ್ನು ಸರ್ಕಾರಕ್ಕೆ ಸಲ್ಲಿಸಿ ಮಂಡ್ಯ ವಿಶ್ವವಿದ್ಯಾಲಯದಲ್ಲಿ ಇವರನ್ನು ಮುಂದುವರೆಸುವಂತೆ ಕೋರಿರುತ್ತಾರೆ.

ಆದರೆ, ಮಂಡ್ಯ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಸೆಪ್ಟೆಂಬರ್-೨೦೨೩ರ ಮಾಹೆಯಿಂದ ಕೇಂದ್ರವನ್ನು ಹಸ್ತಾಂತರಿಸಿಕೊಂಡ ನಂತರ ೨೯ ಜನವರಿ ೨೦೨೪ರಂದು ಕೇಂದ್ರಕ್ಕೆ ಬೋಧಕೇತರ ಸಿಬ್ಬಂದಿಯ ಅವಶ್ಯಕತೆ ಇಲ್ಲವೆಂದು ಏಕಾಏಕಿ ಕೇಂದ್ರದಿಂದ ಅವರನ್ನು ಹೊರ ಹಾಕಿದ್ದರು. ವಿಶ್ವವಿದ್ಯಾಲಯದ ಕೆಲಸಗಳಿಗೆ ಮತ್ತು ವಿದ್ಯಾರ್ಥಿಗಳಿಗೆ ತೊಂದರೆಯಾಗಬಾರದೆಂಬ ದೃಷ್ಟಿಯಿಂದ ಸೆಪ್ಟೆಂಬರ್-೨೦೨೩ರಿಂದ ಇಲ್ಲಿಯವರೆಗೆ ವೇತನವಿಲ್ಲದೇ, ಕೆಲಸವನ್ನು ನಿರ್ವಹಿಸುತ್ತಾ ಬಂದಿದ್ದರು. ಮಂಡ್ಯ ವಿಶ್ವ ವಿದ್ಯಾಲಯದ ಕ್ರಮವನ್ನು ಖಂಡಿಸಿ ಕಳೆದೊಂದು ತಿಂಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಟೆಕ್ಕಿ ಮನೇಲಿ 3 ಕೋಟಿ ವಜ್ರ ದೋಚಿದವ ಅಂದರ್‌
ಮಹಿಳೆ ಕತ್ತಿನಲ್ಲಿದ್ದ ಚಿನ್ನದ ಸರ ಕಿತ್ತು ಪರಾರಿ: ಐವರು ಆರೋಪಿಗಳ ಬಂಧನ