ಕ್ರಿಪ್ಟೋ ಕರೆನ್ಸಿಗೆ ಹೂಡಿಕೆ ನೆಪದಲ್ಲಿ 4.50 ಲಕ್ಷ ಪಡೆದು ವಂಚನೆ: ದೂರು

KannadaprabhaNewsNetwork |  
Published : Apr 10, 2025, 02:00 AM IST
ಕ್ರಿಪ್ಟೋ | Kannada Prabha

ಸಾರಾಂಶ

ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ನೆಪದಲ್ಲಿ ₹4.50 ಲಕ್ಷ ಪಡೆದು ವಂಚಿಸಿದ ಆರೋಪದಡಿ ಇಬ್ಬರ ವಿರುದ್ಧ ವಿಧಾನಸೌಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ನೆಪದಲ್ಲಿ ₹4.50 ಲಕ್ಷ ಪಡೆದು ವಂಚಿಸಿದ ಆರೋಪದಡಿ ಇಬ್ಬರ ವಿರುದ್ಧ ವಿಧಾನಸೌಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಂದಿನಿ ಲೇಔಟ್‌ ಕಂಠೀರವನಗರ ನಿವಾಸಿ ಮಂಜುನಾಥ್‌ ವಂಚನೆಗೆ ಒಳಗಾದವರು. ಇವರು ನೀಡಿದ ದೂರಿನ ಮೇರೆಗೆ ಸುಲ್ತಾನ್‌ ನಿಯಾಜ್‌ ಮತ್ತು ಅಜ್ಮಲ್‌ ವಿರುದ್ಧ ವಂಚನೆ ಮತ್ತು ನಂಬಿಕೆ ದ್ರೋಹ ಆರೋಪದಡಿ ಎಫ್‌ಐಆರ್‌ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏನಿದು ಪ್ರಕರಣ?:

ದೂರುದಾರ ಮಂಜುನಾಥ್‌ಗೆ 15 ದಿನದ ಹಿಂದೆ ಫೇಸ್‌ಬುಕ್‌ನಲ್ಲಿ ಸುಲ್ತಾನ್‌ ನಿಯಾಜ್‌ ಪರಿಚಯವಾಗಿದೆ. ಈ ವೇಳೆ ಆತ ತಾನು ದುಬೈನಲ್ಲಿ ಇರುವುದಾಗಿ ಹೇಳಿದ್ದಾನೆ. ಕ್ರಿಪ್ಟೋ ಕರೆನ್ಸಿ ಹೂಡಿಕೆ ಬಗ್ಗೆ ಮಾಹಿತಿ ನೀಡಿದ್ದು, ಹೂಡಿಕೆ ಮಾಡಿದರೆ ಅಧಿಕ ಲಾಭ ಬರಲಿದೆ ಎಂದು ಪ್ರೇರೇಪಿಸಿದ್ದಾನೆ. ನಗದು ರೂಪದಲ್ಲಿ ಹೂಡಿಕೆ ಮಾಡುವಂತೆ ಹೇಳಿದ್ದಾನೆ. ಈತನ ಮಾತು ನಂಬಿದ ಮಂಜುನಾಥ್‌ ಮತ್ತು ಅವರ ಸ್ನೇಹಿತ ಸುನೀಲ್‌ ಹೂಡಿಕೆ ಮಾಡಲು ಒಪ್ಪಿಕೊಂಡಿದ್ದಾರೆ.

ಪಾರ್ಕಿಂಗ್‌ ಸ್ಥಳದಲ್ಲಿ ಹಣ ಪಡೆದ:

ಅದರಂತೆ ಏ.4ರಂದು ಕನ್ನಿಂಗ್‌ಹ್ಯಾಂ ರಸ್ತೆಯ ಕಾಫಿ ಡೇಗೆ ನಗದು ಹಣ ತರುವಂತೆ ಸುಲ್ತಾನ್‌ ಸೂಚಿಸಿದ್ದಾನೆ. ತನ್ನ ಸ್ನೇಹಿತ ಅಜ್ಮಲ್‌ ಅಲ್ಲಿಗೆ ಬಂದು ಹಣವನ್ನು ಪಡೆದುಕೊಳ್ಳಲಿದ್ದಾನೆ ಎಂದು ಹೇಳಿದ್ದಾನೆ. ಅದರಂತೆ ಮಂಜುನಾಥ ಸ್ನೇಹಿತರಾದ ಸುನೀಲ್‌ ಹಾಗೂ ಸತೀಶ್‌ ಜತೆಗೆ ಸಂಜೆ 6.30ಕ್ಕೆ ಕಾಫಿ ಡೇ ಪಾರ್ಕಿಂಗ್‌ ಸ್ಥಳಕ್ಕೆ ತೆರಳಿದ್ದಾರೆ. ಬಳಿಕ ಅಜ್ಮಲ್‌ ಎಂಬಾತ ಜತೆಗೆ ಮಾತುಕತೆ ನಡೆಸಿ ಒಟ್ಟು ₹4.50 ಲಕ್ಷ ನಗದು ನೀಡಿದ್ದಾರೆ.

ಬಳಿಕ ಮಂಜುನಾಥ್‌ ಅವರು ಕರೆ ಮಾಡಿದಾಗ ಸುಲ್ತಾನ್‌ ನಿಯಾಜ್‌ ಸಂಪರ್ಕಕ್ಕೆ ಸಿಕ್ಕಿಲ್ಲ. ಹಲವು ಬಾರಿ ಕರೆ ಮಾಡಿದರೂ ಕರೆ ಸ್ವೀಕರಿಸಿಲ್ಲ. ಹೀಗಾಗಿ ಮಂಜುನಾಥ್‌ಗೆ ತಾನು ವಂಚನೆಗೆ ಒಳಗಾಗಿರುವುದು ಅರಿವಿಗೆ ಬಂದಿದೆ. ಈ ಸಂಬಂಧ ವಿಧಾನಸೌಧ ಪೊಲೀಸ್‌ ಠಾಣೆಗೆ ದೂರು ನೀಡಿದ್ದು, ಹೂಡಿಕೆ ನೆಪದಲ್ಲಿ ಹಣ ಪಡೆದು ವಂಚಿಸಿದ ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

*15 ದಿನದ ಹಿಂದೆ ಫೇಸ್‌ಬುಕ್‌ನಲ್ಲಿ ವ್ಯಕ್ತಿಯೊಬ್ಬನ ಪರಿಚಯ*ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಿದರೆ ಲಾಭದ ಆಮಿಷ*ನಗದು ಕೊಡುವಂತೆ ಪುಸಲಾಯಿಸಿದ ಫೇಸ್ಬುಕ್‌ ಗೆಳೆಯ*ಬೇರೊಬ್ಬನ ಮೂಲಕ ಹಣ ಪಡೆದು ಬಳಿಕ ಸಂಪರ್ಕ ಕಡಿತ

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಷೇರುಪೇಟೆಯಲ್ಲಿ ಹೂಡಿಕೆ ನೆಪದಲ್ಲಿ ಉದ್ಯಮಿಗೆ ₹8.3 ಕೋಟಿ ಧೋಖಾ
ಪಾದಚಾರಿಗಳಿಗೆ ಬೆಕ್ ಗುದ್ದಿಸಿ ಕೆಳಗೆ ಬಿದ್ದು ಅಪ್ರಾಪ್ತ ಸವಾರ ಸಾವು